ವ್ಯಂಗ್ಯಚಿತ್ರಕಾರ ಗಂಗಾಧರ್ ಅಡ್ಡೇರಿ ಕೊರೋನ ಸೋಂಕಿನಿಂದ ನಿಧನ

Update: 2021-05-18 11:30 GMT

ಶಿವಮೊಗ್ಗ, ಮೇ.18: ಖ್ಯಾತ ವ್ಯಂಗ್ಯಚಿತ್ರಕಾರ ಹಾಗೂ ಶಿಕ್ಷಕ ಗಂಗಾಧರ್ ಅಡ್ಡೇರಿ(43) ಕೊರೋನ ಸೋಂಕಿನಿಂದ ನಿಧನರಾಗಿದ್ದಾರೆ.

ಕಳೆದ ತಿಂಗಳು ಕೊರೋನ ಸೋಂಕಿಗೆ ತುತ್ತಾಗಿದ್ದ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತಾದರೂ ಸೋಮವಾರ ಹಠಾತ್ತನೇ ಆಕ್ಸಿಜನ್ ಲೆವೆಲ್ ಕಡಿಮೆಯಾಗಿತ್ತು. ಅವರ ಬಂಧುಗಳು ವೆಂಟಿಲೇಟರ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರೂ, ಸಕಾಲದಲ್ಲಿ ವೆಂಟಿಲೇಟರ್ ಸಿಗದ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ.

ಕೊನೇ ಕ್ಷಣದಲ್ಲಿ ವೆಂಟಿಲೇಟರ್ ವ್ಯವಸ್ಥೆ ಆಯಿತಾದರೂ, ಅದಕ್ಕೆ ಶಿಫ್ಟ್ ಮಾಡುವ ಮುನ್ನವೇ ಗಂಗಾಧರ್ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು, ತಾಯಿ ಹಾಗೂ ಸಹೋದರ ಇದ್ದಾರೆ.

ರಿಪ್ಪನ್ ಪೇಟೆ ಸಮೀಪದ ಅಡ್ಡೇರಿ ಗ್ರಾಮದವರಾದ ಗಂಗಾಧರ್ ಬೆಂಗಳೂರಿನಲ್ಲಿ ಸರಕಾರಿ ಪ್ರೌಢಶಾಲೆ ಶಿಕ್ಷಕರಾಗಿದ್ದರು. ಕೊರೋನ ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆ ಶಿವಮೊಗ್ಗಕ್ಕೆ ಬಂದಿದ್ದರು. ಅಲ್ಲಿಯೇ ಅವರಿಗೆ ಕೊರೋನ ಸೋಂಕು ತಗಲಿತ್ತು ಎನ್ನಲಾಗಿದೆ.

ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅವರ ವ್ಯಂಗ್ಯ ಚಿತ್ರಗಳು ಪ್ರಕಟವಾಗಿದ್ದವು. ತಮ್ಮ ಕಲಾಪ್ರತಿಭೆಗೆ ಹಲವು ಪ್ರಶಸ್ತಿಗಳನ್ನೂ ಗಂಗಾಧರ್ ಅವರು ಪಡೆದಿದ್ದರು. ಅವರ ವ್ಯಂಗ್ಯಚಿತ್ರಗಳ ಪ್ರದರ್ಶನವೂ ಹಲವು ಕಡೆಗಳಲ್ಲಿ ನಡೆದಿದ್ದವು.

ತಂದೆ ಸಾವನನ್ನಪ್ಪಿ ವಾರವಾಗಿಲ್ಲ: ಅರಣ್ಯ ಇಲಾಖೆ ನಿವೃತ್ತ ನೌಕರರಾಗಿದ್ದ ಗಂಗಾಧರ್ ತಂದೆ ಕಟ್ಟ ಈಶ್ವರಪ್ಪ ಮೇ.14 ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹೃದಯ ಸಂಬಂಧಿ ತೊಂದರೆ ಇದ್ದ ಅವರಿಗೂ ಕೊರೋನ ಕಾರಣಕ್ಕೆ ಮೆಗ್ಗಾನ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ಮರುದಿನವೇ ಅವರು ನಿಧನರಾಗಿದ್ದರು.

ತಂದೆಯ ಸಾವಿನ ಸುದ್ದಿ ಹೇಳಿರಲಿಲ್ಲ: ತಂದೆ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿದ್ದು, ಗಂಗಾಧರ್ ಅವರಿಗೆ ಗೊತ್ತಿತ್ತು. ಆದರೆ ಅವರು ನಿಧನರಾದ ವಿಷಯವನ್ನು ತಿಳಿಸಿರಲಿಲ್ಲ. ತೀವ್ರ ಸುಸ್ತಾಗಿದ್ದ ಗಂಗಾಧರ್ ಅವರಿಗೆ ಉಸಿರಾಟದ ತೊಂದರೆ ಇತ್ತು. ಅಪ್ಪನ ಬಗ್ಗೆ ವಿಚಾರಿಸಿದ ಅವರಿಗೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಸುಳ್ಳು ಹೇಳಲಾಗಿತ್ತು. ವಾರದಲ್ಲಿ ಕುಟುಂಬದ ಇಬ್ಬರನ್ನು ಕಳೆದುಕೊಂಡ ಕುಟುಂಬದಲ್ಲೀಗ ಶೋಕ ಮಡುಗಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News