ಲಸಿಕೆ ವಿತರಣೆಯಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆ: ಕಾಂಗ್ರೆಸ್-ಮಿತ್ರಪಕ್ಷಗಳ ಆಡಳಿತ ಇರುವ ರಾಜ್ಯಗಳ ಆರೋಪ

Update: 2021-04-25 18:39 GMT

ಹೊಸದಿಲ್ಲಿ, ಎ. 25: ಕೇಂದ್ರ ಸರಕಾರ ಉತ್ಪಾದಕರಿಂದ ಲಸಿಕೆಯ ದಾಸ್ತಾನನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷ ಆಡಳಿತ ಇರುವ ನಾಲ್ಕು ರಾಜ್ಯಗಳು ರವಿವಾರ ಆರೋಪಿಸಿವೆ.

ಅಲ್ಲದೆ, 18ರಿಂದ 45 ನಡುವಿನ ಪ್ರಾಯದವರಿಗೆ ಮೇ 1ರಿಂದ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸುವ ಬಗ್ಗೆ ಸಂದೇಹ ವ್ಯಕ್ತಪಡಿಸಿವೆ. ಕೇಂದ್ರ ಸರಕಾರ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅದು, ಎಲ್ಲಾ ವಯಸ್ಕರಿಗೆ ಉಚಿತ ಲಸಿಕೆ ನೀಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ವರ್ಚುವಲ್ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚತ್ತೀಸ್ಗಢ, ರಾಜಸ್ಥಾನ, ಪಂಜಾಬ್ ಹಾಗೂ ಜಾರ್ಖಂಡ್ (ಕಾಂಗ್ರೆಸ್-ಜೆಎಂಎಂ ಮೈತ್ರಿ)ನ ಆರೋಗ್ಯ ಸಚಿವರು, ಕೇಂದ್ರ ಸರಕಾರ ಈಗಾಗಲೇ ಲಸಿಕೆ ದಾಸ್ತಾನನ್ನು ತನ ಸುಪರ್ದಿಗೆ ತೆಗೆದುಕೊಂಡಿದೆ. ನಮಗೆ ಲಸಿಕೆ ಲಭ್ಯವಾಗದೇ ಇದ್ದರೆ ವಯಸ್ಕರಿಗೆ ನೀಡುವುದು ಹೇಗೆ? ಎಂದು ಪ್ರಶ್ನಿಸಿದೆ.

ಮೇ 1ರ ಮುಂದಿನ ಹಂತದ ಲಸಿಕೆ ನೀಡಿಕೆ ಪ್ರಕ್ರಿಯೆಗೆ ನಾವು ಸಿದ್ಧರಾಗಿದ್ದೆವು. ಆದರೆ, ಲಸಿಕೆ ಡೋಸ್ ಅನ್ನು ಒದಗಿಸಲು ಸಾಧ್ಯವಿಲ್ಲ ಎಂದು ಉತ್ಪಾದಕರು ತಿಳಿಸಿದ್ದಾರೆ ಎಂದಿದ್ದಾರೆ.

ಮೇ 15ರ ವರೆಗೆ ಲಸಿಕೆ ಪೂರೈಸಲು ಸಾಧ್ಯವಾಗದು ಎಂದು ಸಿರಮ್ ಇನ್ಸ್ಟಿಟ್ಯೂಟ್ ಹೇಳಿರುವುದರಿಂದ ನಾವು 18ರಿಂದ 45 ವರ್ಷದ ನಡುವಿನ ನಾಗರಿಕರಿಗೆ ಲಸಿಕೆ ಹಾಕುವುದು ಹೇಗೆ ? ಎಂದು ರಾಜಸ್ಥಾನದ ಆರೋಗ ಸಚಿವ ರಘು ಶರ್ಮಾ ಹೇಳಿದ್ದಾರೆ.

ಲಸಿಕೆ ಲಭ್ಯವಾಗದೇ ಇದ್ದರೆ ಲಸಿಕೆ ನೀಡಲು ಯಾವುದೇ ದಾರಿ ಇಲ್ಲ. ಲಸಿಕೆ ಪೂರೈಸಿದರೆ, ನಾವು ಹಾಕಲು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಕೇಂದ್ರ ಸರಕಾರ ಲಸಿಕೆ ಹಾಗೂ ಜೀವರಕ್ಷಕ ಔಷಧಗಳನ್ನು ಪೂರೈಕೆ ಮಾಡಬೇಕು ಎಂದು ಪಂಜಾಬ್ ಸಚಿವ ಬಲ್ಬೀರ್ ಸಿಂಗ್ ಸಿಧು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News