ವಾರಣಾಸಿಯಲ್ಲಿ 1,500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಚಾಲನೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿ ಐಐಟಿ-ಬಿಎಚ್ಯು ಮೈದಾನದಲ್ಲಿ 1,500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಅಡಿಪಾಯ ನೆರವೇರಿಸಿದರು.
ಗೊಡೌಲಿಯಾದಲ್ಲಿ ಬಹು-ಹಂತದ ಪಾರ್ಕಿಂಗ್, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ಹಡಗುಗಳು ಹಾಗೂ ವಾರಣಾಸಿ ಘಾಜಿಪುರ ಹೆದ್ದಾರಿಯಲ್ಲಿ ಮೂರು ಪಥದ ಫ್ಲೈಓವರ್ ಸೇತುವೆ ಪ್ರಮುಖ ಯೋಜನೆಗಳಾಗಿವೆ.
ವಾರಣಾಸಿ-ಘಾಜಿಪುರ ಹೆದ್ದಾರಿಯಲ್ಲಿ ವಿವಿಧ ಸಾರ್ವಜನಿಕ ಯೋಜನೆಗಳು ಹಾಗೂ ಕಾಮಗಾರಿಗಳು ಮತ್ತು ಮೂರು ಪಥದ ಫ್ಲೈಓವರ್ ಸೇತುವೆಯನ್ನು ಮೋದಿ ಅವರು ಉದ್ಘಾಟಿಸಿದರು.
ಜಪಾನ್ ಸರಕಾರದ ನೆರವಿನೊಂದಿಗೆ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ-'ರುದ್ರಾಕ್ಷ್' ಅನ್ನು ಮೋದಿಯವರು ಉದ್ಘಾಟಿಸಿದರು
'ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ 'ರುದ್ರಾಕ್ಷ್' ಸೃಜನಶೀಲತೆಯ ಪರಿಣಾಮವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಯೋಜನೆಯಲ್ಲಿ ವೈಯಕ್ತಿಕವಾಗಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಪ್ರತಿಯೊಬ್ಬ ಭಾರತೀಯನು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರಿಗೆ ಭಾರತದ ಬಗೆಗಿನ ಒಲವಿಗಾಗಿ ಕೃತಜ್ಞರಾಗಿರುತ್ತಾರೆ ಎಂದು ಅವರು ಹೇಳಿದರು.