ಭಾರತವು ರಾಜ್ಯಗಳ ‘ಫೆಡರೇಶನ್’ ಅಲ್ಲ

Update: 2021-06-23 08:06 GMT

ಭಾರತ ಸಂವಿಧಾನದ ಆರ್ಟಿಕಲ್ 1- ಭಾರತವನ್ನು “India, That is Bharat, shall be Union Of States” (‘‘ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಯೂನಿಯನ್ ಆಗಿರುತ್ತದೆ’’) ಎಂದು ಹೇಳುತ್ತದೆ. ಆ ನಂತರದಲ್ಲೂ ಸಂವಿಧಾನದಲ್ಲಿ ಎಲ್ಲಿಯೂ ಭಾರತ ಸರಕಾರವನ್ನು ಸೂಚಿಸುವಾಗ ಕೇಂದ್ರ ಸರಕಾರ ಎಂದೂ ಗುರುತಿಸಿಲ್ಲ ಅಥವಾ ಫೆಡರಲ್ ಸರಕಾರ ಎಂತಲೂ ಸೂಚಿಸಿಲ್ಲ. ಸ್ಪಷ್ಟವಾಗಿ ‘ಯೂನಿಯನ್ ಸರಕಾರ’ ಎಂದು ಮಾತ್ರ ನಮೂದಿಸಿದೆ.


ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಡಿಎಂಕೆ ಸರಕಾರ ಇನ್ನುಮುಂದೆ ಭಾರತ ಸರಕಾರವನ್ನು ಕೇಂದ್ರ ಸರಕಾರ ಎಂದು ಸಂಬೋಧಿಸದೆ ‘ಒಂದ್ರೀಯ ಸರಕಾರ’- "Union Government' ಎಂದು ಸಂಬೋಧಿಸಬೇಕೆಂದು ಆದೇಶ ಹೊರಡಿಸಿದೆ. ಏಕೆಂದರೆ ಸಂವಿಧಾನದಲ್ಲಿ ಭಾರತ ಸರಕಾರವನ್ನು ಯೂನಿಯನ್ ಗವರ್ನಮೆಂಟ್ ಎಂದು ಗುರುತಿಸಲಾಗಿದೆಯೇ ವಿನಾ ಕೇಂದ್ರ ಸರಕಾರವೆಂದಲ್ಲ ಎಂಬುದು ಅವರ ಪ್ರತಿಪಾದನೆ. ಇದು ನಿಜ ಕೂಡಾ. ಭಾರತ ಸರಕಾರವನ್ನು ಕೇಂದ್ರ ಸರಕಾರ ಎಂದು ಸಂಬೋಧಿಸದಿರುವುದರ ಹಿಂದೆ ಮೋದಿ ಸರಕಾರದ ಆಳ್ವಿಕೆಯಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿ ಹಾಗೂ ಕೇಂದ್ರೀಕರಣದ ಧೋರಣೆಯನ್ನು ವಿರೋಧಿಸುವ ಆಶಯವೂ ಅಡಕವಾಗಿದೆ. ಅದೇ ಸಂದರ್ಭದಲ್ಲಿ ಭಾರತವು ಒಂದು ಫೆಡರಲ್- ಒಕ್ಕೂಟ ಸ್ವರೂಪಿ ಸಂವಿಧಾನವಾಗಿದ್ದು ಮೋದಿ ಸರಕಾರ ವ್ಯವಸ್ಥಿತವಾಗಿ ಹಾಗೂ ಅದರ ಹಿಂದಿನ ಯುಪಿಎ ಸರಕಾರ ಕೂಡಾ ಯಥಾಶಕ್ತಿ ಅದರ ಒಕ್ಕೂಟ ಸ್ವರೂಪವನ್ನು ತಿದ್ದುತ್ತಾ ಏಕರೂಪಿ ಹಾಗೂ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನಾಗಿ ರೂಪಿಸುತ್ತಿದೆ ಎಂಬ ಭಾವನೆಯೂ ಬಲಿಯುತ್ತಿದೆ. ಹೀಗಾಗಿ ಭಾರತ ಸರಕಾರವನ್ನು ಸಂಬೋಧಿಸುವಾಗ ‘ಒಕ್ಕೂಟ- ಫೆಡರಲ್’ ಸರಕಾರ ಎಂದು ಸಂಬೋಧಿಸಬೇಕೆ ವಿನಾ ಕೇಂದ್ರ ಸರಕಾರವೆಂದಲ್ಲ ಎಂಬ ಪ್ರತಿಪಾದನೆಯೂ ನಡೆಯುತ್ತಿದೆ.

ಆದರೆ ಭಾರತ ಸಂವಿಧಾನದ ಆರ್ಟಿಕಲ್ 1- ಭಾರತವನ್ನು “India, That is Bharat, shall be Union Of States” (‘‘ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಯೂನಿಯನ್ ಆಗಿರುತ್ತದೆ’’) ಎಂದು ಹೇಳುತ್ತದೆ. ಆ ನಂತರದಲ್ಲೂ ಸಂವಿಧಾನದಲ್ಲಿ ಎಲ್ಲಿಯೂ ಭಾರತ ಸರಕಾರವನ್ನು ಸೂಚಿಸುವಾಗ ಕೇಂದ್ರ ಸರಕಾರ ಎಂದೂ ಗುರುತಿಸಿಲ್ಲ ಅಥವಾ ಫೆಡರಲ್ ಸರಕಾರ ಎಂತಲೂ ಸೂಚಿಸಿಲ್ಲ. ಸ್ಪಷ್ಟವಾಗಿ ‘ಯೂನಿಯನ್ ಸರಕಾರ’ ಎಂದು ಮಾತ್ರ ನಮೂದಿಸಿದೆ.

ಹಾಗೂ ಯೂನಿಯನ್ ಎಂದರೆ ಫೆಡರಲ್ ಎಂದರ್ಥವಲ್ಲ! ಹಾಗಿದ್ದಲ್ಲಿ ಭಾರತ ಸಂವಿಧಾನದಲ್ಲಿ ಪ್ರಸ್ತಾಪಿತವಾಗಿರುವ ‘ಯೂನಿಯನ್’ನ ಅರ್ಥವೇನು? ಭಾರತದ ಸಂವಿಧಾನದ ಸ್ವರೂಪವೇನು? ಮೋದಿ ಸರಕಾರದಲ್ಲಿ ಹೆಚ್ಚುತ್ತಿರುವ ಸರ್ವಾಧಿಕಾರಿ ಧೋರಣೆಗಳಿಗೆ ಸಂವಿಧಾನಿಕ ಮಾನ್ಯತೆಯಿದೆಯೇ? ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಅವರು ಸಂವಿಧಾನದ ಮೂಲಕವೇ ಸರ್ವಾಧಿಕಾರಿ ಹಿಂದೂರಾಷ್ಟ್ರ ತರುವ ಮಾತುಗಳನ್ನಾಡುತ್ತಿದ್ದಾರೆಯೇ? ಹಾಗಿದ್ದಲ್ಲಿ ಯೂನಿಯನ್ ಅನ್ನು ಒಕ್ಕೂಟ ಎಂದು ಭಾಷಾಂತರ ಮಾಡಿಕೊಂಡು ಬಳಸುವುದು ಐತಿಹಾಸಿಕವಾಗಿ ಹಾಗೂ ಆಗಬೇಕಿರುವ ಬದಲಾವಣೆಯ ದೃಷ್ಟಿಯಿಂದ ಸರಿಯಾದ ರಾಜಕೀಯ ನಡೆಯಾಗುತ್ತದೆಯೇ? ಇವೆಲ್ಲಕ್ಕೂ ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕೆಂದರೆ ಆಧುನಿಕ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರಜಾತಾಂತ್ರಿಕ ಸಂವಿಧಾನದ ಮಾದರಿಗಳನ್ನೂ, ಭಾರತದ ಸಂವಿಧಾನ ರಚನೆಯಾಗುತ್ತಿದ್ದಾಗ ಇದ್ದ ಸಂದರ್ಭವನ್ನೂ ಹಾಗೂ ಈ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಸಾರವನ್ನು ಗಮನಿಸಬೇಕಾಗುತ್ತದೆ.
ಒಪ್ಪಂದದ ಒಕ್ಕೂಟ ಮತ್ತು ಬಲವಂತದ ಕೂಟ
ಫೆಡರಲ್- ಎಂಬ ಪದದ ಮೂಲ Foedus ಎಂಬ ಲ್ಯಾಟಿನ್ ಪದವಾಗಿದ್ದು ‘ಒಪ್ಪಂದ’ ಎಂಬ ಅರ್ಥವನ್ನು ಕೊಡುತ್ತದೆ. ಹೀಗಾಗಿ ಹಲವು ಭಿನ್ನ ಘಟಕಗಳು ಪರಸ್ಪರ ಒಪ್ಪಂದದ ಮೂಲಕ ಒಗ್ಗೂಡಿ ಏರ್ಪಡುವ ಘಟಕವನ್ನು ಫೆಡರಲ್- ಒಕ್ಕೂಟ ಎಂದು ಕರೆಯಲಾಗುತ್ತದೆ. ಇಲ್ಲಿ ಭಿನ್ನ ಘಟಕಗಳು ಒಪ್ಪಂದದ ಆಧಾರದ ಮೇಲೆ ‘‘ಒಗ್ಗೂಡಲು ಮುಂದೆ ಬರುತ್ತವೆ’’ (Coming Together ) ಹಾಗೂ ಅಂತಹ ಏರ್ಪಾಡಿನಲ್ಲಿ ಭಿನ್ನ ಘಟಕಗಳಿಗೆ ಅತಿ ಹೆಚ್ಚು ಸ್ವಾಯತ್ತತೆ ಇರುತ್ತದೆ. ಆದರೆ ಕೆಲವೊಮ್ಮೆ ಹಲವು ಭಿನ್ನ ಘಟಕಗಳನ್ನು ಒಂದಾಗಿ ‘‘ಹಿಡಿದಿಡಲಾಗುತ್ತದೆ’’ (Holding Together ). ಅಲ್ಲಿ ಒಪ್ಪಂದವಿರುವುದಿಲ್ಲ. ಹೀಗಾಗಿ ಅಲ್ಲಿನ ಉಪ ಘಟಕಗಳಿಗೆ ಫೆಡರಲ್ ಸ್ವರೂಪದ ರಚನೆಗಳಲ್ಲಿರುವಷ್ಟು ಸ್ವಾಯತ್ತತೆ ಇರುವುದಿಲ್ಲ.

ಆಧುನಿಕ ಜಗತ್ತಿನ ಇತಿಹಾಸದಲ್ಲಿ ಫೆಡರಲ್ ಸಂವಿಧಾನಗಳಿಗೆ ಅತಿ ದೊಡ್ಡ ಉದಾಹರಣೆ ಅಮೆರಿಕ ಸಂಯುಕ್ತ ಸಂಸ್ಥಾನದ ಫೆಡರಲ್ ಒಕ್ಕೂಟ. ಅಲ್ಲಿ ವಿವಿಧ ಪ್ರಾಂತೀಯ ಘಟಕಗಳು ಪೂರ್ವ ಶರತ್ತು ಹಾಗೂ ಪೂರ್ವ ಒಪ್ಪಂದಗಳ ಅನ್ವಯ ಒಂದು ಫೆಡರಲ್ ಒಕ್ಕೂಟವಾಗಿ ಏರ್ಪಟ್ಟವು. ಹೀಗಾಗಿ ಅಲ್ಲಿನ 50 ಭಿನ್ನ ರಾಜ್ಯಗಳು ಸಂಪೂರ್ಣ ಸ್ವಾಯತ್ತತೆಯನ್ನು ಹೊಂದಿವೆ. ಅಮೆರಿಕದ ಫೆಡರಲ್ ಸರಕಾರ ಕೊಡುವ ನಾಗರಿಕತ್ವದ ಜೊತೆಗೆ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ನಾಗರಿಕತ್ವವನ್ನು ಕೊಡುತ್ತದೆ. ಹಾಗೆಯೇ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಹಾಗೂ ಆಯೋಗವನ್ನು ಹೊಂದಿದೆ. ಒಕ್ಕೂಟ ಸರಕಾರಕ್ಕೆ ಸೀಮಿತ ಅಧಿಕಾರವಿದೆ. ಸಂವಿಧಾನದಲ್ಲಿ ಹೇಳದೆ ಉಳಿದುಹೋದ ಅಥವಾ ಹೊಸದಾಗಿ ಉದ್ಭವಿಸುವ ವಿಷಯಗಳ ಮೇಲೆ ಶಾಸನ ಮಾಡುವ ಅಂತಿಮ ಅಧಿಕಾರ ರಾಜ್ಯಗಳಿಗೇ ನೀಡಲಾಗಿದೆ. ರಾಜ್ಯಗಳ ಗಡಿಗಳ ಮೇಲೆ ಪರಮಾಧಿಕಾರವೂ ಆಯಾ ರಾಜ್ಯಗಳದ್ದೇ ಆಗಿದೆ. ಹಾಗೆಯೇ ಈ ಹಿಂದಿನ ಸೋವಿಯತ್ ಗಣರಾಜ್ಯಗಳ ಒಕ್ಕೂಟವೂ ಸಹ ತನ್ನ ಘಟಕಗಳಿಗೆ ಸಂವಿಧಾನದಲ್ಲಿ ಸಂಪೂರ್ಣ ಸ್ವಾಯತ್ತೆಯನ್ನು ಘೋಷಿಸಿತ್ತು ಮತ್ತು ಸ್ವನಿರ್ಣಯ ಅಧಿಕಾರದ ಜೊತೆಗೆ ಒಕ್ಕೂಟದಿಂದ ಬೇರ್ಪಡುವ ಹಕ್ಕು ಆ ಸಂವಿಧಾನದಲ್ಲಿ ಅಂತರ್ಗತವಾಗಿತ್ತು. ಇದರ ಜೊತೆಗೆ ಕೆನಡಾ ಮತ್ತು ಸ್ವಿಟ್ಸರ್‌ಲ್ಯಾಂಡ್ ಸಂವಿಧಾನಗಳು ಯೂನಿಯನ್ ಎಂಬ ಹೆಸರಿಟ್ಟುಕೊಂಡಿದ್ದರೂ ಪರಿಪೂರ್ಣ ಫೆಡರಲ್ ಸಂವಿಧಾನಗಳಾಗಿವೆ. ಆಸ್ಟ್ರೇಲಿಯಾ ಕೂಡಾ ಒಕ್ಕೂಟದ ಪಟ್ಟಿಗೆ ಸೇರಿಕೊಳ್ಳುತ್ತವೆ. ಆದರೆ ವರ್ಣಭೇದದ ದ. ಆಫ್ರಿಕಾ ಸಂವಿಧಾನ ಇದಕ್ಕೆ ತದ್ವಿರುದ್ಧವಾಗಿ ಭಿನ್ನಘಟಕಗಳನ್ನು ಒಗ್ಗೂಡಿಸಿ ಮಾಡಿದ ಯೂನಿಯನ್ ಆಗಿತ್ತು.

ಭಾರತ ಸಂವಿಧಾನ ಸಭೆಯ ದ್ವಂದ್ವ ದುರಂತಗಳು

ಭಾರತವು ಸ್ವತಂತ್ರಗೊಂಡು ತನ್ನದೇ ಆದ ಸಂವಿಧಾನವನ್ನು ರಚಿಸಿಕೊಳ್ಳಲು ಸಭೆ ಸೇರುವ ಹೊತ್ತಿನಲ್ಲಿ ಭಾರತದ ಮುಂದೆ ಈ ಮೇಲಿನ ಉದಾಹರಣೆಗಳಿದ್ದವು. ಸ್ವಾತಂತ್ರ ಹೋರಾಟದುದ್ದಕ್ಕೂ ಭಾರತವನ್ನು ಒಂದು ನೈಜವಾದ ಫೆಡರಲ್ ರಿಪಬ್ಲಿಕ್(ಒಕ್ಕೂಟ ಗಣರಾಜ್ಯ)ಆಗಿ ರೂಪಿಸಲಾಗುವುದೆಂಬ ಭರವಸೆಯನ್ನೇ ಜನತೆಗೆ ನೀಡಲಾಗಿತ್ತು. ಆದರೆ ಭಾರತದ ಸಂವಿಧಾನ ಸಭೆಯು ಕರಡು ಸಂವಿಧಾನದ ಚರ್ಚೆಯನ್ನು ಕೈಗೆತ್ತಿಕೊಳ್ಳುವ ವೇಳೆಗೆ ಭಾರತದ ವಿಭಜನೆಯಾಗಿತ್ತು. ಹೀಗಾಗಿ ಒಂದು ಬಲವಾದ ಕೇಂದ್ರ ಸರಕಾರವಿರಬೇಕೆಂಬ ಧೋರಣೆಗಳೂ ಬಲಪಡೆದುಕೊಂಡಿತ್ತು. ಭಾರತದ ಸಂವಿಧಾನ ಸಭೆಯಲ್ಲಿ 1948ರ ನವೆಂಬರ್ 15-18ರ ವರೆಗೆ ಆರ್ಟಿಕಲ್ 1ರ ಬಗ್ಗೆ ಚರ್ಚೆ ನಡೆಯಿತು. ಅದಕ್ಕೂ ಪೂರ್ವಭಾವಿಯಾಗಿ ಕರಡು ರಚನೆಗೆ ಮುನ್ನ ನಡೆದ ಸಭೆಯಲ್ಲಿ ಭಾರತವನ್ನು ಒಂದು ಫೆಡರಲ್ ರಿಪಬ್ಲಿಕ್ ಆಗಿ ರೂಪಿಸಬೇಕೆಂಬ ಪ್ರಸ್ತಾಪವನ್ನೇ ಮಾಡಲಾಗಿತ್ತು. ಆದರೆ ಕರಡಿನಲ್ಲಿ ಅದು ‘ರಾಜ್ಯಗಳ ಯೂನಿಯನ್’ ಎಂದು ಬದಲಾಗಿತ್ತು. ಕರಡು ರಚನಾ ಸಭೆಯಲ್ಲಿ ಇದಕ್ಕೆ ಹಲವಾರು ತಿದ್ದುಪಡಿಗಳೂ ಪ್ರಸ್ತಾಪವಾಗಿದ್ದವು. ಅದರಲ್ಲಿ ಮುಖ್ಯವಾಗಿ ಬಲಪಂಥೀಯ ಧೋರಣೆಯ ಎಚ್.ವಿ. ಕಾಮತ್ ಅವರು ರಾಜ್ಯಗಳನ್ನು ರಾಜ್ಯಗಳೆಂದು ಕರೆಯದೆ ಪ್ರದೇಶ ಎಂದು ಕರೆಯಬೇಕೆಂದು ಪ್ರಸ್ತಾಪಿಸಿದ್ದರು. ಇದರ ಜೊತೆಗೆ ರಾಜ್ಯ ಅಥವಾ ಪ್ರದೇಶ ಎಂಬ ಘಟಕಗಳನ್ನೂ ಪ್ರಸ್ತಾಪಿಸದೆ ಕೇವಲ ಭಾರತ ಗಣರಾಜ್ಯ ಎಂದು ಹೆಸರಿಸಬೇಕೆಂಬ ತಿದ್ದುಪಡಿಗಳನ್ನೂ ಮಂಡಿಸಲಾಯಿತು. ಕೆ.ಟಿ.ಶಾ ಅವರು ಭಾರತವನ್ನು "Secular, Fedaral, Socialist Union Of States' (ರಾಜ್ಯಗಳ ಸೆಕ್ಯುಲರ್, ಸಮಾಜವಾದಿ, ಫೆಡರಲ್ ಮತ್ತು ಸಮಾಜವಾದಿ ಯೂನಿಯನ್) ಎಂದು ಕರೆಯಬೇಕೆಂದು ಪ್ರತಿಪಾದಿಸಿದ್ದರು.

ಮೌಲಾನಾ ಹಝರತ್ ಮೊಹಾನಿ ಎಂಬ ಸಂವಿಧಾನ ರಚನಾ ಸಭೆಯ ಧರ್ಮಭೀರು ಕಮ್ಯುನಿಸ್ಟ್ ಸದಸ್ಯರು ಭಾರತವನ್ನು ಸೋವಿಯತ್ ಗಣರಾಜ್ಯದ ರೀತಿಯಲ್ಲಿ "Union Of Indian Socialistic Republics' (ಸಮಾಜವಾದಿ ಗಣರಾಜ್ಯಗಳ ಭಾರತೀಯ ಯೂನಿಯನ್) ಆಗಬೇಕೆಂದು ಪ್ರತಿಪಾದಿಸಿದ್ದರು. ಅಂದರೆ ಭಾರತ ಯೂನಿಯನ್‌ನೊಳಗಿನ ಪ್ರತಿಯೊಂದು ರಾಜ್ಯವೂ ಸ್ವಾಯತ್ತ ಸಮಾಜವಾದಿ ಗಣರಾಜ್ಯಗಳಾಗಿದ್ದು ಒಕ್ಕೂಟದೊಳಗಿನ ಸಮಭಾಗಿ ಘಟಕಗಳಾಗಿರಬೇಕು ಎಂಬುದು ಅವರ ಒತ್ತಾಸೆಯಾಗಿತ್ತು. ಭಾರತದ ಸಂವಿಧಾನ ರಚನೆಯನ್ನು ಮಾಡುವಾಗ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಐರ್‌ಲ್ಯಾಂಡ್ ಸಂವಿಧಾನಗಳನ್ನು ಪರಿಶೀಲಿಸಿದಷ್ಟು ಸೋವಿಯತ್ ಒಕ್ಕೂಟದ ಸಂವಿಧಾನವನ್ನು ಪರಿಶೀಲಿಸಲಾಗಿಲ್ಲವೆಂಬುದು ಅವರ ಬಲವಾದ ಆಕ್ಷೇಪಣೆಯೂ ಆಗಿತ್ತು. ಇಷ್ಟೆಲ್ಲಾ ಪ್ರತಿಪಾದನೆಗಳ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆ ನಡೆದು ಪ್ರಜ್ನಾಪೂರ್ವಕವಾಗಿ ಅಂದಿನ ಸಂವಿಧಾನ ಸಭೆ:

 ಭಾರತವನ್ನು ಒಂದು ಫೆಡರಲ್ ಒಕ್ಕೂಟವೆಂದು ಕರೆಯದೇ ‘ಯೂನಿಯನ್’ ಎಂದು ಕರೆಯಲು ತೀರ್ಮಾನಿಸಿತು. ಹಾಗೂ ಆ ತೀರ್ಮಾನಕ್ಕೆ ಬರಲು ಕಾರಣವೇನೆಂದು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಸುದೀರ್ಘ ವಿವರಣೆಯನ್ನೂ ನೀಡುತ್ತಾರೆ.

ಭಾರತವೆಂಬ ‘ಹಿಡಿದಿಟ್ಟ ಸಂಸ್ಥಾನಗಳ ಕೂಟ’
ಸಂವಿಧಾನ ರಚನಾ ಸಭೆಯ ಪ್ರಕಾರ ಭಾರತವನ್ನು ಉದ್ದೇಶಪೂರ್ವಕವಾಗಿಯೇ ಫೆಡರಲ್ ಎಂದು ಕರೆಯದೇ ‘ಯೂನಿಯನ್’ ಎಂದು ಕರೆಯಲಾಗಿದೆ. -ಏಕೆಂದರೆ ಭಾರತ ಒಕ್ಕೂಟವು ಅಮೆರಿಕದಂತೆ ಅದರ ಭಿನ್ನ ಘಟಕಗಳೊಡನೆ ಆದ ಪೂರ್ವ ಒಪ್ಪಂದದಂತೆ ಅಸ್ತಿತ್ವಕ್ಕೆ ಬಂದ ಗಣರಾಜ್ಯವಲ್ಲ.

- ಭಾರತ ಗಣರಾಜ್ಯಗಳೊಳಗಿನ ರಾಜ್ಯ ಘಟಕಗಳಿಗೆ ಭಾರತದಿಂದ ಬೇರ್ಪಡುವ ಸ್ವಾತಂತ್ರ್ಯವಿಲ್ಲ. -ಸಂವಿಧಾನದಲ್ಲಿ ಅಳಿದುಳಿದ (ರೆಸಿಡ್ಯುಅಲ್) ಅಧಿಕಾರವು ಯೂನಿಯನ್ ಸರಕಾರಕ್ಕಿರುತ್ತದೆಯೇ ವಿನಾ ರಾಜ್ಯ ಸರಕಾರಗಳಿಗಲ್ಲ ಮತ್ತು - ರಾಜ್ಯಗಳ ಗಡಿಯನ್ನು ಬದಲಿಸುವ ಸಾರ್ವಭೌಮಿ ಅಧಿಕಾರ ಯೂನಿಯನ್ ಸರಕಾರಕ್ಕಿರುತ್ತದೆಯೇ ವಿನಾ ರಾಜ್ಯಗಳಿಗಲ್ಲ.

 ಅರ್ಥಾತ್ ಭಾರತವು ಬದಲಿಸಲಾಗದ ರಾಜ್ಯಗಳ ಬದಲಿಸಲಾಗದ ಯೂನಿಯನ್ ಅಲ್ಲ. ಬದಲಿಗೆ ಬದಲಿಸಬಹುದಾದ ರಾಜ್ಯಗಳ ಆದರೆ ಬದಲಿಸಲಾಗದ ಯೂನಿಯನ್ ಆಗಿರುತ್ತದೆ. ಇದರ ಜೊತೆಗೆ ಸ್ವತಂತ್ರವಾಗಿ ತೆರಿಗೆ ವಿಧಿಸುವ ಹಾಗೂ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ನೇರ ಸಾರ್ವಭೌಮಿ ಅಧಿಕಾರ ಪಡೆದುಕೊಂಡಿರುವ ಘಟಕಗಳನ್ನುಳ್ಳ ಅರೆ ಫೆಡರಲ್ ಸ್ವರೂಪವನ್ನೂ ಸಹ ಸಂವಿಧಾನದಲ್ಲಿ ಅಡಕಗೊಳಿಸಲಾಯಿತು. ಅದರ ಭಾಗವಾಗಿಯೇ ಏಳನೇ ಶೆಡ್ಯೂಲಿನಲ್ಲಿ ಯೂನಿಯನ್ ಸರಕಾರಕ್ಕಿರುವ ಅಧಿಕಾರ, ರಾಜ್ಯಗಳಿಗಿರುವ ಅಧಿಕಾರವನ್ನು ಸ್ಪಷ್ಟಪಡಿಸುವ ಬಾಬತ್ತುಗಳನ್ನು ಸಂವಿಧಾನದಲ್ಲೇ ಸೇರಿಸಲಾಯಿತು. ಆದರೆ ಅದರ ಜೊತೆಗೆ ಯೂನಿಯನ್‌ನಮಧ್ಯಪ್ರವೇಶವನ್ನು ಹಿಂಬಾಗಿಲಿಂದ ಹೆಚ್ಚಿಸುವ ಸಮವರ್ತಿ ಪಟ್ಟಿಯನ್ನು ಸೇರಿಸಲಾಯಿತು! ಅಂಬೇಡ್ಕರ್ ಅವರ ಮಾತುಗಳಲ್ಲೇ ಹೇಳುವುದಾದರೆ: ‘‘ಸಂವಿಧಾನದಲ್ಲಿ ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಸಾಂವಿಧಾನಿಕ ಅಧಿಕಾರಗಳನ್ನು ಪಡೆದಿರುವ ಯೂನಿಯನ್ ಸರಕಾರವು ಕೇಂದ್ರದಲ್ಲಿಯೂ ಹಾಗೂ ರಾಜ್ಯ ಸರಕಾರಗಳನ್ನೂ ಅಂಚಿನಲ್ಲಿಯೂ ಹೊಂದಿರುವ’’ ಒಕ್ಕೂಟ ಸ್ವರೂಪವನ್ನು ಭಾರತದ ಯೂನಿಯನ್ ಹೊಂದಿದೆ. ಹೀಗಾಗಿ ದಿಲ್ಲಿ ದರ್ಬಾರನ್ನು ಕೇಂದ್ರ ಸರಕಾರ ಎಂದರೂ ಅಥವಾ ಯೂನಿಯನ್ ಸರಕಾರ ಎಂದರೂ ಸಾಂವಿಧಾನಿಕವಾಗಿ ತಪ್ಪೇನಿಲ್ಲ. ಆದರೆ, ಕೇಳಬೇಕಿರುವುದು ಕೇಂದ್ರದಲ್ಲಿರುವುದು ಕೇಂದ್ರೀಕೃತವಾದ ಸರ್ವಾಧಿಕಾರವನ್ನು ಹೊಂದಿರುವ ಅಥವಾ ಹೊಂದುತ್ತಿರುವ ಸರಕಾರವೋ ಮತ್ತು ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ ಎಂಬ ಪ್ರಶ್ನೆಗಳನ್ನು..
 
 ಅದೇ ಚರ್ಚೆಯಲ್ಲಿ ಅಂಬೇಡ್ಕರ್ ಅವರು ‘‘ಇಂದಿನ ಆಧುನಿಕ ಜಾಗತಿಕ ಸಂದರ್ಭದಲ್ಲಿ ನೀವು ಎಷ್ಟೇ ಬೇಡವೆಂದರೂ ಕೇಂದ್ರವು ಹೆಚ್ಚಿನ ಅಧಿಕಾರ ಪಡೆಯುವುದನ್ನು ತಡೆಯಲು ಸಾಧ್ಯವಿಲ್ಲ. ಏಕೆಂದರೆ ಆಧುನಿಕ ಜಗತ್ತಿನ ಸಂದರ್ಭವೇ ಹೆಚ್ಚಿನ ಕೇಂದ್ರೀಕರಣದ ಕಡೆಗಿದೆ’’ ಎಂದು ವಿವರಿಸುತ್ತಾರೆ. ಹೆಚ್ಚಿನ ವಿವರಗಳನ್ನು ಆಸಕ್ತರು ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಗಳಿರುವ ಈ ವೆಬ್ ಸೈಟನ್ನು ಸಂದರ್ಶಿಸಬಹುದು :http://164.100.47.194/Loksabha/Debates/Result_Nw_15.aspx?dbsl=144&ser=&smode=

ಈಗಾಗಲೇ ಚರ್ಚಿಸಿದಂತೆ ಸಂವಿಧಾನ ಸಭೆಯು ಕರಡು ಚರ್ಚೆಯನ್ನು ಕೈಗೆತ್ತಿಕೊಳ್ಳುವ ವೇಳೆಗೆ ದೇಶವಿಭಜನೆಯ ಕರಾಳ ನೆರಳು ಸದಸ್ಯರ ಮನಸ್ಸನ್ನು ಆವರಿಸಿತ್ತು. ಹೀಗಾಗಿ ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಭಾರತವು ಬಲವಾದ ಕೇಂದ್ರ ಸರಕಾರವಿಲ್ಲದೆ ಉಳಿಯುವುದು ಅಸಾಧ್ಯ ಎಂಬ ಗ್ರಹಿಕೆ ವ್ಯಾಪಕವಾಗಿತ್ತು. ಅದು ಇಡೀ ಭಾರತವನ್ನು ಇಡಿಯಾದ ಮಾರುಕಟ್ಟೆಯಾಗಿ ಪಡೆಯಬಯಸಿದ ಭಾರತದ ಬಂಡವಾಳಶಾಹಿಗಳನ್ನೂ ಒಳಗೊಂಡಂತೆ ಆಳುವವರ್ಗಗಳ ಹಿತಾಸಕ್ತಿಯೂ ಆಗಿತ್ತು. ಹೀಗಾಗಿ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ಕೇಳುವವರೂ ಹಾಗೂ ಮೈನಾರಿಟಿಗಳಿಗೆ ಹೆಚ್ಚಿನ ಹಕ್ಕುಗಳನ್ನು ಕೇಳುವವರ ಧ್ವನಿ ಅಮಾನ್ಯಗೊಂಡಿತ್ತು. ಆದಷ್ಟು ಬೇಗ ಭಾರತವು ಭಿನ್ನತೆಗಳಿಲ್ಲದ ಒಂದೇ ದೇಶವಾಗಿ ರೂಪುಗೊಳ್ಳುವುದು ಅತ್ಯಗತ್ಯವೆಂಬುದು ಅಂದಿನ ಸಂವಿಧಾನ ಕರ್ತರ ಪ್ರಧಾನ ಧೋರಣೆಯಾಗಿತ್ತು. ಅಂಬೇಡ್ಕರ್ ಅವರ ಮಾತಿನಲ್ಲೇ ಹೇಳುವುದಾದರೆ ‘‘ಬಿಸ್ಮಾರ್ಕನ ನೇತೃತ್ವದಲ್ಲಿ 1870ರಲ್ಲಿ ಜರ್ಮನಿಯು ಒಂದು ದೇಶವಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಜರ್ಮನಿಯೊಳಗೆ 25 ಭಿನ್ನ ಘಟಕಗಳಿದ್ದವು. ಅದರಲ್ಲಿ ಮೂರು ಮಾತ್ರ ಗಣರಾಜ್ಯ. ಉಳಿದದ್ದೆಲ್ಲ ರಾಜ ಸಂಸ್ಥಾನಗಳು. ಆದರೆ ಕ್ರಮೇಣ ಐತಿಹಾಸಿಕ ಪ್ರಕ್ರಿಯೆಯಲ್ಲಿ ಅವೆಲ್ಲವೂ ಜರ್ಮನಿಯೊಳಗೆ ವಿಲೀನಗೊಂಡು ಜರ್ಮನಿ ಒಂದೇ ದೇಶವಾಯಿತು. ಭಾರತದಲ್ಲಿ ಈ ಸಂವಿಧಾನ ಮುಖೇನ ಆ ಪ್ರಕ್ರಿಯೆ ಇನ್ನೂ ತ್ವರಿತವಾಗಿ ನಡೆಯಲಿದೆ ಎಂಬುದು ಗೋಚರಿಸುತ್ತಿದೆ.’’ (http://164.100.47.194/Loksabha/Debates/Result_Nw_15.aspx?dbsl=144&ser=&smode=)

 ಸಂವಿಧಾನ ಸಭೆಯ ಸಂದರ್ಭ ಹಾಗೂ ಮೇಲೆ ಚರ್ಚಿಸಲಾದ ಪ್ರಧಾನ ಧೋರಣೆಗಳ ಪರಿಣಾಮವಾಗಿ ಭಾರತವನ್ನು ಫೆಡರಲ್ ಎಂದು ಕರೆಯಲಿಲ್ಲ. ಬದಲಿಗೆ ರಾಜ್ಯಗಳಿಗಿಂತ ಕೇಂದ್ರಕ್ಕೆ ಹೆಚ್ಚು ಸಾಂವಿಧಾನಿಕ ಅಧಿಕಾರವಿರುವ ‘ಯೂನಿಯನ್’ ಆಗಿ ರಚಿಸಲಾಗಿತ್ತು. ಬಲಿಷ್ಠ ಕೇಂದ್ರವಾಯಿತು. ಬಲಿಷ್ಠ ಭಾರತವಾಯಿತೇ? 
ಆದ್ದರಿಂದಲೇ:

-ಯೂನಿಯನ್‌ನ (ಕೇಂದ್ರ) ಪಟ್ಟಿಯಲ್ಲಿ ರಾಜ್ಯಕ್ಕಿಂತ ಹೆಚ್ಚಿನ ಬಾಬತ್ತುಗಳನ್ನು ಒದಗಿಸಲಾಗಿದೆ. -ಯೂನಿಯನ್‌ನ ಸಂಸತ್ತಿಗೆ ರಾಜ್ಯದ ಗಡಿಗಳನ್ನು ಬದಲಿಸುವ ಪರಮಾಧಿಕಾರವನ್ನು ನೀಡಲಾಗಿದೆ. -ಸಮವರ್ತಿ ಪಟ್ಟಿಯಲ್ಲಿರುವ ಯಾವುದೇ ವಿಷಯಗಳ ಬಗ್ಗೆ ಯೂನಿಯನ್ ಮತ್ತು ರಾಜ್ಯಗಳ ನಡುವೆ ತಕರಾರು ಉಂಟಾದರೆ ಅಂತಿಮವಾಗಿ ಯೂನಿಯನ್‌ನ ಶಾಸನವೇ ಚಾಲ್ತಿಯಾಗುತ್ತದೆ.
-ವಿಶೇಷ ಸಂದರ್ಭದಲ್ಲಿ ರಾಜ್ಯಗಳ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆಯೂ ಕೇಂದ್ರವೇ ಶಾಸನ ರಚಿಸಬಹುದಾಗಿದೆ.
-ಕೇಂದ್ರ ಸರಕಾರಕ್ಕೆ ರಾಜ್ಯಗಳಿಗಿಂತ ಅಪರಿಮಿತ ಆರ್ಥಿಕ ಸಂಪನ್ಮೂಲ ಶಕ್ತಿ ಮತ್ತು ಅಧಿಕಾರಗಳಿರುವುದು ಮಾತ್ರವಲ್ಲದೆ ಅದನ್ನು ರಾಜ್ಯಗಳಿಗೆ ಹಂಚುವ ವಿಷಯದಲ್ಲೂ ಅಪರಿಮಿತ ಅಧಿಕಾರವಿದೆ.
-ರಾಜ್ಯ ಸರಕಾರಗಳನ್ನು ಬೇಕೆಂದಾಗ ಕಿತ್ತುಹಾಕಿ ರಾಷ್ಟ್ರಪತಿ ಆಡಳಿತ ಹೇರುವ ಅಧಿಕಾರವು ಯೂನಿಯನ್ ಸರಕಾರಕ್ಕೆ ಸಾಂವಿಧಾನಿಕವಾಗಿಯೇ ಕೊಡಮಾಡಲ್ಪಟ್ಟಿದೆ.

- ಇದಲ್ಲದೆ ದೇಶವ್ಯಾಪಿ ಏಕರೂಪಿ ಚುನಾವಣೆ, ನಾಗರಿಕತ್ವ, ಆಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆಯ ಕೀಲಿಕೈ ಕೂಡಾ ಯೂನಿಯನ್ ಬಳಿಯೇ ಇರುತ್ತದೆ. ಈ ಎಲ್ಲಾ ಕಾರಣದಿಂದಾಗಿಯೇ ಆಸ್ಟ್ರೇಲಿಯಾದ ಸಂವಿಧಾನ ತಜ್ಞ ಕೆ.ಸಿ. ವೀಯರ್ ಅವರು ಭಾರತದ ಸಂವಿಧಾನವನ್ನು ‘‘ಕಾಲುಭಾಗ ಫೆಡರಲ್- ಮುಕ್ಕಾಲು ಭಾಗ ಏಕಸ್ವರೂಪಿ’’ ಎಂದು ಬಣ್ಣಿಸುತ್ತಾರೆ. ಅಷ್ಟು ಮಾತ್ರವಲ್ಲ ‘‘ಭಾರತ ಯೂನಿಯನ್ ಪ್ರಧಾನವಾಗಿ ಏಕರೂಪಿ ಪ್ರಭುತ್ವವಾಗಿದ್ದು ಅದರಲ್ಲಿ ಕಾಣಿಸಿಕೊಳ್ಳುವ ಅಲ್ಪಸ್ವಲ್ಪಫೆಡರಲ್ ಲಕ್ಷಣಗಳು ಅದಕ್ಕೆ ಅಧೀನವಾಗಿವೆ’’ ಎನ್ನುತ್ತಾರೆ. ಇದರ ನಡುವೆಯೂ ಭಾರತದ ಭಿನ್ನಭಿನ್ನ ರಾಷ್ಟ್ರೀಯತೆಗಳ, ಜನಸಮುದಾಯ ಗಳ, ರಾಜ್ಯಗಳ ನಿರಂತರ ಹೋರಾಟದಿಂದಾಗಿ ಕಳೆದ 70 ವರ್ಷಗಳಲ್ಲಿ ಪ್ರಧಾನ ವಾಗಿ ಕೇಂದ್ರೀಯ ಸ್ವರೂಪದಲ್ಲಿರುವ ಭಾರತ ಸಂವಿಧಾನದಲ್ಲಿ ಅಳಿದುಳಿದಿರುವ ಫೆಡರಲ್ ಲಕ್ಷಣಗಳು ಜೀವ ಪಡೆದಿವೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲಂತೂ ಭಾರತದ ಸಂವಿಧಾನದೊಳಗಿರುವ ಅಂತರ್ಗತ ಕೇಂದ್ರೀಕರಣವಾದಿ ಅವಕಾಶಗಳಿಗೆ ಸೈದ್ಧಾಂತಿಕ ಹಾಗೂ ರಾಜಕೀಯ ಶಕ್ತಿ ಒದಗಿ ಬಂದಿದೆ. ಹೀಗಾಗಿ ಭಾರತ ಸರಕಾರವನ್ನು ಕೇಂದ್ರ ಸರಕಾರ ಎಂದು ಕರೆಯದೆ ಯೂನಿಯನ್ ಸರಕಾರ ಎಂದೋ, ಒಕ್ಕೂಟ ಸರಕಾರ ಎಂದೋ ಕರೆದ ಮಾತ್ರಕ್ಕೆ ಬದಲಾಗುವ ಸಮಸ್ಯೆಯಲ್ಲ ಇದು. ಏಕೆಂದರೆ ಸಾಂವಿಧಾನಿಕವಾಗಿಯೇ ಭಾರತವು ಒಂದು ಒಕ್ಕೂಟವಲ್ಲ. ಅದು ನಿಜವಾಗಿ ಒಂದು ಪ್ರಜಾತಾಂತ್ರಿಕ ಒಕ್ಕೂಟವಾಗಲು ಈಗಿರುವ ನಮ್ಮ ಸಂವಿಧಾನದಲ್ಲೇ ಅವಕಾಶವಿಲ್ಲ. ನಮ್ಮೆದುರಿರುವ ಅಸಲಿ ಸಮಸ್ಯೆ ಏನೆಂದರೆ: ಭಾರತ ಸಂವಿಧಾನವನ್ನು ನೈಜ ಪ್ರಜಾತಾಂತ್ರಿಕ, ನೈಜ ಫೆಡರಲ್, ನೈಜ ಗಣರಾಜ್ಯವನ್ನಾಗಿ ಮಾಡುವುದು ಹೇಗೆ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News