ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಸಾವುಗಳು ವರದಿಯಾಗಿಲ್ಲ: ಕೇಂದ್ರ

Update: 2021-07-20 13:18 GMT

ಹೊಸದಿಲ್ಲಿ: ಕೋವಿಡ್-19 ಎರಡನೇ ಅಲೆಯ ವೇಳೆ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು-ನೋವು ಸಂಭವಿಸಿರುವ ಕುರಿತು ವಿಶೇಷವಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ವರದಿ ಒಪ್ಪಿಸಿಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.

ಆದರೆ ಎರಡನೇ ಅಲೆಯ ಸಂದರ್ಭ ವೈದ್ಯಕೀಯ ಆಮ್ಲಜನಕದ ಬೇಡಿಕೆಯಲ್ಲಿ ಅಭೂತಪೂರ್ವ ಏರಿಕೆ ಕಂಡು ಬಂದಿತ್ತು ಹಾಗೂ ಮೊದಲ ಅಲೆಯ ವೇಳೆ 3,095 ಮೆಟ್ರಿಕ್ ಟನ್‌ ಆಕ್ಸಿಜನ್ ಅಗತ್ಯ ಎದುರಾಗಿದ್ದರೆ, ಎರಡನೇ ಅಲೆಯ ವೇಳೆ  ಸುಮಾರು 9,000 ಮೆ.ಟನ್ ಗೆ ಏರಿತು. ನಂತರ ರಾಜ್ಯಗಳ ನಡುವೆ ಸಮಾನ ವಿತರಣೆಗೆ ಅನುಕೂಲವಾಗುವಂತೆ ಕೇಂದ್ರವು ಹೆಜ್ಜೆ ಹಾಕಬೇಕಾಯಿತು ಎಂದು ಅದು ಹೇಳಿದೆ.

ಎರಡನೇ ಅಲೆಯ ವೇಳೆ ಆಮ್ಲಜನಕದ ತೀವ್ರ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಕೋವಿಡ್-19 ರೋಗಿಗಳು ರಸ್ತೆ ಹಾಗೂ  ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ “ಆರೋಗ್ಯವು ರಾಜ್ಯದ ವಿಷಯವಾಗಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಕೋವಿಡ್ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆಯನ್ನು ಕೇಂದ್ರಕ್ಕೆ ವರದಿ ಮಾಡಿವೆ'' ಎಂದರು.

"ಸಾವುಗಳನ್ನು ವರದಿ ಮಾಡಲು ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಅದರಂತೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪ್ರಕರಣಗಳು ಹಾಗೂ ಸಾವುಗಳನ್ನು ವರದಿ ಮಾಡುತ್ತವೆ. ಆದಾಗ್ಯೂ, ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳ  ಕುರಿತಾಗಿ ನಿರ್ದಿಷ್ಟವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ" ಎಂದು ಪವಾರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News