ಬಿಜೆಪಿಯ ಮೆಡಿಕಲ್ ಭಯೋತ್ಪಾದಕರ ಬಂಧನ ಏಕಿಲ್ಲ: ಕಾಂಗ್ರೆಸ್ ಪ್ರಶ್ನೆ

Update: 2021-05-08 11:20 GMT

ಬೆಂಗಳೂರು, ಮೇ 8: `ಬಿಜೆಪಿ ಶಾಸಕ ಸತೀಶ್ ರೆಡ್ಡಿ ತನ್ನ ಸಹಾಯಕ ಹರೀಶ್ ಹಾಗೂ ಆಪ್ತ ಬಾಬು ಮೂಲಕ ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದುದ್ದು ತನಿಖೆಯಲ್ಲಿ ತಿಳಿದುಬಂದಿದೆ. ಇದರಲ್ಲಿ ತೇಜಸ್ವಿ ಸೂರ್ಯ ಕೂಡ ಭಾಗಿ. ಇನ್ನೂ ಬಿಜೆಪಿಯ ಈ ಮೆಡಿಕಲ್ ಭಯೋತ್ಪಾದಕರ ಬಂಧನ ಏಕಿಲ್ಲ? ಕೋಮು ಬಣ್ಣ ಬಳಿದು ಹಗರಣ ಮುಚ್ಚುವ ಕರ್ನಾಟಕ ಬಿಜೆಪಿಯ ತಂತ್ರ ನಡೆಯದು' ಎಂದು ಕಾಂಗ್ರೆಸ್ ಟೀಕಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, `ಬೆಂಗಳೂರು ಅನಾಥವಾದ ಕಥೆ! ಆಕ್ಸಿಜನ್ ಬೆಡ್ ದರ 25-30 ಸಾವಿರ ರೂ., ಐಸಿಯು ಬೆಡ್ ಇಲ್ಲ, ರೆಮ್‍ಡೆಸಿವಿರ್, ಫ್ಯಾಬೀಫ್ಲೂ ಇಲ್ಲ, ಸೋಂಕು ಪರೀಕ್ಷಾ ವರದಿ ವಿಳಂಬ, ಜಿಲ್ಲಾವಾರು ಆಕ್ಸಿಜನ್ ಹಂಚಿಕೆ ಇಲ್ಲ, ಅಂತ್ಯಸಂಸ್ಕಾರಕ್ಕೆ ಪರದಾಟ, ಕೋವಿಡ್ ನಿರ್ವಹಣೆಗೆ ಸಿದ್ಧತೆ ಕೊರತೆ, ವ್ಯವಸ್ಥೆ ವೈಫಲ್ಯ' ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

`ಮೋದಿ ಸರಕಾರದ ದಬ್ಬಾಳಿಕೆ ದೌರ್ಜನ್ಯ ಮಿತಿ ಮೀರಿದೆ. ಜನ ಸಾಯುತ್ತಿದ್ದರೂ, ಹಲವು ದಿನಗಳ ಹಿಂದೆಯೇ ಸಿಎಂ ಬಿಎಸ್‍ವೈ ಅವರು ಆಕ್ಸಿಜನ್ ಹಂಚಿಕೆ ಹೆಚ್ಚಿಸದಿದ್ದರೆ ಆಸ್ಪತ್ರೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಪ್ರಧಾನಿ ಎದುರು ಹೇಳಿದಾಗಲೂ `ಪಿಎಂ ಕೇರ್' ಮಾಡಲಿಲ್ಲ. ಈಗ ರಾಜ್ಯಕ್ಕೆ ಧಮ್ಕಿ ಹಾಕುತ್ತಿದ್ದಾರೆ. 25 ಸಂಸದರೆ ಎಲ್ಲಿ ಅಡಗಿದ್ದೀರಿ?' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

`ಶಾಸಕ ಉದಯ್ ಗರುಡಾಚಾರ್ ಅವರೇ ತಪ್ಪನ್ನು ಮುಚ್ಚಿಕೊಳ್ಳಲು ಎಷ್ಟು ಸಾಹಸ ಮಾಡುವಿರಿ. ಈಗಷ್ಟೇ ಕಣ್ಬಿಟ್ಟು ಜಗತ್ತು ಕಾಣುತ್ತಿರುವ ಸಂಸದ ತೇಜಸ್ವಿ ಸೂರ್ಯ ಎಂಬ ತಲೆ ಮಾಸದ ಎಳೆ ಹುಡುಗನ ಕೈಗೆ ಯಜಮಾನಿಕೆ ಕೊಟ್ಟಿದ್ದೇಕೆ! ಈ ತಪ್ಪನ್ನು ಯಾರೋ ಕಾರ್ಯಕರ್ತರು ಮಾಡಿದ್ದಲ್ಲ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಎರಡ್ಮೂರು ಬಾರಿ ಶಾಸಕರಾದವರೇ ಮಾಡಿದ್ದೀರಲ್ಲ ಸ್ವಾಮಿ?' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

`ಎಳೆ ಸಂಸದ ತೇಜಸ್ವಿ ಸೂರ್ಯ ರಾಜ್ಯದ ಸಂಕಟದ ನಡುವೆಯೂ ವೈರಸ್ಸಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚಿದಿರಿ, ಹಗರಣ ಬಯಲು ಮಾಡುತ್ತೇವೆಂದ ನಿಮ್ಮದೇ ಹಗರಣ ಬೆತ್ತಲಾಗಿದೆ, ಶಾಸಕ ಸತೀಶ್ ರೆಡ್ಡಿ ಆಪ್ತ ಸಹಾಯಕನ ಕೈವಾಡ ಬಯಲಾಗಿದೆ. ನಿಮ್ಮ ರಾಜಕೀಯ ತೆವಲು ತೀರಿಸಿಕೊಳ್ಳುವ ನೀಚತನಕ್ಕೆ ವಾರ್ ರೂಂನ ಕೊರೋನ ವಾರಿಯರ್ಸ್ ಆತ್ಮವಿಶ್ವಾಸ ಕುಗ್ಗಿಸಿದಿರಿ' ಎಂದು ಕಾಂಗ್ರೆಸ್ ಟೀಕಿಸಿದೆ.

`ಒನ್ ನೇಷನ್ ಒನ್ ಎಲೆಕ್ಷನ್, ಒನ್ ನೇಷನ್ ಒನ್ ರೇಷನ್ ಎನ್ನುವ ಪದಪುಂಜಗಳನ್ನು ಪುಂಖಾನುಪುಂಖವಾಗಿ ಬಿಡುವ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರೇ ಹೇಳಿ, ಆಕ್ಸಿಜನ್ ಹಂಚಿಕೆಯಲ್ಲಿ, ಲಸಿಕೆ ನೀಡುವಲ್ಲಿ, ನೆರವು ಕೊಡುವಲ್ಲಿ, ರೆಮ್‍ಡೆಸಿವಿರ್ ಪಾಲಿನಲ್ಲಿ `ಒಂದು ದೇಶ ಒಂದೇ ನ್ಯಾಯ' ಏಕಿಲ್ಲ? ಕರ್ನಾಟಕಕ್ಕೆ ಏಕೆ ಈ ಅನ್ಯಾಯ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದ್ದಾರೆ.

`ಯಾವ ಆರೋಪಗಳಿಲ್ಲ. ಬಂಧನ ಆಗಿಲ್ಲ. ವಿಚಾರಣೆ ಆಗಿಲ್ಲ. ವಿನಾಕಾರಣ ಮೆಡಿಕಲ್ ಭಯೋತ್ಪಾದಕರ ಸ್ವಾರ್ಥಕ್ಕೆ ಗುರಿಯಾದ ವಾರ್ ರೂಮ್ ಸಿಬ್ಬಂಧಿಗಳನ್ನು ಯಾವ ಕಾರಣಕ್ಕೆ ವಜಾ ಮಾಡಲಾಗಿದೆ? ಹೆಸರಿನ ಕಾರಣಕ್ಕಾ, ಧರ್ಮದ ಕಾರಣಕ್ಕಾ? ಯಾರೋ ನುಗ್ಗಿ ಹೆಸರಿನ ಪಟ್ಟಿ ಓದಿದ ಮಾತ್ರಕ್ಕೆ ವಜಾ ಮಾಡಲು ಯಾವ ಕಾನೂನಿನಲ್ಲಿ ಅವಕಾಶವಿದೆ ಬಿಎಸ್‍ವೈ ಅವರೇ?' ಎಂದು ಕಾಂಗ್ರೆಸ್  ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News