ಹುಡುಗ ಕಪ್ಪು ಎಂಬ ಕಾರಣಕ್ಕೆ ಮದುವೆ ನಿರಾಕರಿಸಿದ ತಂಗಿಯನ್ನು ಕೊಲೆಗೈದ ಅಣ್ಣ

Update: 2021-07-11 16:03 GMT

ರಾಯಚೂರು, ಜು. 11: ಮದುವೆ ನಿಶ್ಚಿತಾರ್ಥವಾಗಿದ್ದ ಯುವಕನೊಂದಿಗೆ ವಿವಾಹವಾಗಲು ನಿರಾಕರಿಸಿದ ಸಹೋದರಿಯನ್ನೇ ಅಣ್ಣನೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಇಲ್ಲಿನ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ರವಿವಾರ ನಡೆದಿದೆ.

ಕೊಲೆಯಾದ ಯುವತಿಯನ್ನು ಚಂದ್ರಕಲಾ(22) ಎಂದು ಗುರುತಿಸಲಾಗಿದೆ. ಯುವತಿಯನ್ನು ಕೊಲೆಗೈದ ಆರೋಪಿಯನ್ನು ಆಕೆಯ ಅಣ್ಣ ಶ್ಯಾಮಸುಂದರ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಚಂದ್ರಕಲಾಗೆ ಇದೇ ಜು.13ಕ್ಕೆ ವಿವಾಹ ನಿಶ್ಚಯವಾಗಿದ್ದು ಮನೆಯವರು ಲಗ್ನಪತ್ರಿಕೆಯನ್ನೆಲ್ಲಾ ಹಂಚಿದ್ದಾರೆ. ಆದರೆ ಹುಡುಗ ಕಪ್ಪು ಎಂಬ ಕಾರಣ ನೀಡಿ ಚಂದ್ರಕಲಾ ತಾನು ಆ ಯುವಕನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾಳೆ ಎಂದು ಹೇಳಲಾಗಿದೆ. ಮದುವೆ ನಿರಾಕರಣೆಯಿಂದ ಕುಪಿತಗೊಂಡ ಅಣ್ಣ ಶ್ಯಾಮಸುಂದರ ಮನೆಯಲ್ಲಿನ ಕೊಡಲಿಯಿಂದ ಕೊಚ್ಚಿ ತಂಗಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ದೇವದುರ್ಗ ತಾಲೂಕಿನ ಗಬ್ಬೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News