ಅಧಿಕಾರ, ಬಲ ಪ್ರಯೋಗಗಳನ್ನು ಮೆಟ್ಟಿನಿಂತ ಬ್ಯಾನರ್ಜಿಯ ಗಟ್ಟಿತನ ನಮಗೆ ಮಾದರಿ: ಕುಮಾರಸ್ವಾಮಿ

Update: 2021-05-02 15:12 GMT

ಬೆಂಗಳೂರು, ಮೇ 2: ರಾಜ್ಯದಲ್ಲಿ ಸದ್ಯ ಸಂಕಷ್ಟದಲ್ಲಿರುವ ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಟೆದು ನಿಲ್ಲಲಿದೆ, ಸಿಡಿದೆದ್ದು ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ಐದು ರಾಜ್ಯಗಳ ಹಾಗೂ ಉಪಚುನಾವಣೆ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಅವರು, ಕರ್ನಾಟಕದ ಉಪ ಚುನಾವಣೆ ಫಲಿತಾಂಶದ ಜೊತೆಗೇ, 5 ರಾಜ್ಯಗಳ ಚುನಾವಣೆಗಳ ಫಲಿತಾಂಶಗಳೂ ಬಂದಿದ್ದು, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮಣಿಸಲಾಗದು ಎಂಬ ಸಂದೇಶ ಹೊರಬಿದ್ದಿದೆ. ಸಾಂದರ್ಭಿಕ ಕಾರಣಗಳಿಗಾಗಿ ರಾಜ್ಯದಲ್ಲಿ ಸದ್ಯ ಸಂಕಷ್ಟದಲ್ಲಿರುವ ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಟೆದು ನಿಲ್ಲಲಿದೆ, ಸಿಡಿದೆದ್ದು ಬರಲಿದೆ ಎಂದು ತಿಳಿಸಿದ್ದಾರೆ.

ಅಧಿಕಾರ, ಹಣ, ಒತ್ತಡ, ಬಲ ಪ್ರಯೋಗಗಳನ್ನು ಮೆಟ್ಟಿನಿಂತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗಟ್ಟಿತನ ನಮಗೆ ಮಾದರಿಯಾಗಲಿದೆ. ಜೆಡಿಎಸ್‍ನಂತೆಯೇ ದಶಕಗಳ ಕಾಲ ರಾಜಕೀಯ ವನವಾಸ ಅನುಭವಿಸಿದ, ಸಂಕಷ್ಟ ಅನುಭವಿಸಿದ, ಕಠಿಣ ಸಂದರ್ಭದಲ್ಲೂ ಮುಂದಡಿ ಇಡುತ್ತಲೇ ಮುಂದೆ ಸಾಗಿದ ಡಿಎಂಕೆ ಮತ್ತು ಅದರ ನಾಯಕರ ತಾಳ್ಮೆ ನಮಗೆ ಪಾಠವಾಗಲಿದೆ ಎಂದು ಹೇಳಿದ್ದಾರೆ.

ಅಧಿಕಾರ ದುರ್ಬಳಕೆಯ, ಅಪಪ್ರಚಾರದ ಪ್ರಯೋಗಗಳನ್ನು ಮೆಟ್ಟಿನಿಂತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುಷ್ಟ ಶಕ್ತಿಗಳ ವಿರುದ್ಧ ಗೆದ್ದ ದುರ್ಗೆಯಂತೆ ಹೊರಹೊಮ್ಮಿದ್ದಾರೆ ಎಂದ ಅವರು, ಪ್ರಾದೇಶಿಕ ಅಸ್ಮಿತೆಯನ್ನು ದೇಶದ ಜನತೆ ಮತ್ತೆ ರುಜುವಾತುಪಡಿಸಿದ್ದಾರೆ. ಯಾವ ಅಧಿಕಾರ, ಹಣದ ದರ್ಪ, ಒತ್ತಡ ತಂತ್ರಗಳು, ಕುತಂತ್ರಗಳು, ಅಪಪ್ರಚಾರಗಳು ಪ್ರಾದೇಶಿಕ ಅಸ್ಮಿತೆಯನ್ನು ಚಿವುಟಿ ಹಾಕಲಾರವು. ಜನಮನ ಗೆದ್ದ ಪ್ರಾದೇಶಿಕ ಪಕ್ಷದ  ನಾಯಕರನ್ನು ಜನತೆ ಕೈ ಹಿಡಿಯುತ್ತಾರೆ ಎಂಬುದಕ್ಕೆ ಇವತ್ತಿನ ಫಲಿತಾಂಶವೇ ತಾಜಾ ನಿದರ್ಶನ ಎಂದು ತಿಳಿಸಿದ್ದಾರೆ.

ಅಲ್ಲದೆ, ಜೆಡಿಎಸ್ ತನ್ನ ಸಾಮರ್ಥ್ಯವನ್ನು ಮರಳಿ ಸಾಬೀತು ಮಾಡಲಿದೆ. ಈ ದುರಿತ ಕಾಲದಲ್ಲಿ ಕಾರ್ಯಕರ್ತರೊಂದಿಗೆ ನಾನು ನಿಲ್ಲಲಿದ್ದೇನೆ. ಸೋಲುಗಳ ಸರಣಿಯನ್ನು ಗೆಲುವಿನ ಪಾಠವಾಗಿ ಪರಿವರ್ತಿಸಿಕೊಳ್ಳುವ ಕಾಲ ನಮ್ಮೆದುರಿಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News