ಆಸ್ಪತ್ರೆಗಳಿಗೆ ಸಿಗದ ರೆಮ್‍ಡೆಸಿವಿರ್ ಬಿಜೆಪಿ ಸಂಸದರಿಗೆ ಸಿಕ್ಕಿದ್ದು ಹೇಗೆ?: ಡಿ.ಕೆ ಶಿವಕುಮಾರ್ ಪ್ರಶ್ನೆ

Update: 2021-05-01 12:33 GMT

ಬೆಂಗಳೂರು, ಮೇ 1: ‘ರಾಜ್ಯದಲ್ಲಿ ಕೊರೋನ ಚಿಕಿತ್ಸೆಗೆ ಅಗತ್ಯವಾದ ರೆಮ್‍ಡೆಸಿವಿರ್ ಚುಚ್ಚುಮದ್ದಿಗೆ ಅಭಾವ ಹೆಚ್ಚಾಗಿದೆ. ಆಸ್ಪತ್ರೆಗಳು ಇಂಜಕ್ಷನ್ ಪೂರೈಸಿ ಎಂದು ಗೋಗರೆದರೂ ಸರಬರಾಜು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು, ಸಂಸದರಿಗೆ ಬಾಕ್ಸ್ ಗಟ್ಟಲೆ ಔಷಧವನ್ನು ಕೊಟ್ಟು ಕಳುಹಿಸಲಾಗುತ್ತಿದೆ. ಇದು ಹೇಗೆ ಸಾಧ್ಯ? ಇದು ಸರಿಯೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ಯೋಧರ ನೇಮಕ ಅಭಿಯಾನ ಹಾಗೂ ಕೊರೋನ ಸೋಂಕಿತರ ನೆರವಿಗೆ ಆಂಬುಲೆನ್ಸ್ ಸೌಲಭ್ಯಕ್ಕೆ ಚಾಲನೆ ಕೊಟ್ಟ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನನಗೆ ಛತ್ತೀಸಘಡ, ರಾಜಸ್ಥಾನ ಮುಖ್ಯಮಂತ್ರಿಗಳು ಕರೆ ಮಾಡಿ, ನಾವು ನಿಮ್ಮ ರಾಜ್ಯದ ಡಿಎಚ್ಒಗಳಿಗೆ ಔಷಧಿಗಳನ್ನು ಪೂರೈಸಲು ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ತಡೆ ಹಿಡಿದಿದೆ ಎಂದು ಹೇಳುತ್ತಿದ್ದಾರೆ. ನಾನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಕೇಳಿದೆ. ಅವರು ಏನನ್ನೂ ಹೇಳದೇ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಆದರೆ ಮತ್ತೊಂದು ಕಡೆ ಬಿಜೆಪಿ ನಾಯಕರುಗಳಿಗೆ ಈ ಔಷಧವನ್ನು ಡಬ್ಬಗಳಲ್ಲಿ ತುಂಬಿ, ತುಂಬಿ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು, ಸಂಸದರು ಆಸ್ಪತ್ರೆಗಳ ಮಾಲಕರಾ? ಡ್ರಗ್ ಕಂಟ್ರೋಲರ್ ಗಳಾ? ಔಷಧಿ ಪಡೆಯಲು ಪರವಾನಿಗೆ ಪಡೆದಿದ್ದಾರಾ? ಆ ನಾಯಕರು ಔಷಧಿ ತೆಗೆದುಕೊಂಡು ಜನರಿಗೆ ನೀಡುತ್ತಿರಬಹುದು. ಅದರ ಬಗ್ಗೆ ನಾನು ತಕರಾರು ಮಾಡುವುದಿಲ್ಲ. ಆದರೆ ಯಾವ ಕಾನೂನಿನ ಅಡಿಯಲ್ಲಿ ಅವರು ದೊಡ್ಡ ಪ್ರಮಾಣದಲ್ಲಿ ಔಷಧವನ್ನು ಕೊಂಡೊಯ್ಯಲು ಅನುಮತಿ ನೀಡಲಾಯಿತು? ಯಡಿಯೂರಪ್ಪನವರೇ ನಿಮ್ಮ ಆಡಳಿತದಲ್ಲಿ ಏನೇನಾಗುತ್ತಿದೆ? ಪ್ರಧಾನಮಂತ್ರಿಗಳು, ಕೇಂದ್ರ ಆರೋಗ್ಯ ಸಚಿವರು ಈ ಬಗ್ಗೆ ಗಮನ ಹರಿಸಬೇಕಿದೆ. 

ಬಿಜೆಪಿ ನಾಯಕರು, ಸಂಸದರು ಈ ಔಷಧವನ್ನು ತೆಗೆದುಕೊಂಡು ಹೋಗಲು ಅನುಮತಿ ಕೊಟ್ಟಿದ್ದು ಯಾರು? ಇದು ದೇಶದ ಅತಿದೊಡ್ಡ ಅಪರಾಧ. ಯಾವುದೇ ಸಚಿವ, ಶಾಸಕ ತಮ್ಮ ಕಚೇರಿ ಪ್ರಭಾವ ಬಳಿಸಿ ಔಷಧಿ ಪಡೆಯುವಂತಿಲ್ಲ ಎಂದು ತಿಳಿಸಿದರು.

ಈ ಔಷಧ ಪೂರೈಸಿ ಎಂದು ನಾವು ಕೇಳಿದಾಗ, ಆಸ್ಪತ್ರೆಗಳು ಕೇಳಿದಾಗ ಕೇವಲ ಡ್ರಗ್ ಪರವಾನಗಿ ಇರುವವರಿಗೆ ಮಾತ್ರ ಇದನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಈಗ ಸಂಸದರು ಪೆಟ್ಟಿಗೆಗಟ್ಟಲೆ ಔಷಧಿ ಹೇಗೆ ತಂದಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು, ಪ್ರಧಾನಿಗಳು ಉತ್ತರಿಸಬೇಕು? ಇದಕ್ಕೆ ಒಂದು ಪ್ರಕ್ರಿಯೆ ಇದೆ. ಇದು ನಿಮ್ಮ ಮನೆ ಆಸ್ತಿಯಲ್ಲ. ಬಡವರಿಗೆ ಔಷಧಿ ಸಿಗಲ್ಲ, ರಾಜಕಾರಣಿಗಳ ಆಪ್ತರಿಗೆ ಮಾತ್ರ ಸಿಗುತ್ತದೆ ಎಂದರೆ ಏನರ್ಥ? ಕೊರೋನ ಲಸಿಕೆ ಪಡೆಯಲು ಆನ್ ಲೈನ್ ನೋಂದಣಿ ಮಾಡಬೇಕು ಎಂದು ಹೇಳುತ್ತೀರಾ. ನಮ್ಮ ಹಳ್ಳಿ ಜನ ಹೇಗೆ ಆನ್ ಲೈನ್ ನೋಂದಣಿ ಮಾಡಿಸುತ್ತಾರೆ? ಅದು ಹೇಗೆ ಸಾಧ್ಯ. ಈ ಲಸಿಕೆಯನ್ನು ಪೊಲೀಯೋ ಮಾದರಿಯಲ್ಲಿ ಮನೆ, ಮನೆ ಬಾಗಿಲಿಗೆ ಹೋಗಿ ನೀಡಬೇಕು ಎಂದು ಹೇಳಿದರು.

ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಕಾಂಗ್ರೆಸ್

ನಮ್ಮ ಚಿಂತನೆ ಹಾಗೂ ಎಐಸಿಸಿ ಆದೇಶದಂತೆ, ಕೊರೋನ 2ನೇ ಅಲೆ ಸಂದರ್ಭದಲ್ಲಿ ಕಾಂಗ್ರೆಸ್ ಜನರ ನಡುವೆ ಇರಲು ಸಂಕಲ್ಪ ಮಾಡಿದೆ. ಜನರಿಗೆ ನಾವು ನೆರವು ನೀಡುವುದರ ಜತೆಗೆ ಸರ್ಕಾರಕ್ಕೆ ಅಗತ್ಯ ಸಹಕಾರ, ಸಲಹೆಗಳನ್ನು ನೀಡುತ್ತಿದ್ದೇವೆ. ಮಾಧ್ಯಮಗಳು ಪ್ರಾಣವನ್ನು ಪಣಕ್ಕಿಟ್ಟು ಬದ್ಧತೆಯಿಂದ ಸೇವೆ ಸಲ್ಲಿಸುತ್ತಿವೆ. ಇಂದು ಆಂಬುಲೆನ್ಸ್ ಉದ್ಘಾಟನೆ ಮಾಡಿದ್ದು, ನಿನ್ನೆ ಇದನ್ನು ಪ್ರಾಯೋಗಿಕವಾಗಿ ನಾನೇ ಖುದ್ದು ಪರೀಕ್ಷೆ ಮಾಡಿದ್ದೇನೆ. ಕರೆ ಮಾಡಿದ 40 ನಿಮಿಷಕ್ಕೇ ನನ್ನ ಮನೆ ಬಾಗಿಲಿಗೆ ಆಂಬುಲೆನ್ಸ್ ಬಂದಿತ್ತು. 

ಈಗಾಗಲೇ ನಾವು ಕೋವಿಡ್ ವಿಚಾರದಲ್ಲಿ ಜನರ ನೆರವಿಗೆ ಧಾವಿಸಿದ್ದೇವೆ. ಸುಮಾರು 10 ಆಂಬುಲೆನ್ಸ್ ಸೇವೆಯನ್ನು ಕೆಪಿಸಿಸಿ ಮುಖ್ಯ ಕಚೇರಿಯಿಂದ ಆರಂಭಿಸುತ್ತಿದ್ದೇವೆ. ರಾಜ್ಯದ ಇತರೆ ಜಿಲ್ಲಾ ಕೇಂದ್ರಗಳಲ್ಲೂ ಇದರ ಸೇವೆ ನೀಡುತ್ತಿದ್ದೇವೆ. ಸೋಂಕಿತರು ಆಸ್ಪತ್ರೆಗೆ ತೆರಳಲು, ಮೃತರ ದೇಹವನ್ನು ಚಿತಾಗಾರಕ್ಕೆ ಕೊಂಡೊಯ್ಯಲು ಈ ಸೇವೆ ಲಭ್ಯವಿದೆ. ಪ್ರತಿ ಆಂಬುಲೆನ್ಸ್ ನಲ್ಲೂ ಆಕ್ಸಿಜನ್ ವ್ಯವಸ್ಥೆ ಇದೆ ಎಂದು ತಿಳಿಸಿದರು. 

ದೇಶ ಸೇವೆಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಯೋಧರಾಗಿ:

ಕಾಂಗ್ರೆಸ್ ಸಾಮಾಜಿಕ ಜಾಲತಾಣವನ್ನು ದೊಡ್ಡದಾಗಿ ಕಟ್ಟುತ್ತಿದ್ದೇವೆ. ಹೊಸ ರೂಪ ಕೊಡಲು ಎಐಸಿಸಿಯಿಂದ ಸೂಚನೆ ಬಂದಿದೆ. ಹೀಗಾಗಿ ನಮ್ಮ ಸಾಮಾಜಿಕ ಜಾಲತಾಣಗಳಿಗೆ ವಾರಿಯರ್ಸ್ ಗಳನ್ನು ನೇಮಕ ಮಾಡುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಸಮಾಜದ ಬಗ್ಗೆ ಬದ್ಧತೆ ಇರುವ ಯಾರು ಬೇಕಾದರೂ ಈ ವಾರಿಯರ್ಸ್ ಆಗಿ ಸೇರಿಕೊಳ್ಳಬಹುದು. ಕೇವಲ ಒಂದು ಮಿಸ್ಡ್ ಕಾಲ್ ಕೊಟ್ಟರೆ ಸಾಕು. ಪ್ರತಿ ಊರಿನಲ್ಲೂ, ಹಳ್ಳಿಯಲ್ಲೂ ಜನರ ನೋವಿಗೆ ಸ್ಪಂದಿಸಬೇಕು. ಮಾಧ್ಯಮ, ಸರ್ಕಾರಕ್ಕೆ ವಿಚಾರ ತಿಳಿಸಬೇಕು ಎಂದರು.

ರಾಷ್ಟ್ರಮಟ್ಟದಲ್ಲಿ ಒಂದೂವರೇ ತಿಂಗಳ ಹಿಂದೆಯೇ ಇದನ್ನು ಆರಂಭಿಸಲಾಗಿದ್ದು, 20 ಸಾವಿರ ಜನ ರಾಜ್ಯದಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ. ಮೇ 1 ಕಾರ್ಮಿಕ ದಿನವಾದ ಇಂದಿನಿಂದ ಸಾಮಾಜಿಕ ಜಾಲತಾಣ ವಾರಿಯರ್ ಆಗಿ ಸೇರಲು ಅವಕಾಶ ಮಾಡಿಕೊಡಲಾಗಿದೆ. ಮಿಸ್ಡ್ ಕಾಲ್ ಕೊಟ್ಟ ನಂತರ ಅವರನ್ನು ಕರೆದು, ಅವರ ಮಾಹಿತಿ ಪರಿಶೀಲಿಸಿ ನಮ್ಮ ಸಾಮಾಜಿಕ ಜಾಲತಾಣ ತಂಡಕ್ಕೆ ಸೇರಿಸಿಕೊಳ್ಳಲಾಗುವುದು. ರಾಜ್ಯದ ಮೂಲೆ ಮೂಲೆಯಲ್ಲಿರುವ, ಹಳ್ಳಿಯಲ್ಲಿರುವ ಯುವಕರು, ಹಿರಿಯರು ಎಲ್ಲ ವರ್ಗದವರು ವಾರಿಯರ್ ಆಗಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಸಮಾಜ, ನೋಂದ ಜನರ ಧ್ವನಿಯಾಗಿ ಕೆಲಸ ಮಾಡಲು ಈ ಅವಕಾಶ ನೀಡಲಾಗಿದೆ. ಇದಕ್ಕಾಗಿ 1800 1200 00044 ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ. 7574000525 ಗೆ ವಾಟ್ಸಪ್ ಮಾಡಬಹುದು. ಪ್ರಜಾಪ್ರಭುತ್ವ ರಕ್ಷಣೆಗೆ ವಾರಿಯರ್ ಆಗಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದೇಶ ಸೇವೆಗೆ ಇದೊಂದು ದೊಡ್ಡ ಅವಕಾಶ.

ಇನ್ನು ಲಸಿಕೆ ವಿಚಾರದಲ್ಲಿ ಆನ್ ಲೈನ್ ನೋಂದಣಿಯಾಗಬೇಕು ಎಂದು ಸರ್ಕಾರ ಹೇಳಿದೆ. ನಾವು ಜನರಿಗೆ ಇಂತಹ ವಿಚಾರದಲ್ಲಿ ನೆರವಾಗಬೇಕು ಎಂಬ ಕಾರಣಕ್ಕೆ ಈ ಸಾಮಾಜಿಕ ಜಾಲತಾಣ ವಾರಿಯರ್ ಗಳನ್ನು ಆಯ್ಕೆ ಮಾಡುತ್ತಿದ್ದೇವೆ. ಇದು ದಪ್ಪ ಚರ್ಮದ ಸರ್ಕಾರ, ಈ ಸರಕಾರ ಬಡವರ ಪರವಾಗಿಲ್ಲ. ಹೀಗಾಗಿ ನೀವೆಲ್ಲ ಸಾಮಾಜಿಕ ಜಾಲತಾಣ ಯೋಧರಾಗಿ ಸೇರಬೇಕು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News