ಪ್ರತಿಷ್ಠಿತ ವೃತ್ತ- ಮೇಲ್ಸೇತುವೆಗೆ ಸಿದ್ದಲಿಂಗಯ್ಯ ಹೆಸರು ನಾಮಕರಣ ಮಾಡಿ: ಸಿಎಂಗೆ ಶ್ರೀರಾಮುಲು ಮನವಿ

Update: 2021-06-14 14:05 GMT

ಬೆಂಗಳೂರು. ಜೂ.14: ಸಾಮಾಜಿಕ ಸಮಾನತೆಗಾಗಿ ಕಾವ್ಯ, ಸಾಹಿತ್ಯಗಳನ್ನು ರಚಿಸಿ ಪ್ರೇರಣೆ ನೀಡಿ, ಜನಮಾನಸದಲ್ಲಿರುವ ಖ್ಯಾತ ಲೇಖಕ, ಕವಿ ಡಾ.ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಷ್ಠಿತ ವೃತ್ತ ಅಥವಾ ಮೇಲ್ಸೇತೆಗೆ ಡಾ. ಸಿದ್ದಲಿಂಗಯ್ಯ ಅವರ ಹೆಸರನ್ನು ನಾಮಕರಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಡಾ.ಸಿದ್ದಲಿಂಗಯ್ಯ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಇಡೀ ರಾಜ್ಯಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ. ಡಾ.ಸಿದ್ದಲಿಂಗಯ್ಯ ಅವರ ಸಿದ್ಧಾಂತ ಮತ್ತು ಆದರ್ಶಗಳು ಸದಾ ಅನುಕರಣೀಯ. ಸಿದ್ದಲಿಂಗಯ್ಯ ಸಾಮಾಜಿಕ ಸಮಾನತೆಗಾಗಿ ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಖ್ಯಾತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅವಿಸ್ಮರಣೀಯವಾಗಿ ಕಾರ್ಯನಿರ್ವಹಿಸಿದ್ದಾರೆ. 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗುರುತರವಾದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಇವರು ರಾಜ್ಯೋತ್ಸವ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ.ಬಾಬು ಜಗಜೀವನರಾಮ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ ಎಂದು ಶ್ರೀರಾಮುಲು ಸ್ಮರಿಸಿದ್ದಾರೆ.

ಇವರ ಅಪರಿಮಿತ ಸಾಹಿತ್ಯ ಕೃಷಿ, ಜನಮಾನಸದಲ್ಲಿರುವ ಇವರ ಚಿಂತನೆಗಳು, ಆದರ್ಶಗಳು ಶ್ಲಾಘನೀಯವಾಗಿದ್ದು, ಸಾಹಿತ್ಯ ಪ್ರೇಮಿಗಳಿಗೆ, ಮುಂದಿನ ಪೀಳಿಗೆಗೆ ಡಾ.ಸಿದ್ದಲಿಂಗಯ್ಯ ಅವರ ಸಿದ್ದಾಂತ, ಆದರ್ಶಗಳು, ಚಿಂತನೆಗಳು ಪ್ರೇರಣೆ ನೀಡಿ, ಸದಾ ಸ್ಮೃತಿಪಠಲದಲ್ಲಿರುವಂತಹ ಕಾರ್ಯವನ್ನು ಕೈಗೊಳ್ಳಲು ಸಂಬಂಧಿಸಿದ  ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ  ಮುಖ್ಯಮಂತ್ರಿಗೆ ಶ್ರೀರಾಮುಲು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News