ಬೆಂಗಳೂರು: ಮಾರ್ಗಸೂಚಿ ಉಲ್ಲಂಘಿಸಿ ದೇವಾಲಯದಲ್ಲಿ ಪೂಜೆ ಆರೋಪ; ಅರ್ಚಕನ ವಿರುದ್ಧ ಎಫ್ಐಆರ್
Update: 2021-05-26 12:37 GMT
ಬೆಂಗಳೂರು, ಮೇ 26: ಕೋವಿಡ್ ಸಂಬಂಧ ರಾಜ್ಯ ಸರಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಉಲ್ಲಂಘಿಸಿ ಗುಂಪು ಸೇರಿಸಿಕೊಂಡು ಪೂಜೆ ಮಾಡುತ್ತಿದ್ದ ಆರೋಪದ ಮೇಲೆ ದೇವಾಲಯದ ಅರ್ಚಕನ ವಿರುದ್ಧ ಇಲ್ಲಿನ ವಿಜೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೇವನಹಳ್ಳಿ ತಾಲೂಕಿನ ವಿಜಯಪುರದ ಬೆಸ್ತರ ಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದ ಅರ್ಚಕ ಗಂಗಾಧರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೋವಿಡ್ ಎರಡನೆ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಸಾರ್ವಜನಿಕ ಪ್ರವೇಶ ಹಾಗೂ ಪೂಜೆ ಪುನಸ್ಕಾರ ನಿಷೇಧಿಸಲಾಗಿದೆ. ಆದರೆ, ಅರ್ಚಕ ಗಂಗಾಧರ ದೇವಸ್ಥಾನದೊಳಗೆ ಗುಂಪು ಸೇರಿಸಿಕೊಂಡು ಪೂಜೆ ನೆರವೇರಿಸುತ್ತಿದ್ದ ಕಾರಣ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.