ಯಡಿಯೂರಪ್ಪ ಆಸ್ಪತ್ರೆಯಲ್ಲಿದ್ದಾರೆ,‌ ರಾಜ್ಯ ಬಿಜೆಪಿ ಸರಕಾರ ಐಸಿಯುನಲ್ಲಿದೆ: ಸಿದ್ದರಾಮಯ್ಯ

Update: 2021-04-19 11:01 GMT

ಬೆಂಗಳೂರು, ಎ.19: ಕೊರೋನದಿಂದ ರಕ್ಷಿಸಿಕೊಳ್ಳಲು ಜನತೆಗೆ ನಿಯಮ-ನಿರ್ಬಂಧ-ಮಾರ್ಗಸೂಚಿಗಳ ಉಪದೇಶ ಮಾಡುವುದರ ಜೊತೆಗೆ, ಕೊರೋನ ಎದುರಿಸಲು ಬಿಜೆಪಿ ಸರಕಾರ ಏನು‌ ಮಾಡಿದೆ‌ ಎನ್ನುವುದನ್ನು ಜನತೆಗೆ ತಿಳಿಸಲು ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೊರೋನ ಎರಡನೇ ಅಲೆ ದಿನದಿಂದ ದಿನಕ್ಕೆ ಮಾರಣಾಂತಿಕವಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಲಿಕ್ಕಾಗದ ರಾಜ್ಯ ಬಿಜೆಪಿ ಸರಕಾರ ಜನತೆಯ ಮುಂದೆ ಬೆತ್ತಲಾಗುತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳುವ ವಿಫಲ ಪ್ರಯತ್ನದಲ್ಲಿ ತೊಡಗಿದೆ. ಕೊರೋನ ಸೋಂಕಿತರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ,‌ ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕ ತೆರುವ ಶಕ್ತಿ ಜನರಿಗೆ ಇಲ್ಲ. ಆಮ್ಲಜನಕದ ದಾಸ್ತಾನಿಲ್ಲ,‌ ರೆಮಿಡಿಸಿವಿರ್ ನಂತಹ ಜೀವರಕ್ಷಕ ಔಷಧಿಯ‌ ಕೊರತೆ ಇದೆ. ಸಿಎಂ ಯಡಿಯೂರಪ್ಪ ಆಸ್ಪತ್ರೆಯಲ್ಲಿದ್ದಾರೆ,‌ ರಾಜ್ಯ ಬಿಜೆಪಿ ಸರಕಾರ ಐಸಿಯುನಲ್ಲಿದೆ ಎಂದು ಟೀಕಿಸಿದ್ದಾರೆ.

'ವರ್ಷದ ಹಿಂದೆ ಮೊದಲ ಬಾರಿ‌ ಕೊರೋನ ದಾಳಿ ಇಟ್ಟಾಗ ಅದು ಅನಿರೀಕ್ಷಿತ ಆಘಾತ. ಒಂದು ವರ್ಷದ ಅನುಭವದಿಂದ ರಾಜ್ಯ ಸರಕಾರ ಕೊರೋನ ಎದುರಿಸಲು ತನ್ನನ್ನು ಇನ್ನಷ್ಟು ಸಜ್ಜುಗೊಳಿಸಬೇಕಾಗಿತ್ತು. ಕೊರೋನವನ್ನೂ‌ ತನ್ನ ಭ್ರಷ್ಟತೆಗೆ ಬಳಸಿಕೊಂಡ ಬಿಜೆಪಿ ಸರಕಾರ ಈಗ ಕೈಚೆಲ್ಲಿ ಕೂತಿದೆ. ರಾಜ್ಯ ಬಿಜೆಪಿ ಸರಕಾರದ ಮಾರ್ಗಸೂಚಿಗಳನ್ನು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಉಲ್ಲಂಘಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಸಚಿವರ ಮೇಲಾಗಲಿ, ಶಾಸಕರ ಮೇಲಾಗಲಿ ನಿಯಂತ್ರಣವೇ ಇಲ್ಲದೆ ನಿರ್ಮಾಣಗೊಂಡಿರುವ‌ ಅರಾಜಕತೆಯೇ ಇಂದಿನ ದುಸ್ಥಿತಿಗೆ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News