100 ಗಂಟೆಗಳಲ್ಲಿ ಬಿಬಿಎಂಪಿ ಬೆಡ್ ಬುಕಿಂಗ್ ವಿಧಾನದಲ್ಲಿ 4 ಮಹತ್ವದ ಸುಧಾರಣೆ: ತೇಜಸ್ವಿ ಸೂರ್ಯ

Update: 2021-05-10 15:15 GMT

ಬೆಂಗಳೂರು,  ಮೇ 10: `ಬಿಬಿಎಂಪಿ ಬೆಡ್ ಹಂಚಿಕೆ ಪದ್ಧತಿಯಲ್ಲಿ ನಾಲ್ಕು ಮಹತ್ವದ ಸುಧಾರಣೆಗಳನ್ನು ತಂದಿದ್ದು, ಮ್ಯಾನುವಲ್ ಅನ್ ಬ್ಲಾಕಿಂಗ್ ಪದ್ದತಿ ನಿಷ್ಕ್ರಿಯ, ಬೆಡ್ ಹಂಚಿಕೆ ಬಗ್ಗೆ ರೋಗಿಗಳಿಗೆ ಎಸ್‍ಎಂಎಸ್ ಸಂದೇಶ ರವಾನೆ, ಬೆಡ್ ಬುಕಿಂಗ್ ಅವಧಿ 4 ಗಂಟೆಗೆ ಕಡಿತ, ಬೆಡ್ ಹಂಚಿಕೆ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ 2 ಹಂತದ ಲಾಗಿನ್ ದೃಢೀಕರಣ' ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ಸಂಸದರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲ್ಕಂಡ ಸುಧಾರಣೆಗಳನ್ನು ತಕ್ಷಣಕ್ಕೆ ಕಾರ್ಯರೂಪಕ್ಕೆ ತಂದಿದ್ದು, ಈಗಾಗಲೇ ಜಾರಿಗೆ ತರಲಾಗಿದ್ದು, ಬೆಡ್ ಹಂಚಿಕೆಗೆ ಡಿಜಿಟಲ್ ಸರದಿ ಪದ್ಧತಿ, ರಿಸರ್ವೇಷನ್‍ನಲ್ಲಿ ಆಗುತ್ತಿರುವ ಸಮಯಮಿತಿ ಕಡಿತಗೊಳಿಸುವಿಕೆ ಹಾಗೂ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ನೋಂದಣಿ/ಡಿಸ್ಚಾರ್ಜ್ ಸೇರಿದಂತೆ ಹಲವು ಸುಧಾರಣೆಗಳು ಮುಂದಿನ ಕೆಲವು ಗಂಟೆಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದರು.

ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕ್ಷಿಪ್ರ ಕ್ರಮ ತೆಗೆದುಕೊಳ್ಳಲು ಆದೇಶ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರ್ಯವೈಖರಿಯನ್ನು ನಾನು ಈ ಸಂದರ್ಭದಲ್ಲಿ ಶ್ಲಾಘಿಸುತ್ತೇನೆ. ಈ ಕುರಿತು ನಂದನ್ ನಿಲೇಕಣಿಯವರನ್ನು ಸಂಪರ್ಕಿಸಿ, ಬಿಬಿಎಂಪಿ ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ತಾಂತ್ರಿಕ ಸಹಾಯ ಕೋರಿ ಮನವಿ ಸಲ್ಲಿಸಿದ ತಕ್ಷಣ, ತ್ವರಿತವಾಗಿ ಸ್ಪಂದಿಸಿ ಪರಿಣಿತರ ತಂಡವನ್ನು ಇದಕ್ಕಾಗಿಯೇ ನಿಯೋಜನೆಗೊಳಿಸಿ ಸಹಕಾರ ನೀಡಿರುವುದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ಕೇವಲ 100 ಗಂಟೆಗಳ ಅವಧಿಯಲ್ಲಿ ಬೆಡ್ ಹಂಚಿಕೆ ವಿಧಾನದಲ್ಲಿದ್ದ ಹಲವು ಲೋಪದೋಷಗಳನ್ನು ಸರಿಪಡಿಸಿ, ಇದನ್ನು ಕಾರ್ಯರೂಪಕ್ಕೆ ತಂದಿದ್ದು, ಕ್ಷಿಪ್ರ ಕಾರ್ಯನಿರ್ವಹಣೆಗೆ ಇಡೀ ತಂಡಕ್ಕೆ ಧನ್ಯವಾದಗಳು. ಈ ಹಿಂದೆ ರೋಗಿಗಳ ಗಮನಕ್ಕೆ ತರದೆ ಆಗುತ್ತಿದ್ದ ಬೆಡ್ ಹಂಚಿಕೆಯನ್ನು ತಡೆಗಟ್ಟಲು ಬೆಡ್ ಹಂಚಿಕೆ ಕುರಿತಾದ ಎಸ್‍ಎಂಎಸ್ ಅನ್ನು ನೇರ ರೋಗಿಗಳ ದೂರವಾಣಿ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಗಮನಾರ್ಹ ಬೆಳವಣಿಗೆ ಎಂದು ಅವರು ವಿವರಿಸಿದರು.

ಇನ್ನೊಂದು ಮಹತ್ವದ ಸಂಗತಿಯೆಂದರೆ, ವಾರ್ ರೂಮ್‍ಗಳಲ್ಲಿ ಬೆಡ್ ಹಂಚಿಕೆ ಸಮಯದಲ್ಲಿ ಆಗುತ್ತಿದ್ದ ಅಪಸವ್ಯಗಳನ್ನು ತಡೆಗಟ್ಟಲು, ಈ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ 2 ಹಂತದ ಲಾಗಿನ್ ಧೃಢೀಕರಣ ಕಡ್ಡಾಯಗೊಳಿಸಲು ಸೂಚಿಸಲಾಗಿದ್ದು, ಇದರಿಂದ ಪ್ರತೀ ಬೆಡ್ ಬುಕಿಂಗ್‍ಗೂ ಹೊಣೆಗಾರಿಕೆ ದೊರೆತಂತಾಗುವುದರಿಂದ ಬೆಡ್ ಹಂಚಿಕೆಯಲ್ಲಿ ಅನವಶ್ಯಕ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಬಿಬಿಎಂಪಿ ಸೇರಿ ವಲಯವಾರು ಸಹಾಯವಾಣಿಗಳಿಗೆ ಕರೆ ಮಾಡುವ ರೋಗಿಗಳ ವಿವರಗಳನ್ನು ಲೆಡ್ಜರ್ (ಲಿಖಿತ ಟಿಪ್ಪಣಿ) ಸೇರಿದಂತೆ ಇತರ ವಿಧಗಳಲ್ಲಿ ನೋಟ್ ಮಾಡಿಕೊಳ್ಳುವ ವಿಧಾನವಿತ್ತು. ಈ ವಿಧವು ಪಾರದರ್ಶಕತೆಗೆ ಒಳಗೊಂಡಿರದೆ, ಹಲವು ಹಸ್ತಕ್ಷೇಪಗಳಿಗೆ ಕಾರಣವಾಗಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಎಚ್‍ಬಿಎಂಎಸ್ ವೆಬ್‍ಸೈಟ್‍ನಲ್ಲಿ ಡಿಜಿಟಲ್ ಸರದಿ ಪದ್ಧತಿಯನ್ನು ಜಾರಿಗೆ ತರಲಾಗಿದ್ದು, ರೋಗಿಗಳ ತುರ್ತು ಅಗತ್ಯತೆ ಮೇರೆಗೆ ಬೆಡ್ ಹಂಚಿಕೆ ಮಾಡಲು ಆದ್ಯತೆ ಒದಗಿಸಲಾಗಿದ್ದು, ಇದರಿಂದ ಪಾರದರ್ಶಕತೆಗೆ ದಾರಿ ಮಾಡಿಕೊಟ್ಟಂತಾಗಿದೆ.

ಡ್ಯಾಶ್ ಬೋರ್ಡ್ ಮೂಲಕ ಬೆಡ್ ಹಂಚಿಕೆಗೆ ಸಂಬಂಧಿಸಿದ ಹಲವು ವಿವರಗಳನ್ನು ಸಾರ್ವಜನಿಕರ ಅವಗಾಹನೆಗೆ ತಿಳಿಸುವ ವ್ಯವಸ್ಥೆಗೆ ಸೂಚಿಸಲಾಗಿದ್ದು, ಇದರ ವಿವರಗಳನ್ನು ನೇರವಾಗಿ ರೋಗಿಗಳ ಮೊಬೈಲ್ ಸಂಖ್ಯೆಗೆ ತಿಳಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದ ಅವರು, ಆಸ್ಪತ್ರೆಗಳಲ್ಲಿ ರಿಜಿಸ್ಟ್ರೇಷನ್ ಹಾಗೂ ಡಿಸ್ಚಾರ್ಜ್‍ಗೆ ಸಂಬಂಧಿಸಿದ ಮಾಹಿತಿಯನ್ನು ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಆಧಾರಿತ ನೋಂದಣಿಗೆ ಸೂಚಿಸಲಾಗಿದ್ದು, ಇದರಿಂದ ನಕಲಿ ಪ್ರವೇಶಗಳಿಗೆ ಆಸ್ಪದವಿಲ್ಲ.

ಪ್ರಸ್ತುತ ಕೋವಿಡ್ ನಿರ್ವಹಣೆಗೆ 3 ಸಾಫ್ಟ್ ವೇರ್(INDEX, C.H.B.M.S & SAST)ಗಳಿದ್ದು, ಇವುಗಳಲ್ಲಿನ ಯಾವುದಾದರೂ ಒಂದು ಸಾಫ್ಟ್ ವೇರ್ ಕಾರ್ಯನಿರ್ವಹಿಸದಿದ್ದರೆ ಉಳಿದವುಗಳ ನಿರ್ವಹಣೆ ಸಮರ್ಪಕವಾಗಿರದು. ಇವೆಲ್ಲವುಗಳನ್ನು ಸಂಯೋಜನೆಗೊಳಿಸಿ ಏಕೀಕೃತ ಸಾಫ್ಟ್ ವೇರ್ ಅಭಿವೃದ್ಧಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲಿಯೇ ಇವುಗಳನ್ನು ಕಾರ್ಯಾಚರಣೆಗೆ ತರಲಾಗುವುದು ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News