ಮೈಲಾನ್ ರೆಮ್‍ಡೆಸಿವಿರ್ ಉತ್ಪಾದಕ ಘಟಕಕ್ಕೆ ಕೇಂದ್ರ ಸಚಿವ ಸದಾನಂದ ಗೌಡ ಭೇಟಿ

Update: 2021-04-23 17:24 GMT

ಬೆಂಗಳೂರು, ಎ.23: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ನಡೆಸಿದ ಪ್ರಯತ್ನದ ಫಲವಾಗಿ ಮೈಲಾನ್ ಫಾರ್ಮಾ ಕಂಪನಿಯು ರಾಜ್ಯಕ್ಕೆ ಹೆಚ್ಚುವರಿ ರೆಮ್‍ಡೆಸಿವಿರ್ ಚುಚ್ಚುಮದ್ದು ಒದಗಿಸಲು ಒಪ್ಪಿಕೊಂಡಿದೆ.

ಕೊರೋನ ಚಿಕಿತ್ಸೆಯಲ್ಲಿ ಬಳಸುವ ರೆಮ್‍ಡೆಸಿವಿರ್ ಉತ್ಪಾದನೆ ಮತ್ತು ಪೂರೈಕೆ ಏರುಪೇರಾದ ಕಾರಣ ಕಳೆದ ವಾರದಿಂದ ಕೇಂದ್ರ ಸರಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಫಾರ್ಮಾ ಕಂಪನಿಗಳು ತಮ್ಮ ರೆಮ್‍ಡೆಸಿವಿರ್ ಉತ್ಪಾದನೆಯಲ್ಲಿ ಶೇ.70ರಷ್ಟು ಕೇಂದ್ರ ಸರಕಾರವು ಸೂಚಿಸುವ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ. ಇನ್ನುಳಿದ ಶೇ.30ರಷ್ಟು ಉತ್ಪಾದನೆಯ ವಿತರಣೆಯನ್ನು ಕಂಪನಿಗಳ ವಿವೇಚನೆಗೆ ಬಿಡಲಾಗಿದೆ.

ಮೊನ್ನೆ ಬುಧವಾರ ಕೇಂದ್ರವು ಕರ್ನಾಟಕಕ್ಕೆ ಎಪ್ರಿಲ್ 30ರವರೆಗಿನ ಬಳಕೆಗಾಗಿ 25352 ರೆಮ್‍ಡೆಸಿವಿರ್ ವೈಯಲ್ಸ್ ಹಂಚಿಕೆ ಮಾಡಿತ್ತು. ಆದರೆ ರಾಜ್ಯವು ಹೆಚ್ಚುವರಿ ರೆಮ್‍ಡೆಸಿವಿರ್ ವೈಯಲ್ಸ್ ಗೆ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಔಷಧ ಇಲಾಖೆಯನ್ನೂ ನಿರ್ವಹಿಸುವ ಸದಾನಂದ ಗೌಡ ಮಧ್ಯಪ್ರವೇಶಿಸಬೇಕಾಗಿ ಬಂತು. ಹೀಗಾಗಿ ರಾಜ್ಯಕ್ಕೆ ನಿನ್ನೆ ಗುರುವಾರ ಹೆಚ್ಚುವರಿಯಾಗಿ 25,000 ರೆಮ್‍ಡೆಸಿವಿರ್ ವೈಯಲ್ಸ್ ಹಂಚಿಕೆಯಾಯಿತು. ಈ ವಾರದ ಬಳಕೆಗಾಗಿ ರಾಜ್ಯಕ್ಕೆ ಹಂಚಿಕೆಯಾದ ಒಟ್ಟು 50,352 ವೈಯಲ್ಸ್ ರೆಮ್‍ಡೆಸಿವಿರ್‍ನಲ್ಲಿ ಮುಕ್ಕಾಲು ಭಾಗವನ್ನು ಮೈಲಾನ್ ಕಂಪನಿಯೇ ಪೂರೈಸಬೇಕಿದೆ.

ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಮೈಲಾನ್ ಕಂಪನಿ ಔಷಧ ಉತ್ಪಾದನಾ ಘಟಕಕ್ಕೆ ಇಂದು ಭೇಟಿ ನೀಡಿದ ಸದಾನಂದ ಗೌಡ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಬೊಮ್ಜೈ ಮತ್ತವರ ಸಹಪಾಠಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ರಾಜ್ಯಕ್ಕೆ ಇಂದು 15000 ವೈಯಲ್ಸ್ ರೆಮ್‍ಡೆಸಿವಿರ್ ಬಿಡುಗಡೆ ಆಗಿದೆ. ಮೈಲಾನ್ ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕಂಪನಿಯು ವಿವೇಚನಾಧೀಕಾರದಲ್ಲಿ ಬರುವ ಶೇ.30ರಷ್ಟು ಉತ್ಪಾದನೆಯಲ್ಲಿ ರಾಜ್ಯಕ್ಕೆ ಹಚ್ಚುವರಿ ರೆಮ್‍ಡೆಸಿವಿರ್ ವೈಯಲ್ಸ್ ಒದಗಿಸಲು ಒಪ್ಪಿಕೊಂಡಿದೆ ಎಂದರು.

ಅದೇ ರೀತಿ ಅಮೆರಿಕದ ಗಿಲೀಡ್ ಸೈಯನ್ಸಸ್ ಕಂಪನಿಯಿಂದ ರೆಮ್ಡಿಸಿವಿರ್ ಉತ್ಪಾದನೆಯ ಲೈಸನ್ಸ್ ಪಡೆದಿರುವ ಭಾರತದ ಇತರ ಫಾರ್ಮಾ ಕಂಪನಿಗಳ ಜೊತೆಗೂ ಹೆಚ್ಚುವರಿ ಚುಚ್ಚುಮದ್ದು ಪೂರೈಸುವ ಬಗ್ಗೆ ಮಾತುಕತೆ ನಡೆದಿದೆ. ಹಾಗಾಗಿ ಇನ್ನೊಂದು ವಾರದಲ್ಲಿ ಈ ಚುಚ್ಚುಮದ್ದು ವಿಫುಲವಾಗಿ ಲಭ್ಯವಾಗಲಿದೆ. ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಪ್ರಶ್ನೆಯೊಂದಿಗೆ ಉತ್ತರಿಸಿದ ಅವರು, ರೆಮ್‍ಡೆಸಿವಿರ್ ಕಾಳಸಂತೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ. ಕಳೆದ ಹಂಗಾಮಿನಲ್ಲಿ ರಸಗೊಬ್ಬರ ಕಾಳಸಂತೆ ಮಾಡಿದ ನೂರಕ್ಕೂ ಹೆಚ್ಚು ವಿತರಕರ ಲೈಸನ್ಸ್ ರದ್ದುಗೊಳಿಸಲಾಗಿತ್ತು. ಈ ವಿಚಾರವಾಗಿಯೂ ಕಠಿಣ ಕ್ರಮ ಜಾರಿಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ವೈ.ಎನ್.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News