13,000 ಕೋಟಿ ವೆಚ್ಚದ ಕೇಂದ್ರ ಸರಕಾರದ ಯೋಜನೆಗೆ ಪ್ರಾರಂಭದಲ್ಲೇ ವಿಘ್ನ

Update: 2021-05-15 18:01 GMT

ಹೊಸದಿಲ್ಲಿ, ಮೇ 15: ಭಾರತದಲ್ಲಿ ಜಾನುವಾರುಗಳಿಗೆ ಮಾರಣಾಂತಿಕವಾಗಿ ಬಾಧಿಸುವ ಕಾಲು ಬಾಯಿ ರೋಗವನ್ನು 2030ರೊಳಗೆ ಮೂಲೋಚ್ಛಾಟನೆ ಗೊಳಿಸುವ ಪ್ರಮುಖ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2019ರಲ್ಲಿ 13,000 ಕೋಟಿ ರೂ. ಮೊತ್ತದ ಯೋಜನೆಯೊಂದನ್ನು ರೂಪಿಸಿದ್ದು ರಾಷ್ಟ್ರೀಯ ಪ್ರಾಣಿರೋಗ ನಿಯಂತ್ರಣ ಯೋಜನೆಯಡಿ ಖರೀದಿಸಿದ ಲಸಿಕೆಗಳು ಗುಣಮಟ್ಟ ಪರೀಕ್ಷೆಯಲ್ಲಿ ಈ ಲಸಿಕೆಗಳು ವಿಫಲವಾದ್ದರಿಂದ ಈ ಬೃಹತ್ ವೆಚ್ಚದ ಯೋಜನೆ ಈಗ ಮೂಲೆಗುಂಪಾಗಿದೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ. 

ಹಸುಗಳು, ಎಮ್ಮೆ-ಕೋಣ, ಆಡು, ಕುರಿ ಮತ್ತು ಹಂದಿಗೆ ಲಸಿಕೆ ಹಾಕುವ ಮೂಲಕ ಕಾಲುಬಾಯಿ ಜ್ವರವನ್ನು ನಿರ್ಮೂಲನಗೊಳಿಸುವ ಯೋಜನೆಯಿದು. ಈ ಯೋಜನೆಯಡಿ 400 ಕೋಟಿ ರೂ. ಮೊತ್ತದ ಲಸಿಕೆ ಖರೀದಿಸಲಾಗಿತ್ತು. ರೈತರ ಆದಾಯ ದ್ವಿಗುಣಗೊಳಿಸುವ ಉಪಕ್ರಮದ ಭಾಗವಾಗಿ ಈ ಲಸಿಕೀಕರಣ ಯೋಜನೆ ಘೋಷಿಸಲಾಗಿದ್ದು ‘ನ್ಯಾಷನಲ್ ಎನಿಮಲ್ ಡಿಸೀಸ್ ಕಂಟ್ರೋಲ್ ಪ್ರೋಗ್ರಾಂ(ಎನ್ಎಡಿಸಿಪಿ) ಎಂದು ಇದಕ್ಕೆ ಹೆಸರಿಡಲಾಗಿತ್ತು. ಈ ಯೋಜನೆಗೆ ಕಳೆದ ವರ್ಷದ ಬಜೆಟ್ನಲ್ಲಿ 13,343 ಕೋಟಿ ರೂ. ನಿಗದಿಗೊಳಿಸಲಾಗಿತ್ತು. 

ಯೋಜನೆಯ ಪ್ರಕಾರ ಜಾನುವಾರುಗಳಿಗೆ 5 ವರ್ಷ ಲಸಿಕೆ ಹಾಕಲು ಅಗತ್ಯವಿರುವ ಸಾಮಾಗ್ರಿಗಳನ್ನು ಕೇಂದ್ರ ಸರಕಾರ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಬೇಕಿದೆ. ಬ್ರಿಲಿಯಂಟ್ ಬಯೋಫಾರ್ಮ ಪ್ರೈ.ಲಿ, ಬಯೊವೆಟ್ ಮತ್ತು ಸಾರ್ವಜನಿಕ ಕ್ಷೇತ್ರದ ಸಂಸ್ಥೆ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿ. ಸಂಸ್ಥೆಯಿಂದ ಈ ಲಸಿಕೆ ಖರೀದಿಸಲಾಗಿದೆ. ಈ ಲಸಿಕೆಗಳನ್ನು ದಾಸ್ತಾನಿರಿಸಲು, ರಾಜ್ಯಗಳಿಗೆ ರವಾನಿಸಲು, ಸೂಜಿಗಳ ಖರೀದಿ, ಲಸಿಕೆ ಹಾಕುವವರ ಶುಲ್ಕ ಸೇರಿದಂತೆ ಇತರೆ ವೆಚ್ಚವಾಗಿ 1,250 ಕೋಟಿ ರೂ. ವ್ಯಯಿಸಲಾಗಿದೆ. 5 ವರ್ಷದ ಯೋಜನೆ ಇದಾಗಿದೆ.

2019ರಲ್ಲಿ 800 ಕೋಟಿ ರೂ, 2020-21ರಲ್ಲಿ 850 ಕೋಟಿ ರೂ. ವಿನಿಯೋಗಿಸಲಾಗಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಪೂರೈಸಲಾಗಿತ್ತು.

ಆದರೆ 2020ರ ಡಿಸೆಂಬರ್ನಲ್ಲಿ ಈ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ. ಟೆಂಡರ್ನಲ್ಲಿ ನಿಗದಿಗೊಳಿಸಿದ್ದ ಗುಣಮಟ್ಟದ ಮಾನದಂಡವನ್ನು ಪಾಲಿಸಲು ಲಸಿಕೆಯ ಕೆಲವು ಬ್ಯಾಚ್ಗಳು ವಿಫಲವಾಗಿರುವುದು ಸ್ಯಾಂಪಲ್ಗಳ ಪರೀಕ್ಷೆಯಿಂದ ದೃಢಪಟ್ಟಿದೆ. ಆದ್ದರಿಂದ ಲಸಿಕೆಗಳನ್ನು ಮರಳಿಸುವಂತೆ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಪತ್ರ ಬರೆದು ಸೂಚಿಸಿದೆ. ಪೂರೈಸಿರುವ ಲಸಿಕೆಗಳನ್ನು ಮರಳಿಸಬೇಕು. ಒಂದುವೇಳೆ ಈಗಾಗಲೇ ಪ್ರಾಣಿಗಳಿಗೆ ಲಸಿಕೆ ನೀಡಿದ್ದರೆ, ಹೊಸದಾಗಿ ಲಸಿಕೆ ಬಂದ ಮೇಲೆ ಮತ್ತೆ ಹಾಕಬೇಕು. ಈಗ ಲಸಿಕೀಕರಣ ಯೋಜನೆ ಸ್ಥಗಿತಗೊಂಡಿದ್ದು ಮುಂದಿನ ಸೂಚನೆಯನ್ನು ನಿರೀಕ್ಷಿಸಿ ಎಂದು ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಗೆ, ಇಲಾಖೆಯ ಜಂಟಿ ಕಾರ್ಯದರ್ಶಿ ಉಪಮನ್ಯು ಬಸು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ. 

ಈ ಲಸಿಕೆಗಳನ್ನು ಪರೀಕ್ಷಿಸದೆ ರಾಜ್ಯಗಳಿಗೆ ರವಾನಿಸಿದ್ದೇಕೆ, ಕೆಲವು ರಾಜ್ಯಗಳಲ್ಲಿ ಲಸಿಕೆಯನ್ನು ಪ್ರಾಣಿಗಳಿಗೆ ನೀಡಿಯೂ ಆಗಿದೆ. ಈ ಅಚಾತುರ್ಯಕ್ಕೆ ಹೊಣೆ ಯಾರು. ವ್ಯರ್ಥವಾದ ಕೋಟ್ಯಂತರ ಹಣವನ್ನು ಸರಕಾರ ಹೇಗೆ ಸರಿದೂಗಿಸುತ್ತದೆ ಎಂಬ ಪ್ರಶ್ನೆ ಇಲ್ಲಿ ಮೂಡುತ್ತಿದೆ.

ಇದೇ ಪ್ರಶ್ನೆಯನ್ನು ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಗೆ, ಇಲಾಖೆಯ ಜಂಟಿ ಕಾರ್ಯದರ್ಶಿ ಉಪಮನ್ಯು ಬಸು, ಕಾರ್ಯದರ್ಶಿ ಅತುಲ್ ಚತುರ್ವೇದಿಗೆ ಪತ್ರ ಮತ್ತು ಇ-ಮೇಲ್ ಸಂದೇಶದ ಮೂಲಕ ಕೇಳಿದರೂ ಅವರಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ‘ದಿ ಪ್ರಿಂಟ್’ ಹೇಳಿದೆ. ಆದರೆ ಗುರುತು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಸಮರ್ಪಕವಾಗಿ ಪರೀಕ್ಷಿಸಿದ ಲಸಿಕೆಯ ಹೊಸ ಬ್ಯಾಚ್ಗಳು ಶೀಘ್ರ ಕೈಸೇರಲಿವೆ ಎಂದಿದ್ದಾರೆ. ಈ ಯೋಜನೆ ಹಳಿತಪ್ಪಿಲ್ಲ. ಹಲವು ಸವಾಲು ಮತ್ತು ಅಡೆತಡೆಯ ಮಧ್ಯೆಯೂ ಸರಕಾರ ಇದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಹೊಸ ಬ್ಯಾಚ್ನ ಲಸಿಕೆಗೆ ಸರಕಾರ ಮತ್ತೆ ಹಣ ಪಾವತಿಸುತ್ತಿಲ್ಲ ಎಂದು ಈ ಅಧಿಕಾರಿ ಹೇಳಿದ್ದಾರೆ. 

ಕಾಲು-ಬಾಯಿ ರೋಗ

ತೀವ್ರ ಸಾಂಕ್ರಾಮಿಕ ರೋಗವಾಗಿರುವ ಕಾಲು-ಬಾಯಿ ರೋಗವು ಗೋವು, ಆಡು ಮುಂತಾದ ಗೊರಸುಗಳನ್ನು ಹೊಂದಿರುವ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಎಳೆಯ ಪ್ರಾಣಿಗಳು ಸಾಯುತ್ತವೆ. ಅಲ್ಲದೆ ಹಾಲು ಕಡಿಮೆಯಾಗುವುದು, ಗರ್ಭ ಧರಿಸಿದ ಪ್ರಾಣಿಗಳು ಮರಿಹಾಕುವ ಸಂದರ್ಭದಲ್ಲಿ ಗರ್ಭಪಾತವಾಗುವುದು, ಪ್ರಾಣಿಗಳ ಕಾರ್ಯಕ್ಷಮತೆ ಕ್ಣೀಣಿಸುವುದು, ಮಾಂಸಗಳ ಗುಣಮಟ್ಟ ಕಡಿಮೆಯಾಗುವುದು ಈ ರೋಗದ ಪರಿಣಾಮ ಎಂದು ಭಾರತೀಯ ಕೃಷಿ ವಿಜ್ಞಾನ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News