ಬೆಳಗಾವಿಗೆ ಬರುತ್ತಿದ್ದ ಆಕ್ಸಿಜನ್ ಟ್ಯಾಂಕರ್ ವಾಹನ ಅಪಘಾತ
Update: 2021-05-07 15:44 GMT
ಬೆಳಗಾವಿ, ಮೇ 7: ಇಲ್ಲಿನ ಮುತ್ನಾಳ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಆಕ್ಸಿಜನ್ ಟ್ಯಾಂಕರ್ ಹೊತ್ತ ವಾಹನವೊಂದು ಲಾರಿಗೆ ಢಿಕ್ಕಿ ಹೊಡೆದಿರುವ ಘಟನೆ ಶುಕ್ರವಾರ ನಡೆದಿದೆ.
ಅದೃಷ್ಟವಶಾತ್ ಅಪಘಾತದ ವೇಳೆ ಆಕ್ಸಿಜನ್ ಟ್ಯಾಂಕರ್ ಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
16 ಕೆ.ಎಲ್ ಸಾಮರ್ಥ್ಯದ ಆಕ್ಸಿಜನ್ ಲಿಕ್ವಿಡ್ ಇದ್ದ ಈ ಟ್ಯಾಂಕರ್ ಬಳ್ಳಾರಿಯಿಂದ ಬೆಳಗಾವಿಗೆ ಬರುತ್ತಿತ್ತು. ಈ ವೇಳೆ ಅಪಘಾತಕ್ಕೀಡಾಗಿ ಟ್ಯಾಂಕರ್ನ ಚಕ್ರ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೊಲ್ಲಾಪುರದಿಂದ ಸೂಕ್ತ ಭದ್ರತೆಯಲ್ಲಿ ಖಾಲಿ ಟ್ಯಾಂಕರ್ ತರಲು ಸೂಚನೆ ನೀಡಲಾಗಿದೆ. ಈಗಾಗಲೇ ಟ್ಯಾಂಕರ್ ನಿಪ್ಪಾಣಿಗೆ ತಲುಪಿದ್ದು, ಆದಷ್ಟು ಬೇಗ ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ವರ್ಗಾವಣೆ ಮಾಡಲಾಗುವುದು ಎಂದರು.