ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ: ಡಿ.ಕೆ.ಶಿವಕುಮಾರ್

Update: 2021-06-21 15:47 GMT

ಹೊಸದಿಲ್ಲಿ/ಬೆಂಗಳೂರು, ಜೂ. 21: `ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಅದರ, ಮಾರ್ಗಸೂಚಿ ಬಗ್ಗೆ ಪಕ್ಷದ ನಾಯಕರ ಜತೆ ಮಾತನಾಡಲು ಬಂದಿದ್ದೇನೆ. ಸದ್ಯಕ್ಕೆ ಕೆಲವು ಕಾರ್ಯಾಧ್ಯಕ್ಷರು ಮಾತ್ರ ಇದ್ದು, ಉಳಿದಂತೆ ಅಧಿಕೃತ ಸಮಿತಿ ಇಲ್ಲ. ಕೆಲವು ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಬದಲಾವಣೆ ಅಗತ್ಯವಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ದಿಲ್ಲಿಯಲ್ಲಿ ಎಐಸಿಸಿ ಮುಖಂಡರ ಭೇಟಿಗೆ ತೆರಳಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಮಿತಿ ಗಾತ್ರ ಹೆಚ್ಚಿಸಬೇಕೆ? ಅಥವಾ ಇಳಿಸಬೇಕೆ? ಎಂದು ಎರಡು-ಮೂರು ವರ್ಷಗಳಿಂದ ಚರ್ಚೆ ನಡೆದಿದೆ. ಈ ಬಗ್ಗೆ ನಮ್ಮ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತನಾಡಲು ಬಂದಿದ್ದೇನೆ. ನಾಳೆ ಬೆಳಗ್ಗೆ ಸುರ್ಜೆವಾಲ ಅವರನ್ನು ಭೇಟಿ ಮಾಡಲಿದ್ದೇನೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ, ಹೀಗಾಗಿ ಬಂದಿದ್ದೇನೆ. ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಸರಿ ಇಲ್ಲ. ಕೊರೋನ ಸಮಯದಲ್ಲಿ ದೂರದಿಂದಲೇ ಮಾತುಕತೆ ಮಾಡಬೇಕಿದ್ದು, ಹೀಗಾಗಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಲಾಗುವುದು. ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೇಳಿದ್ದು, ಅವರು ಬಿಡುವಿದ್ದರೆ ಭೇಟಿ ಮಾಡುವೆ' ಎಂದರು.

`ಪಕ್ಷದಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ನಾನು ಒಂದು ವರ್ಷದಿಂದ ನೋಡಿದ್ದೇನೆ. ಕೆಲವು ಬದಲಾವಣೆ ಆಗಬೇಕಿದೆ. ಎಲ್ಲೆಲ್ಲಿ ಐದಾರು ವರ್ಷಗಳಿಂದ ಅಧ್ಯಕ್ಷರಿದ್ದಾರೋ ಅಲ್ಲಿ ಬದಲಾವಣೆ ಮಾಡಬೇಕು ಎಂದು ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನವಾಗಿದೆ. ಬ್ಲಾಕ್ ಅಥವಾ ಜಿಲ್ಲಾಧ್ಯಕ್ಷರು ಸತತ ಎರಡು ಬಾರಿ ಅಧ್ಯಕ್ಷರಾಗಿದ್ದರೆ ಬದಲಾವಣೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಕೊರೋನ ಸಮಯದಲ್ಲಿ ಬದಲಾವಣೆ ಬೇಡ ಎಂದು ಸುಮ್ಮನಿದ್ದೆವು. ಕೊರೋನ ಸಮಯದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ತಿಳಿಸಿದರು.

ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ: `ಯಾವುದೇ ನಾಯಕರಾದರೂ ಪಾಲಿಕೆ ಹಾಗೂ ಪಂಚಾಯತ್ ಚುನಾವಣೆ ಗೆಲ್ಲಬೇಕು. ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಯಾರಾಗಬೇಕು ಎಂದು ತೀರ್ಮಾನ ಮಾಡೋರು ದಿಲ್ಲಿ ನಾಯಕರು. ಸಿಎಂ ಸ್ಥಾನದ ಬಗ್ಗೆ ಬಿಜೆಪಿಯವರು ಮಾತನಾಡಬೇಕು. ನಮ್ಮ ಪಕ್ಷದವರಲ್ಲ. ನಾನು ಪ್ರತಿಜ್ಞೆ ಸ್ವೀಕಾರ ಮಾಡುವಾಗ ಸ್ಪಷ್ಟವಾಗಿ ಹೇಳಿದ್ದೆ, ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಪಕ್ಷ ಪೂಜೆಗೆ ಮಾತ್ರ ಅವಕಾಶ ಎಂದು. ಆ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ' ಎಂದು ಶಿವಕುಮಾರ್ ಹೇಳಿದರು.

ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ. ಗುಂಪುಗಾರಿಕೆಗೆ ಅವಕಾಶವಿಲ್ಲ. ನನ್ನದು ಯಾವ ಗುಂಪು ಇಲ್ಲ, ಬೇರೆಯವರ ಗುಂಪೂ ಇಲ್ಲ. ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್. ಎಲ್ಲರೂ ಇದೇ ಹಾದಿಯಲ್ಲಿ ಸಾಗುತ್ತಾರೆ. ಸಣ್ಣ-ಪುಟ್ಟ ವಿಚಾರಗಳನ್ನು ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನನ್ನ ಹೆಸರನ್ನು ಯಾರೂ ಹೇಳಬಾರದು. ಸದ್ಯ ಮುಂಬರುವ ಚುನಾವಣೆಗಳಲ್ಲಿ ಗೆಲ್ಲಬೇಕು. ಕೊರೋನ ಸಮಯದಲ್ಲಿ ಜನರನ್ನು ಉಳಿಸೋಣ. ಆರ್ಥಿಕ ಸಂಕಟಕ್ಕೆ ಪರಿಹಾರ ಕೊಡಲು ಶ್ರಮಿಸೋಣ' ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ನಾನು ಈ ಹಿಂದೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಶೇ.95ರಷ್ಟು ಸಹಕಾರ ಸಿಗುತ್ತಿದೆ. ಉಳಿದ ಶೇ.5ರಷ್ಟು ಜನ ಕೊರೋನ ವಿಚಾರವಾಗಿ ಗಾಬರಿಯಾಗಿದ್ದಾರೆ. ಮನೆಯಿಂದ ಈಚೆ ಬರಲು ಹೆದರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಹರಿಪ್ರಸಾದ್, ದೇಶಪಾಂಡೆ, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ ಅವರು ಹೇಳಿದ ಕಡೆಯೆಲ್ಲ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಆ ಮೂಲಕ ಎಲ್ಲ ಹಿರಿಯ ನಾಯಕರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಕೊಟ್ಯಂತರ ರೂಪಾಯಿ ಸ್ವಂತ ಹಣ ಕೊಟ್ಟು ಲಸಿಕೆ ಹಾಕಿಸುತ್ತಿದ್ದಾರೆ. ಇದಕ್ಕಿಂತ ಇನ್ನೇನು ಸಹಕಾರ ಬೇಕು ಎಂದು ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಬ್ಲಾಕ್‍ಮೇಲ್ ಸಹಜ: `ಬಿಜೆಪಿಯಲ್ಲಿ ರಾಜೀನಾಮೆ ನೀಡುವ ಬ್ಲಾಕ್‍ಮೇಲ್‍ಗಳು ನಡೆಯುತ್ತಲೇ ಇವೆ. ನಾನೇಕೆ ಅವರ ವಿಚಾರ ಮಾತನಾಡಲಿ. ಅವರು ಪಕ್ಷಕ್ಕೆ ಬರುವ ಅರ್ಜಿ ಬಂದಾಗ ಆ ಬಗ್ಗೆ ಮಾತನಾಡೋಣ. ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಜನ ಎಲ್ಲವನ್ನು ನೋಡುತ್ತಿದ್ದಾರೆ. ವಿಪಕ್ಷವಾಗಿ ನಾವು ಈ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಉತ್ತರ ಕೊಡಬೇಕು. ತಮಿಳುನಾಡಿನಲ್ಲಿ ಮಾಜಿ ಸಚಿವರ ಅತ್ಯಾಚಾರ ಪ್ರಕರಣ ಏನಾಗಿದೆ? ಕರ್ನಾಟಕದಲ್ಲಿ ಯಾಕಾಗುತ್ತಿಲ್ಲ? ರಾಜ್ಯದ ಪೊಲೀಸ್ ವ್ಯವಸ್ಥೆ ಹಾಗೂ ಕಾನೂನಿಗೆ ಕಳಂಕ ಬರುತ್ತಿದೆ. ಆರೋಪಿಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಪ್ರಕರಣ ತಿರುಚಲು ಯತ್ನಿಸುತ್ತಿದ್ದಾರೆ' ಎಂದು ಅವರು ದೂರಿದರು.

ಬಿಜೆಪಿ ಶಾಸಕರೇ ಮಾಡಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಚರ್ಚೆ ಮಾಡಲು ವರ್ಚುವಲ್ ಸಭೆ ಕರೆಯಿರಿ ಎಂದು ಅಗ್ರಹಿಸಿದ್ದೇವೆ. ಈ ವಿಚಾರವಾಗಿ ತನಿಖೆ ಮಾಡಲು ಜಂಟಿ ಸದನ ಸಮಿತಿ ರಚಿಸಲು ಒತ್ತಾಯಿಸಿದ್ದೇವೆ. ನೀರಾವರಿ ಖಾತೆ ಇಟ್ಟುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಆರೋಪಗಳಿಗೆ ಉತ್ತರ ನೀಡದೆ, ಇವುಗಳನ್ನು ನಿಜ ಎಂದು ಒಪ್ಪಿಕೊಂಡಿದ್ದಾರೆ. ಕೊರೋನ ಪರಿಸ್ಥಿತಿಯಿಂದಾಗಿ ಸರಕಾರದ ಭ್ರಷ್ಟಾಚಾರ ವಿರುದ್ಧ ದೊಡ್ಡಮಟ್ಟದ ಹೋರಾಟ ಮಾಡಲು ಆಗುತ್ತಿಲ್ಲ' ಎಂದು ಹೇಳಿದರು.

`ಸಿದ್ದರಾಮಯ್ಯ ಅವರ ಕಾಲದಲ್ಲಿ ಬಂದ ವಿಚಾರಗಳ ಬಗ್ಗೆ ಬಿಜೆಪಿಯವರ ಹೋರಾಟ ನೋಡಿದ್ದೇವೆ. ಕುಮಾರಸ್ವಾಮಿ ಅವರ ಸರಕಾರ ಸಮಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಯಡಿಯೂರಪ್ಪನವರು ಸಿಬಿಐಗೆ ಕೊಟ್ಟರು. ಈಗ ಅವರದೇ ಸರಕಾರ, ಅವರದೇ ಪಕ್ಷದ ಶಾಸಕರು ಆರೋಪ ಮಾಡಿದ್ದು, ಈಗಲೂ ಸಿಬಿಐಗೆ ನೀಡಲಿ. ಹಳೇ ಪ್ರಕರಣದಲ್ಲಿ ಸಿಬಿಐನವರು ನಮ್ಮ ನಾಯಕರಾದ ಬ್ರಿಜೇಶ್ ಕಾಳಪ್ಪ ಅವರಿಗೆ ನೋಟೀಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಪಕ್ಷದ ವಕ್ತಾರರಿಗೂ ಕದ್ದಾಲಿಕೆಗೂ ಏನು ಸಂಬಂಧ?' ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಂತರ ಚುನಾವಣೆ ವಿಚಾರ ಬಿಜೆಪಿಗೆ ಬಿಟ್ಟ ವಿಚಾರ. ಒಂದು ವಿಚಾರ ಏನೆಂದರೆ ಬಿಜೆಪಿಯಿಂದ ಆಡಳಿತ ನಡೆಸಲು ಸಾಧ್ಯವಿಲ್ಲ ಎನ್ನುವುದು ಋಜುವಾತಾಗಿದೆ. ಕೊರೋನ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದ್ದನ್ನು ಬೆಳಕಿಗೆ ತಂದಿದ್ದೆವು. ಈಗ ಬಿಜೆಪಿ ಶಾಸಕರುಗಳೇ ನಮಗಿಂತ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಆ ಮೂಲಕ ನಮ್ಮ ಮಾತಿಗೆ ಪುಷ್ಠಿ ನೀಡುತ್ತಿದ್ದಾರೆ. ಸದ್ಯಕ್ಕೆ ನಾವು ಜಿಲ್ಲಾ ಪಂಚಾಯತ್, ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಗಮನ ಹರಿಸುತ್ತಿದ್ದೇವೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News