ಸಬ್ ರಿಜಿಸ್ಟರ್ ಕಚೇರಿಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ
Update: 2021-06-06 17:07 GMT
ಬೆಂಗಳೂರು: ಜಿಲ್ಲಾ ನೋಂದಣಿ ಮತ್ತು ಉಪ ನೋಂದಣಾ ಕಚೇರಿಗಳು ಕಾರ್ಯ ನಿರ್ವಹಿಸಲು ರಾಜ್ಯ ಸರಕಾರ ಕೋವಿಡ್ ಲಾಕ್ ಡೌನ್ ನಿಂದ ವಿನಾಯಿತಿ ನೀಡಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೋಮವಾರ(ಜೂ.7)ದಿಂದ ಉಪ ನೋಂದಣಾಧಿಕಾರಿಗಳ ಕಚೇರಿ ಕಾರ್ಯ ನಿರ್ವಹಿಸಲು ಆದೇಶ ಹೊರಡಿಸಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕಾರ್ಯ ನಿರ್ವಹಿಸಲು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.
ಈಗಾಗಲೇ ರಫ್ತು ಆಧರಿತ ಕೈಗಾರಿಕಾ ಘಟಕಗಳ ಕಾರ್ಯಾಚರಣೆ, ರಸಗೊಬ್ಬರಗಳ ಸಾಗಾಣಿಕೆಗೆ ಸರಕಾರ ಅನುಮತಿ ನೀಡಿದೆ. ಇದೀಗ ಜಿಲ್ಲಾ ರಿಜಿಸ್ಟರ್ ಮತ್ತು ಸಬ್ ರಿಜಿಸ್ಟರ್ ಕಚೇರಿಗಳು ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದೆ.
ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದು, ಪಾಜಿಟಿವ್ ರೇಟ್ ಕಡಿಮೆಯಾಗುತ್ತಿರುವ ಬೆನ್ನಲ್ಲೆ ಸರಕಾರ ಆನ್ ಲಾಕ್ ಪ್ರಕ್ರಿಯೆಗೆ ಅವಕಾಶ ನೀಡುತ್ತಿದೆ.