ಚಾಮರಾಜನಗರ ದುರಂತ: ನ್ಯಾಯಾಂಗ ತನಿಖೆ ಬಗ್ಗೆ ರಾಜ್ಯ ಸರಕಾರದ ನಿಲುವು ಕೇಳಿದ ಹೈಕೋರ್ಟ್

Update: 2021-05-04 11:33 GMT

ಬೆಂಗಳೂರು, ಮೇ 4: ಚಾಮರಾಜನಗರದ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಾಗದೆ 24 ಕೋವಿಡ್ ಸೋಂಕಿತ ರೋಗಿಗಳು ಸಾವನ್ನಪ್ಪಿದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಕುರಿತು ರಾಜ್ಯ ಸರಕಾರ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಕೊರೋನ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 24 ಕೋವಿಡ್ ಸೋಂಕಿತ ರೋಗಿಗಳು ಮೇ 2ರ ರಾತ್ರಿ ಸಾವನ್ನಪ್ಪಿದ ಘಟನೆ ಬಗ್ಗೆ ಮಾಧ್ಯಮಗಳ ವರದಿ ಪ್ರಸ್ತಾಪಿಸಿದ ಪೀಠ, ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. ಜತೆಗೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಅದಕ್ಕೆ ಕಾರಣಗಳು ಏನೆಂದು ಅಡ್ವಕೇಟ್ ಜನರಲ್ ಅವರಿಗೆ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಎಜಿ ಪ್ರಭುಲಿಂಗ ನಾವದಗಿ ಅವರು, ರೋಗಿಗಗಳು ಸಾವನ್ನಪ್ಪಿರುವುದು ನಿಜ. ಆದರೆ ಆಕ್ಸಿಜನ್ ಕೊರತೆಯಿಂದಲೇ ರೋಗಿಗಳು ಸಾವನ್ನಪ್ಪಿದರಾ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಹೀಗಾಗಿ ದುರ್ಘಟನೆಗೆ ಕಾರಣಗಳು ಏನೆಂದು ತಿಳಿಯಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಬುಧವಾರ ಈ ಬಗ್ಗೆ ವರದಿ ಸಿಗುವ ನಿರೀಕ್ಷೆ ಇದೆ. ಘಟನೆಗೆ ಯಾರೇ ಕಾರಣರಿದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲು ರಾಜ್ಯ ಸರಕಾರ ಸಿದ್ದವಿದೆ ಎಂದು ಭರವಸೆ ನೀಡಿದರು.

ವಕೀಲರ ವಾದ ಆಲಿಸಿದ ಪೀಠ, ರೋಗಿಗಳು ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿರುವುದು ಅತ್ಯಂತ ಘೋರ ವಿಚಾರ. ಹಾಗೆಯೇ ನ್ಯಾಯಾಂಗ ತನಿಖೆಗೆ ಒಪ್ಪಿಸುವುದಕ್ಕೆ ಅರ್ಹ ಪ್ರಕರಣವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ತನ್ನ ನಿಲುವು ತಿಳಿಸಬೇಕು ಮತ್ತು ಘಟನೆಯ ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು. ಇದಕ್ಕೂ ಮುನ್ನ ಆಕ್ಸಿಜನ್ ಕೊರತೆಯಾಗದಂತೆ ನೆರೆಹೊರೆ ಜಿಲ್ಲೆಗಳಲ್ಲಿ ಸಮನ್ವಯ ಸಾಧಿಸುವಂತೆ ಸರಕಾರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News