ಸಿ.ಪಿ.ಯೋಗೇಶ್ವರ್ ಅಲ್ಲ, ಸಿಡಿ ಯೋಗೇಶ್ವರ್ : ಸಂಸದ ಡಿ.ಕೆ.ಸುರೇಶ್ ಲೇವಡಿ

Update: 2021-07-21 14:35 GMT

ಬೆಂಗಳೂರು/ಹೊಸದಿಲ್ಲಿ, ಜು. 21: `ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅಲ್ಲ, ಬದಲಿಗೆ ಸಿಡಿ ಯೋಗೇಶ್ವರ್! ಅವರ ಬಳಿ ಎಲ್ಲರ ದಾಖಲೆಗಳಿವೆ. ಅವರು ಆಗಾಗ್ಗೆ ಒಬ್ಬೊಬ್ಬರನ್ನು ಭೇಟಿ ಮಾಡಿ, ಒಬ್ಬೊಬ್ಬರ ಮಾಹಿತಿ ತೋರಿಸುತ್ತಿರುತ್ತಾರೆ. ಇಂದಿನ ರಾಜ್ಯ ಸರಕಾರ ಸಿಡಿ ಸರಕಾರ ಅಂತಲೇ ಹೇಳಬಹುದು' ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ.

ಬುಧವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಈ ಬಗ್ಗೆ ಮಾನ್ಯ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಸೂಕ್ತ ತನಿಖೆ ನಡೆಸಬೇಕು. ರಾಜ್ಯ ಬಿಜೆಪಿ ನಾಯಕರೊಬ್ಬರ ಬಳಿ 500 ಸಿ.ಡಿ.ಗಳಿವೆ ಎಂದು ಮಾಧ್ಯಮಗಳಲ್ಲಿ ನೋಡಿದೆ. ಎಲ್ಲರೂ ಸಿ.ಡಿ.ಗಳ ಮೇಲೆ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿರುವುದು ರಾಜ್ಯಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ. ರಾಜ್ಯದ ಜನ ಇಂತಹವರನ್ನು ಕ್ಷಮಿಸಬಾರದು. ಯಾವುದೇ ಪಕ್ಷದವರಾದರೂ ಅವರ ಮೇಲೆ ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಬೇಕು' ಎಂದು ಸಲಹೆ ಮಾಡಿದರು.

`ಕಾಂಗ್ರೆಸ್-2023ರ ಚುನಾವಣೆ ಬಗ್ಗೆ ಚಿಂತನೆ, ತಯಾರಿ ನಡೆಸುತ್ತಿದೆ. ಬೇರೆಯವರು ಕಾಂಗ್ರೆಸ್ ಹೆಸರು ಹೇಳಿಕೊಂಡು ರಾಜಕೀಯ ಲಾಭ ಪಡೆಯಬಹುದು ಅಷ್ಟೇ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ಜನರ, ಎಲ್ಲ ಕಾರ್ಯಕರ್ತರ ಆಶಯ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದಷ್ಟೇ ನಮ್ಮ ಗುರಿ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಪ್ರಯತ್ನ ಮಾಡಿರಲಿಲ್ಲ. ಪಕ್ಷ ಅವರನ್ನು ಗುರುತಿಸಿ ಅವರಿಗೆ ಈ ಜವಾಬ್ದಾರಿ ನೀಡಿದೆ. ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕಾರ್ಯಕರ್ತರು ವಿಧಾನಸೌಧದ ಮೆಟ್ಟಿಲೇರಲು ಚಪ್ಪಡಿ ಕಲ್ಲಾಗಿರಲು ಬಯಸುತ್ತೇನೆ ಎಂದು ಶಿವಕುಮಾರ್ ಅವರು ಎಲ್ಲ ಸಂದರ್ಭದಲ್ಲೂ ಹೇಳಿದ್ದಾರೆ' ಎಂದು ಸ್ಪಷ್ಟಪಡಿಸಿದರು. 

`ಕಾಂಗ್ರೆಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಪ್ರಮುಖವಾದುದು. ಇದು ಕಾಂಗ್ರೆಸ್ ಇತಿಹಾಸ. ಕಾಂಗ್ರೆಸ್ ಎಂದಿಗೂ ಒಬ್ಬರ ಹೆಸರಿನ ಮೇಲೆ ಚುನಾವಣೆ ಮಾಡಿಲ್ಲ. ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಇದೆ. ಕೋವಿಡ್ ಪಿಡುಗಿನಲ್ಲಿ ಆಕ್ಸಿಜನ್ ಕೊರತೆಯಿಂದ ಸತ್ತಿರುವ ಪ್ರಕರಣ ಕೇವಲ ಚಾಮರಾಜನಗರದಲ್ಲಿ ಮಾತ್ರ ಬೆಳಕಿಗೆ ಬಂದಿದೆ. ದೇಶದೆಲ್ಲೆಡೆ ಇಂತಹದ್ದು ನಡೆದಿದ್ದು, ಕೇಂದ್ರ ಸರಕಾರ ಇದನ್ನು ಮುಚ್ಚಿಡುವ ಪ್ರಯತ್ನ ಮಾಡಿದೆ. ದಿಲ್ಲಿಯಲ್ಲೂ ಜನ ರಸ್ತೆಯಲ್ಲಿ ಸತ್ತಿರುವುದನ್ನು ನಾವು ನೋಡಿದ್ದೇವೆ' ಎಂದು ಡಿ.ಕೆ.ಸುರೇಶ್ ಹೇಳಿದರು.

`ಲೋಕಸಭೆಯಲ್ಲಾಗಲಿ ಅಥವಾ ರಾಜ್ಯಸಭೆಯಲ್ಲಾಗಲಿ ಉತ್ತರ ನೀಡುವ ಸಂದರ್ಭದಲ್ಲಿ ಕೇಂದ್ರ ಸರಕಾರ ಇದನ್ನು ಒಪ್ಪಿಕೊಂಡಿಲ್ಲ. ಜನ ಆಕ್ಸಿಜನ್, ಬೆಡ್ ಹಾಗೂ ಔಷಧಿ ಇಲ್ಲದೆ ಸತ್ತಿದ್ದಾರೆ. ಆದರೂ ಇದನ್ನು ಒಪ್ಪಿಕೊಳ್ಳದಿರುವ ಕೇಂದ್ರ ಸರಕಾರ ಬಡವರ ಜೀವದ ಬಗ್ಗೆ ಎಷ್ಟು ಬೇಜವಾಬ್ದಾರಿತನ ಮೆರೆದಿದೆ, ಎಷ್ಟು ಆಟವಾಡುತ್ತಿದೆ ಎಂಬುದು ಗೊತ್ತಾಗುತ್ತದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಈ ಪಿಡುಗಿನಲ್ಲಿ ದೇಶವ್ಯಾಪ್ತಿ ಜನ ಸತ್ತಿರುವ ಕಾರಣದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಆದೇಶ ನೀಡಬೇಕು. ಸತ್ತವರಿಗೆ ಪರಿಹಾರ ಸಿಗುವಂತೆ ಮಾಡಬೇಕು. ಸತ್ತವರ ಮಾಹಿತಿ ಮುಚ್ಚಿಡುವುದು ಅಪರಾಧ, ಮುಚ್ಚಿಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಡಿ.ಕೆ.ಸುರೇಶ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News