ಸಂಕಷ್ಟದ ಸಮಯದಲ್ಲಿ ಸಂಭ್ರಮಾಚರಣೆ ಬೇಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ

Update: 2021-05-02 15:13 GMT

ಬೆಂಗಳೂರು, ಮೇ 2: `ಕೋವಿಡ್ ಪಿಡುಗಿನ ಸಂಕಷ್ಟದ ಸಮಯದಲ್ಲಿ ನಾವು ನಮ್ಮ ಜನರ ಜೀವ ಉಳಿಸುವ ಬಗ್ಗೆ ಗಮನ ಹರಿಸಬೇಕು. ಹೀಗಾಗಿ ಚುನಾವಣೆ ಫಲಿತಾಂಶ ಏನೇ ಬರಲಿ, ಸಂಭ್ರಮಾಚರಣೆ ಮಾಡುವುದು ಬೇಡ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ, ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರವಿವಾರ ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ನಡುವೆ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಇಂದು ನಾವೆಲ್ಲ ಫಲಿತಾಂಶ ನೋಡುತ್ತಿದ್ದು, ಮತದಾರರ ತೀರ್ಪನ್ನು ಸ್ವಾಗತ ಮಾಡುತ್ತೇವೆ. ಸೋಲು-ಗೆಲುವು ಎರಡನ್ನೂ ಒಪ್ಪಿಕೊಳ್ಳಬೇಕು. ಇದು ಪ್ರಜಾಪ್ರಭುತ್ವದ ನಿಯಮ. ನಾನು ಈ ಸಂದರ್ಭದಲ್ಲಿ ಮೊದಲು ಮನವಿ ಮಾಡಿಕೊಳ್ಳುವುದು, ಮಸ್ಕಿ ಕ್ಷೇತ್ರದಲ್ಲಿ ಅತಿಹೆಚ್ಚು ಮುನ್ನಡೆಯಲ್ಲಿ ಗೆದ್ದಿದ್ದೇವೆ. ಗೆಲುವು ಸಾಧಿಸಿರುವುದು ಬೇರೆ ವಿಚಾರ. ಈಗ ಯಾರೂ ಸಂಭ್ರಮಾಚರಣೆ ಮಾಡಬಾರದು ಎಂದು ಕೋರಿದರು.

ಎಲ್ಲರೂ ತಪ್ಪದೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂಬುದು ನನ್ನ ಮನವಿ. ಚುನಾವಣಾ ಆಯೋಗದಿಂದ ನಮಗೆ ಕಟ್ಟುನಿಟ್ಟಿನ ನಿರ್ದೇಶನ ಬಂದಿದೆ. ಉಲ್ಲಂಘನೆ ಮಾಡಿದರೆ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ನಿಮ್ಮ ಮೇಲೂ ಕೇಸು ದಾಖಲಿಸುತ್ತಾರೆ. ಮಸ್ಕಿಯಲ್ಲಾಗಲಿ ಅಥವಾ ರಾಜ್ಯದ ಬೇರೆ ಯಾವುದೇ ಭಾಗದಲ್ಲಾಗಲಿ ಸಂಭ್ರಮಾಚರಣೆ ಬೇಡ. ಬೆಳಗಾವಿಯಲ್ಲಿ ಕಳೆದ ಬಾರಿ 4 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದೆವು. ಈ ಬಾರಿ ಬಹಳ ಸಮೀಪದ ಸೋಲಾಗಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆಂಬುದು ಇದರಿಂದ ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ದುಡಿದ ಕಾರ್ಯಕರ್ತರು, ನಾಯಕರು ಹಾಗೂ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಿಗಿಂತ ಮೊದಲು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಿಶ್ಲೇಷಣೆ ಆಮೇಲೆ ಮಾಡೋಣ. ಆದರೆ ಈ ಸಮಯದಲ್ಲಿ ಬೇರೆ ರಾಜ್ಯಗಳ ಫಲಿತಾಂಶ ಇಟ್ಟುಕೊಂಡು ಸಂಭ್ರಮಿಸುವುದು ಬೇಡ. ಪಕ್ಷದ ಕಚೇರಿಗೂ ಯಾರೂ ಹೋಗಬಾರದು. ಈ ಕುರಿತು ಅಭ್ಯರ್ಥಿ, ಜಿಲ್ಲಾಧ್ಯಕ್ಷರುಗಳಿಗೆ ಸೂಚನೆ ನೀಡಿದ್ದೇನೆ. ನಾವು ಚುನಾವಣೆ ಮುಂದೂಡಿ ಎಂದು ಹೇಳಿದ್ದೆವು. ಆದರೆ, ಕೇಳಲಿಲ್ಲ. ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದೆ. ಫಲಿತಾಂಶ ಏನಾದರೂ ಬರಲಿ ಆ ಬಗ್ಗೆ ಆಮೇಲೆ ವಿಶ್ಲೇಷಣೆ ಮಾಡೋಣ. ಮೊದಲು ನಮ್ಮ ಜನರ ಜೀವ ಉಳಿಸೋಣ ಎಂದು ಶಿವಕುಮಾರ್ ಕೋರಿದರು.

`ಇಡೀ ದೇಶದ ಅಧಿಕಾರ, ಅಧಿಕಾರಿಗಳನ್ನು ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ಮಾಡಿ, ಆ ಹೆಣ್ಣು ಮಗಳಿಗೆ ಕೊಟ್ಟಿರುವ ಕಿರುಕುಳ ಕಂಡು ಸಿಟ್ಟಿಗೆದ್ದ ಜನ ಈ ಫಲಿತಾಂಶ ಕೊಟ್ಟಿದ್ದಾರೆ. ಅವರಿಗೆ ಸಾಷ್ಟಾಂಗ ನಮಸ್ಕಾರಗಳು'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News