ನಳಿನ್ ಕುಮಾರ್ ಕಟೀಲ್ ಆರೋಪ ಬಾಲಿಶತನಕ್ಕೆ ಹಿಡಿದ ಕನ್ನಡಿ: ಈಶ್ವರ್ ಖಂಡ್ರೆ

Update: 2021-05-17 11:28 GMT

ಬೆಂಗಳೂರು, ಮೇ 17: `ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿದಂತೆ' ಎಂಬ ಗಾದೆಯಂತೆ, ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿ, ಸಾವಿರಾರು ಮುಗ್ಧ ಜನರ ಸಾವಿಗೆ ಕಾರಣವಾದ ಬಿಜೆಪಿ ಇದೀಗ ಕಾಂಗ್ರೆಸ್ ಜನರ ತೆರಿಗೆ ಹಣವನ್ನು ವಿವೇಚನೆಯಿಂದ ವೆಚ್ಚ ಮಾಡಿದ್ದರೆ ಕೊರೋನ ನಿಯಂತ್ರಿಸಬಹುದಾಗಿತ್ತು ಎಂದು ಆರೋಪಿಸುತ್ತಿರುವುದು ಅರ್ಥಹೀನ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬೇಜವಾಬ್ದಾರಿತನ, ಹೊಣೆಗೇಡಿ, ತಿಳಿಗೇಡಿತನದ ಆಡಳಿತದ ಲೋಪ ಮರೆ ಮಾಚಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾಂಗ್ರೆಸ್ ಮೇಲೆ ಆರೋಪ ಮಾಡುವುದು ಅವರ ಬಾಲಿಶನತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ತಿರುಗೇಟು ನೀಡಿರುವ ಈಶ್ವರ ಖಂಡ್ರೆ, ಸರಕಾರದ ಲೋಪಗಳನ್ನು ಪಟ್ಟಿ ಮಾಡಿ 10 ಪ್ರಶ್ನೆಗಳನ್ನು ಕೇಳುವ ಮೂಲಕ ಸರಕಾರದಿಂದ ಉತ್ತರಕ್ಕಾಗಿ ಒತ್ತಾಯಿಸಿದ್ದಾರೆ.

ಸರಕಾರ ಹೊಣೆ ಹೊರುತ್ತದೆಯೇ: ಕೋವಿಡ್ 2ನೆ ಅಲೆಯ ಭೀತಿಯಿಂದ ಮಾರ್ಚ್ ತಿಂಗಳಲ್ಲಿ ನೆರೆಯ ತೆಲಂಗಾಣ ಸೇರಿ 10 ರಾಜ್ಯಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ-ಕಾಲೇಜುಗಳನ್ನು ಬಂದ್ ಮಾಡಲಾಯಿತು. ಕರ್ನಾಟಕ ಸರಕಾರವೇ ಕೋವಿಡ್ ಕುರಿತಂತೆ ರೂಪಿಸಿದ್ದ ತಜ್ಞರ ಸಮಿತಿ ಮಾರ್ಚ್‍ನಲ್ಲೇ ಶಾಲೆ-ಕಾಲೇಜು ಕೊರೋನ ಹಾಟ್‍ಸ್ಪಾಟ್ ಆಗಲಿವೆ ಎಂದು ಮುನ್ನೆಚ್ಚರಿಕೆ ನೀಡಿದರೂ ಕಡೆಗಣಿಸಿ ವಿದ್ಯಾಗಮ, ಬೌದ್ಧಿಕ ತರಗತಿ ನಡೆಸಿದ ಪರಿಣಾಮ ಹಾಗೂ ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 600ಕ್ಕೂ ಹೆಚ್ಚು ಶಿಕ್ಷಕರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇದೆ. ಕೊರೋನ ಜೊತೆ ಬದುಕಲು ಕಲಿಯಬೇಕು ಎಂದು ಹೇಳುತ್ತಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಸಾವಿನ ಹೊಣೆ ಹೊರುತ್ತಾರೆಯೇ? ಅಥವಾ ತಜ್ಞರ ವರದಿ ಕಡೆಗಣಿಸಿ ಸಾವಿರಾರು ಜನರ ಸಾವಿಗೆ ಕಾರಣವಾದ ಸರಕಾರ ಹೊಣೆ ಹೊರುತ್ತದೆಯೇ? ಎಂದು ಖಂಡ್ರೆ ಪ್ರಶ್ನಿಸಿದ್ದಾರೆ.

ಮಾರ್ಚ್ ಆರಂಭದಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳವಾಗಿದೆ, ಕೂಡಲೇ ಗಡಿಗಳನ್ನು ಬಂದ್ ಮಾಡಿ, ಆರ್‍ಟಿಪಿಸಿಆರ್, ರ್ಯಾಪಿಡ್ ಆಂಟಿಜನ್ ಟೆಸ್ಟ್ ಹೆಚ್ಚಳ ಮಾಡಿ ಎಂದು ಒತ್ತಾಯಿಸಿದರೂ ನಿರ್ಲಕ್ಷಿಸಿ ಉಪಚುನಾವಣೆ ಆಗುವ ತನಕ ರಾಜ್ಯದ ಹಿತ ಮರೆತ ಸರಕಾರ ಕೋವಿಡ್ 2ನೆ ಅಲೆ ಹೆಚ್ಚಳಕ್ಕೆ ಕಾರಣವಲ್ಲವೇ. ಇದಕ್ಕೆ ಯಾರು ಉತ್ತರ ನೀಡುತ್ತಾರೆ. ಈ ಅಪರಾಧಿಕ ನಿರ್ಲಕ್ಷ್ಯದ ಹೊಣೆ ಯಾರು ಹೊರುತ್ತಾರೆ? ಮಾರ್ಚ್ ಮಧ್ಯಭಾಗದಲ್ಲಿ ಸತತವಾಗಿ ನಿತ್ಯ ರಾಜ್ಯದಲ್ಲಿ 1 ಸಾವಿರ ಕೊರೋನ ಪ್ರಕರಣ ಬಂದಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ನೆರೆ ರಾಜ್ಯದೊಂದಿಗೆ ನಮ್ಮನ್ನು ಹೋಲಿಸಬೇಡಿ, ಎಲ್ಲ ಸರಿ ಇದೆ ಎಂದು ಜನರಲ್ಲಿ ಭ್ರಮೆ ಹುಟ್ಟಿಸಿ, ಲಕ್ಷ ಲಕ್ಷ ಜನರನ್ನು ಸೇರಿಸಿ ಚುನಾವಣಾ ಪ್ರಚಾರ ಸಭೆ ನಡೆಸಿ, ಜಾತ್ರೆ, ಉತ್ಸವ, ಸಿನಿಮಾ, ಸಂತೆಗೆ ಅವಕಾಶ ಮಾಡಿಕೊಟ್ಟು ರಾಜ್ಯಾದ್ಯಂತ ಸೋಂಕು ಹೆಚ್ಚಳಕ್ಕೆ ಕಾರಣವಾದ, ಆಡಳಿತ ಮರೆತು ರಾಜಕೀಯವನ್ನೇ ದೊಡ್ಡದೆಂದು ಪರಿಭಾವಿಸಿದ ಸರಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿತನದ ಹೊಣೆಯನ್ನು ಯಾರು ಹೊರುತ್ತಾರೆ ತಿಳಿಸಿ ಎಂದು ಒತ್ತಾಯಿಸಿದ್ದಾರೆ.

ಚಿತ್ರ ಮಂದಿರಗಳಲ್ಲಿ ಒಟ್ಟು ಆಸನದ ಶೇ.50ರಷ್ಟು ಮಾತ್ರ ಪ್ರವೇಶಕ್ಕೆ ಮಾತ್ರ ಅವಕಾಶ ಎಂದು ಬೆಳಗ್ಗೆ ಆದೇಶ ಹೊರಡಿಸಿ, ಸಂಜೆ ಬದಲಾವಣೆ ಮಾಡಿ ಆಡಳಿತವನ್ನೇ ನಗೆಪಾಟಲಿಗೆ ಈಡು ಮಾಡಿದ ಸರಕಾರದ ಹೊಣೆಗೇಡಿತನಕ್ಕೆ ಯಾರನ್ನು ಗುರಿ ಮಾಡುತ್ತೀರೀ? ಇದಕ್ಕೆ ಬಿಜೆಪಿ ಸರಕಾರವೇ ಕಾರಣವಲ್ಲವೆ? 6 ತಿಂಗಳಿಂದಲೂ ತಜ್ಞರ ಸಮಿತಿ ಮಾರ್ಚ್ ಅಂತ್ಯದಲ್ಲಿ 2ನೆ ಕೊರೋನ ಅಲೆ ಸ್ಫೋಟಗೊಳ್ಳುತ್ತದೆ ಎಂಬ ಎಚ್ಚರಿಕೆ ನೀಡಿದ್ದರೂ, ವೈದ್ಯಕೀಯ ಮೂಲಸೌಕರ್ಯವರ್ಧನೆಗೆ ಗಮನ ಹರಿಸದೆ, ಆಕ್ಸಿಜನ್ ಉತ್ಪಾದನೆಗೆ ಅವಕಾಶವಿದ್ದರೂ ಕ್ರಮ ಕೈಗೊಳ್ಳದೆ, ಅಗತ್ಯ ಪ್ರಮಾಣದ ರೆಮ್‍ಡಿಸಿವಿರ್ ಚುಚ್ಚುಮದ್ದು ದಾಸ್ತಾನು ಮಾಡಿಟ್ಟುಕೊಳ್ಳದೆ, ವೆಂಟಿಲೇಟರ್, ಆಕ್ಸಿಜನ್ ಹಾಸಿಗೆಗಳ ನಿರ್ವಹಣೆಗೆ ವೈದ್ಯ ಸಿಬ್ಬಂದಿಗೆ ತರಬೇತಿ ಕೊಡಿಸದೆ ನಿದ್ರಾವಸ್ಥೆಯಲ್ಲಿದ್ದ ಆರೋಗ್ಯ ಸಚಿವರು, ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಯಾರು ಜವಾಬ್ದಾರಿ ಹೊರುತ್ತಾರೆ? ತಿಳಿಸಿ ಎಂದು ಆಗ್ರಹಿಸಿದ್ದಾರೆ.

ರಾಜ್ಯಾದ್ಯಂತ ಇರುವ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆ ಮಾಡಲಾರದೆ ಕೈಚೆಲ್ಲಿ ಕುಳಿತ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡದೆ, ಆಕ್ಸಿಜನ್, ವೆಂಟಿಲೇಟರ್ ಮತ್ತು ವೈದ್ಯ ಹಾಗೂ ಅರೆವೈದ್ಯ ಸಿಬ್ಬಂದಿಯ ಕೊರತೆ ನಿವಾರಿಸಲು ಯಾವುದೇ ಕ್ರಮ ಕೈಗೊಳ್ಳದೆ, ಆಸ್ಪತ್ರೆಗಳ `ಡಿ' ದರ್ಜೆ ನೌಕರರಿಗೆ ತಿಂಗಳುಗಟ್ಟಲೆ ಸಂಬಳ ನೀಡದೆ ರಾಜ್ಯದ ಪರಿಸ್ಥಿತಿ ಶೋಚನೀಯವಾಗಲು ಕಾರಣವಾಗುವ ಸರಕಾರದ ನಿಷ್ಕ್ರಿಯತೆಗೆ ಯಾರನ್ನು ಹೊಣೆ ಮಾಡುತ್ತೀರಿ? ಉತ್ತರಿಸಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಜನರು ಆಕ್ಸಿಜನ್ ಇಲ್ಲದೆ ಹಾದಿ ಬೀದಿಯಲ್ಲಿ ಸಾಯುತ್ತಿದ್ದರೂ, ರಾಜ್ಯದಲ್ಲೇ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೆ ಕೊಡಿ ಎಂದು ಕೇಳುವ ಧೈರ್ಯ ಇಲ್ಲದೆ 25 ಸಂಸತ್ ಸದಸ್ಯರು, ಸರಕಾರದ ಗುಲಾಮಗಿರಿತನಕ್ಕೆ ಯಾರನ್ನು ಹೊಣೆ ಮಾಡುತ್ತೀರಿ ಇದು ಸರಕಾರದ ಕರ್ತವ್ಯಲೋಪ ಅಲ್ಲವೇ? ಹೈಕೋರ್ಟ್ ರಾಜ್ಯಕ್ಕೆ 1,200 ಎಂಟಿ ಆಮ್ಲಜನಕ ನೀಡಬೇಕು ಎಂದು ತೀರ್ಪು ನೀಡಿದರೂ, ಅದನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸುವ ಕೇಂದ್ರ ಸರಕಾರದ ವಿರುದ್ಧ ಚಕಾರವೆತ್ತದೆ, ಕನಿಷ್ಠ ಸರಕಾರದ ನಿಲುವನ್ನೂ ಬಹಿರಂಗಪಡಿಸದೆ, ರಾಜ್ಯದ ಜನರಿಗೆ, ರಾಜ್ಯಕ್ಕೆ ದ್ರೋಹ ಮಾಡಿದ ಸರಕಾರ ಮತ್ತು ಸಂಸತ್ ಸದಸ್ಯರ ನಿರ್ಲಜ್ಜತನ, ಹೇಡಿತನಕ್ಕೆ ಯಾರನ್ನು ಹೊಣೆ ಮಾಡುತ್ತೀರಿ? ಎಂದು ಕೇಳಿದ್ದಾರೆ.

ಎಲ್ಲ ರಾಜ್ಯದಲ್ಲೂ ಲಸಿಕೆ ಅಭಿಯಾನ ನಡೆಯುತ್ತಿದ್ದರೂ, ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸೂಕ್ತ ಕ್ರಮ ವಹಿಸದೆ, ಲಸಿಕೆ ಖರೀದಿಗೆ ಮುಂದಾಗದೆ, ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ಗ್ಲೋಬಲ್ ಟೆಂಡರ್ ಮಾತನಾಡಿ ಜನರನ್ನು ಮರುಳು ಮಾಡಲು ಯತ್ನಿಸುತ್ತಿರುವ ಸರಕಾರದ ವಂಚಕ ಬುದ್ಧಿಗೆ ಯಾರನ್ನು ಹೊಣೆ ಮಾಡುತ್ತೀರಿ? ನೀವೇ ತಿಳಿಸಿ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸದೆ, ಜನರು ಒಂದೇ ಆಟೋದಲ್ಲಿ 6-7 ಜನ, ಒಂದು ಖಾಸಗಿ ಬಸ್‍ನಲ್ಲಿ 100ಕ್ಕೂ ಹೆಚ್ಚು ಜನ ಒಂದೇ ಬಾರಿ ಓಡಾಡುವುದು ಅನಿವಾರ್ಯ ಆಗುವಂತೆ ಮಾಡಿ ವ್ಯಕ್ತಿಗತ ಅಂತರ ಇಲ್ಲದೆ ಸೋಂಕು ಹರಡಲು ಕಾರಣವಾಗಿದ್ದಕ್ಕೆ ಸಾರಿಗೆ ಸಚಿವರನ್ನು ಹೊಣೆ ಮಾಡುತ್ತೀರೋ, ಸರಕಾರವನ್ನು ಹೊಣೆ ಮಾಡುತ್ತೀರೋ ಎಂದು ಕೇಳಿರುವ ಈಶ್ವರ ಖಂಡ್ರೆ, ಇಂತಹ ಕೀಳು ರಾಜಕೀಯ ಬಿಟ್ಟು, ರಾಜ್ಯದ ಜನರ ಪ್ರಾಣ ರಕ್ಷಣೆಗೆ ಮುಂದಾಗುವಂತೆ, 3ನೆ ಅಲೆಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News