ರಸ್ತೆ ಅಪಘಾತ: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸ್ಥಿತಿ ಗಂಭೀರ

Update: 2021-06-13 17:25 GMT

ಬೆಂಗಳೂರು, ಜೂ.13: ಸ್ನೇಹಿತನ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್‍ನಿಂದ ಬಿದ್ದು ನಟ ಸಂಚಾರಿ ವಿಜಯ್ ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ತಡರಾತ್ರಿ ಜೆ.ಪಿ.ನಗರದಲ್ಲಿ ತಮ್ಮ ಸ್ನೇಹಿತರ ಮನೆಗೆ ಹೋಗಿ ವಾಪಸ್ಸು ಬರುತ್ತಿದ್ದ ವೇಳೆ ಬೈಕ್‍ನಿಂದ ಬಿದ್ದು ವಿಜಯ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಬಳಿಕ ದಾರಿಹೋಕರು ಅವರನ್ನು ಬನ್ನೇರುಘಟ್ಟದ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ಅದಕ್ಕಾಗಿ ರವಿವಾರ ಮುಂಜಾನೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಐಸಿಯುನಲ್ಲಿರುವ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ವಿಜಯ್ ಆಪ್ತರು ಮಾಹಿತಿ ನೀಡಿದ್ದಾರೆ.

ಕಂಬಕ್ಕೆ ಢಿಕ್ಕಿ?: ಸ್ನೇಹಿತರ ಮನೆಗೆ ಹೋಗಿ ವಾಪಸಾಗುವಾಗ ಬೈಕ್ ಸವಾರ ನವೀನ್ ವೇಗವಾಗಿ ಬೈಕ್ ಓಡಿಸುತ್ತಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಹಿಂಬದಿ ಸವಾರ ನಟ ವಿಜಯ್ ತಲೆಯ ಮೆದುಳಿನ ಬಲಭಾಗ ಹಾಗೂ ತೊಡೆಯ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ನವೀನ್ ಬೆನ್ನಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ.

ದೂರು: ವಿಜಯ್ ಅವರ ಸಹೋದರ ಸಿದ್ದೇಶ್ ಕುಮಾರ್ ಬೈಕ್ ಸವಾರನ ವಿರುದ್ಧ ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ನೇಹಿತನ ಮನೆಗೆ ಹೋಗಿ ಶನಿವಾರ ರಾತ್ರಿ 11 ಗಂಟೆ ವೇಳೆಗೆ ಜಯನಗರದ 7ನೆ ಹಂತದ ಬಳಿ ಬರುವಾಗ ಬೈಕ್‍ನಲ್ಲಿ ನಿಯಂತ್ರಣ ತಪ್ಪಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ನವೀನ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ವಿಜಯ್ ಆರೋಗ್ಯ ಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಅಪೋಲೊ ಆಸ್ಪತ್ರೆಯ ನರರೋಗ ತಜ್ಞ ಅರುಣ್ ನಾಯಕ್, ವಿಜಯ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಮುಂದಿನ 48 ಗಂಟೆಗಳ ಕಾಲ ಅವರ ಮೇಲೆ ನಿಗಾ ವಹಿಸಬೇಕಾಗುತ್ತದೆ. ಅವರಿಗೆ ಜೀವರಕ್ಷಕಗಳ ನೆರವಿನೊಂದಿಗೆ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ. ವಿಜಯ್ ಅವರ ಬಲ ತೊಡೆ ಮುರಿದಿದೆ. ಪ್ರಜ್ಞೆ ಬಂದ ಬಳಿಕವಷ್ಟೇ ಕಾಲಿನ ಗಾಯಗಳಿಗೆ ಮೂಳೆ ತಜ್ಞರು ಚಿಕಿತ್ಸೆ ನೀಡುತ್ತಾರೆ. ಮೊದಲು ಅವರು ಪ್ರಜ್ಞಾಸ್ಥಿತಿಗೆ ಬರಬೇಕಾಗಿದೆ ಎಂದು ಅವರು ವಿವರಿಸಿದರು.

ಇತ್ತೀಚೆಗೆ ಕೋವಿಡ್‍ಗೆ ತುತ್ತಾದವರಿಗೆ ಆಸ್ಪತ್ರೆ, ಆಮ್ಲಜನಕ ಸೌಲಭ್ಯ ಕಲ್ಪಿಸುವಲ್ಲಿ ನೆರವಾಗುವಲ್ಲಿ ವಿಜಯ್ ಸಕ್ರಿಯರಾಗಿದ್ದರು. ಅಪಘಾತ ಬಗ್ಗೆ ಹಲವು ಗಣ್ಯರು, ವಿಜಯ್ ಆಪ್ತರು, ಸಿನೆಮಾ ಕಲಾವಿದರು ಬೇಸರ ವ್ಯಕ್ತಪಡಿಸಿದ್ದು, ಶೀಘ್ರವಾಗಿ ಗುಣಮುಖ ಆಗಲಿ ಎಂದು ಪ್ರಾರ್ಥಿಸಿದ್ದಾರೆ.

ಚಿಕಿತ್ಸೆಗೆ ಸ್ಪಂದನೆ

ನಟ ಸಂಚಾರಿ ವಿಜಯ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನೂ ಗಂಭೀರ ಸ್ಥಿತಿಯಲ್ಲಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಪ್ರಾರ್ಥನೆ, ಹಾರೈಕೆ ಜೊತೆಗಿರಲಿ ಎಂದು ಸಿನೆಮಾ ನಿರ್ದೇಶಕ ಮಂಸೋರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News