ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳ ಪೋಷಣೆಗೆ ಸರಕಾರ ಸಿದ್ಧ: ಸಚಿವೆ ಶಶಿಕಲಾ ಜೊಲ್ಲೆ

Update: 2021-05-18 11:43 GMT

ಬೆಂಗಳೂರು, ಮೇ 18: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಪಾಲಕರ ಪೋಷಣೆಯಿಂದ ಅನಾಥರಾದ ಮಕ್ಕಳ ಪುನರ್ವಸತಿ ಕಲ್ಪಿಸಲು ಸರಕಾರ ಸಿದ್ಧವಿದ್ದು, 18 ವರ್ಷದೊಳಗಿನ ಮಕ್ಕಳ ಕ್ವಾರೆಂಟೈನ್‍ಗಾಗಿ ಒಂದು ವಸತಿ ಶಾಲೆ ತೆರೆಯಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಮಂಗಳವಾರ ವಿಧಾನಸೌಧದಲ್ಲಿ ಮಾಹಿತಿ ನೀಡಿದ ಅವರು, ಅಂತಹ ಮಕ್ಕಳು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದರು.

ಕೋವಿಡ್‍ನಿಂದ ಬಾಧಿತರಾದ ಮಕ್ಕಳನ್ನು ಗುರುತಿಸಲು ಹಾಗೂ ಪುನರ್ವಸತಿಗೆ ಸರಕಾರ 1098 ಎಂಬ ಸಹಾಯವಾಣಿ ತಂದಿದ್ದು, ಹಿರಿಯ ಐಎಎಸ್ ಅಧಿಕಾರಿ ಮೋಹನ್ ರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಇಂಥ ಮಕ್ಕಳಿಗೆ ಕೌಟುಂಬಿಕ ವಾತಾವರಣ ಒದಗಿಸುವುದು ಸಚಿವೆಯಾಗಿ ನನ್ನ ಹಾಗೂ ನಮ್ಮ ಇಲಾಖೆ ಹಾಗೂ ನಮ್ಮ ಸರಕಾರದ ಕರ್ತವ್ಯ ಎಂದು ಅವರು ಹೇಳಿದರು.

ತಂದೆ-ತಾಯಿ ಕೋವಿಡ್‍ನಿಂದ ಮೃತರಾದರೆ, ತಂದೆ-ತಾಯಿ ಇಬ್ಬರು ಆಸ್ಪತ್ರೆಗೆ ದಾಖಲಾದರೆ, ಕೋವಿಡ್‍ನಿಂದ ಒಬ್ಬರು ಮೃತರಾಗಿ ಇನ್ನೊಬ್ಬರು ಆಸ್ಪತ್ರೆಗೆ ದಾಖಲಾದರೆ, ಒಬ್ಬರು ಮೃತರಾಗಿ ಇನ್ನೊಬ್ಬರು ಬೇರೆ ಪ್ರದೇಶದಲ್ಲಿ ವಾಸವಿದ್ದರೆ. ಈ ಮೇಲಿನ ಕಾರಣಗಳಿಂದ ಮಕ್ಕಳು ಅನಾಥರಾದಾಗ ಅವರಿಗೆ ನಾವಿದ್ದೇವೆ ಎಂಬ ಭಾವನೆಯನ್ನು ಮೂಡಿಸಲು ಇಲಾಖೆ ಸಜ್ಜಾಗಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ಇದಲ್ಲದೆ, ಕೋವಿಡ್ ಬಾಧಿತ ಅನಾಥ ಮಕ್ಕಳಿಗಾಗಿಯೇ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. 6 ವರ್ಷದೊಳಗಿನ ಮಕ್ಕಳ ಆರೈಕೆಗೆ ವಿಶೇಷ ಕ್ವಾರೆಂಟೈನ್ ಸೌಲಭ್ಯ, ವಿಶೇಷ ದತ್ತು ಸಂಸ್ಥೆಗಳನ್ನು ಗೊತ್ತುಪಡಿಸುವುದು. 7 ರಿಂದ 18 ವರ್ಷದೊಳಗಿನ ಮಕ್ಕಳ ಆರೈಕೆಗೆ ವಿಶೇಷ ಕ್ವಾರೆಂಟೈನ್ ಸೌಲಭ್ಯ ಹಾಗೂ ಪಿಟ್ ಫೆಸಿಲಿಟಿಸ್ ಒದಗಿಸುವುದು. 18 ವರ್ಷದವರೆಗಿನ ಮಕ್ಕಳ ಕ್ವಾರೆಂಟೈನ್‍ಗಾಗಿ ವಸತಿ ಮೀಸಲಿಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ವಿಶೇಷ ಯೋಜನೆ: ಯಾವುದೇ ಲಕ್ಷಣಗಳಿಲ್ಲದ ಕೋವಿಡ್ ಪೀಡಿತ ಮಕ್ಕಳಿಗೆ ವಿಶೇಷ ಪಿಡಿಯಾಟ್ರಿಕ್ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ 30 ಜಿಲ್ಲೆಗಳಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದರು.

ಕೋವಿಡ್ ಲಕ್ಷಣವುಳ್ಳ ಸೋಂಕಿತ ಮಕ್ಕಳಿಗೆ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಪಿಡಿಯಾಟ್ರಿಕ್ ಕೋವಿಡ್ ಕೇರ್ ಸೆಂಟರ್‍ನಲ್ಲಿ ವಿಶೇಷ ಆರೈಕೆ ಮಾಡಲಾಗುವುದು. ಇದಕ್ಕಾಗಿ ಇಲಾಖೆಯಿಂದ ವಿಶೇಷ ಆರೈಕೆದಾರರ ನೇಮಕ ಮಾಡಲಾಗುವುದು ಎಂದು ಶಶಿಕಲಾ ಜೊಲ್ಲೆ ಹೇಳಿದರು.

ಕೋವಿಡ್ ಸಂಧರ್ಭದಲ್ಲಿ ಕೈಗೊಂಡ ಕ್ರಮಗಳು: ಅಂಗನವಾಡಿ ಫಲಾನುಭವಿಗಳಿಗೆ ಮನೆಮನೆಗೆ ತೆರಳಿ ವಿಶೇಷ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಅಂಗನವಾಡಿ ಮಕ್ಕಳು, ಗರ್ಭಿಣಿ, ಬಾಣಂತಿಯರ ಆರೋಗ್ಯದ ಮೇಲೆ ವಿಶೇಷ ನಿಗಾ ಇಡಲಾಗಿದೆ. ಕೋವಿಡ್ ಸೋಂಕಿನಿಂದ ಮರಣಹೊಂದಿದ 12 ಅಂಗನವಾಡಿ ಕಾರ್ಯಕರ್ತೆಯರಿಗೆ 30 ಲಕ್ಷ ರೂ.ಗಳ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

3ನೇ ಅಲೆಯು ಚಿಕ್ಕ ಮಕ್ಕಳಲ್ಲಿಯೇ ಹೆಚ್ಚಾಗಿ ಸೋಂಕು ಕಂಡುಬರುತ್ತದೆ ಎಂದು ತಜ್ಞರು ಎಚ್ಚರಿಸಿದ ಹಿನ್ನೆಲೆಯಲ್ಲಿ ಈಗಾಗಲೇ ನಮ್ಮ ಇಲಾಖೆ ಇದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News