ಭ್ರಷ್ಟಾಚಾರ, ಪಕ್ಷಾಂತರ, ಪೆಗಾಸಸ್ ಕದ್ದಾಲಿಕೆಯಿಂದ ಬಿಜೆಪಿ ಸರಕಾರ ರಚನೆ: ರಣದೀಪ್ ಸಿಂಗ್ ಸುರ್ಜೆವಾಲ

Update: 2021-07-30 15:37 GMT

ಹುಬ್ಬಳ್ಳಿ, ಜು. 30: `ಕರ್ನಾಟಕದಲ್ಲಿರುವ ಬಿಜೆಪಿ ಸರಕಾರವು ಭ್ರಷ್ಟಾಚಾರ, ಪಕ್ಷಾಂತರ ಹಾಗೂ ಪೆಗಾಸಸ್ ಕದ್ದಾಲಿಕೆ ಮೂಲಕ ರಚನೆಯಾಗಿದೆ. ಇಂತಹ ಸರಕಾರದಿಂದ ಜನಪರ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಟೀಕಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಕರ್ನಾಟಕದಲ್ಲಿರುವ ಬಿಜೆಪಿ ಸರಕಾರವು ಭ್ರಷ್ಟಾಚಾರ ಹಾಗೂ ಪಕ್ಷಾಂತರದ ಮೇಲೆ ರಚನೆಯಾಗಿದೆ. ಕೆಲವು ದಿನಗಳಿಂದ ಇದು ಪೆಗಾಸಸ್ ಕದ್ದಾಲಿಕೆಯಿಂದ ರಚನೆಯಾಗಿದೆ ಎಂಬುದು ಸಾಬೀತಾಗಿದೆ. ಇಡೀ ದೇಶ ಹಾಗೂ ವಿಶ್ವ, ಮೋದಿ ಸರಕಾರ ಹೇಗೆ ಗೂಢಚಾರಿಗಳನ್ನು ಬಳಸಿಕೊಂಡು ಹೇಗೆ ಚುನಾಯಿತ ಸರಕಾರವನ್ನು ಕೆಡವಿದೆ ಎಂಬುದನ್ನು ನೋಡಿದೆ. ಇಂತಹ ಸರಕಾರ ಜನಪರ ಕೆಲಸ ಮಾಡಲು ಅಸಾಧ್ಯ. ಹೀಗಾಗಿ 2 ವರ್ಷಗಳ ಅವಧಿಯಲ್ಲಿ ಕೇವಲ ಭ್ರಷ್ಟಾಚಾರಗಳೇ ನಡೆದಿವೆ. ಇದೇ ಮೊದಲ ಬಾರಿಗೆ ಭ್ರಷ್ಟಾಚಾರವನ್ನು ಆರ್‍ಟಿಜಿಎಸ್ ಮೂಲಕ ನಡೆಸಿರುವುದನ್ನು ನೋಡಿದ್ದೇವೆ' ಎಂದರು.

`ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯವನ್ನು ಶ್ಲಾಘಿಸುತ್ತೇನೆ. ದೇಶದಲ್ಲೇ ಅತಿ ದೊಡ್ಡ ಸರಕಾರೇತರ ಆರೋಗ್ಯ ಸೇವೆ ಆರೋಗ್ಯ ಹಸ್ತವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ದೇಶದಲ್ಲಿ ಜನ ಆಕ್ಸಿಜನ್ ಇಲ್ಲದೆ ಸಾಯುತ್ತಿರುವಾಗ ಸರಕಾರ ನೆರವಾಗದೇ ಕೈಚೆಲ್ಲಿ ಕೂತಿತ್ತು. ಈ ಸಮಯದಲ್ಲಿ ಜನರಿಗೆ ಆಕ್ಸಿಜನ್, ರೆಮ್‍ಡೆಸಿವಿರ್ ಔಷಧಿ ಪೂರೈಸಿದ್ದು ಕಾಂಗ್ರೆಸ್ ನಾಯಕರು. ಆಸ್ಪತ್ರೆಗಳು ಹೆಚ್ಚಿನ ಸುಲಿಗೆ ಮಾಡುವಾಗ ನಮ್ಮ ನಾಯಕರು ತಮ್ಮ ಆಸ್ಪತ್ರೆಗಳಲ್ಲಿ ಕಡಿಮೆ ಮೊತ್ತಕ್ಕೆ ಚಿಕಿತ್ಸೆ ನೀಡಿದರು' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ವಿರೋಧಿ ಬಿಜೆಪಿ: `ಬಿಜೆಪಿಯು ಹಿಂದುಳಿದ ವರ್ಗಗಳ, ಬಡವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ವಿರೋಧಿಗಳು. ಬಿಜೆಪಿ ಈ ವರ್ಗಗಳ ಕಲ್ಯಾಣಕ್ಕೆ ಯಾವುದೇ ಕಾರ್ಯಯೋಜನೆ ತಂದಿಲ್ಲ. ಆದರೆ ಈಗ ಪ್ರಧಾನಿ ಟ್ವಿಟರ್ ಮೂಲಕ ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನು 1952ರಲ್ಲಿ ಶೇ.2ರಷ್ಟಿಂದ ಆರಂಭ ಮಾಡಲಾಯಿತು. ನಂತರ 1981ರಿಂದ ಶೇ.10ರಷ್ಟು ಮೀಸಲಾತಿ ನೀಡಲಾಯಿತು. ನಂತರ ಕಾಂಗ್ರೆಸ್ ಸರಕಾರ ಮಂಡಲ್ ಸಮಿತಿ ರಚಿಸಿತು. 1995-96ರಲ್ಲಿ ಶೇ.27ರಷ್ಟು ಮೀಸಲಾತಿ ನೀಡಿದೆವು. ಪಂಡಿತ್ ನೆಹರೂ, ವಲ್ಲಭಬಾಯ್ ಪಟೇಲ್, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ತಂದಿದ್ದರು. ಈ ಮೀಸಲಾತಿ ವೈದ್ಯಕೀಯ ಶಿಕ್ಷಣಕ್ಕೆ ಅನ್ವಯವಾಗಿರಲಿಲ್ಲ. 2007ರಲ್ಲಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು ಈ ಬಗ್ಗೆ ನಿರ್ಧಾರ ಕೈಗೊಂಡು, ಹಿಂದುಳಿದ ವರ್ಗಗಳಿಗೆ ಕಡ್ಡಾಯವಾಗಿ ಎಲ್ಲ ಕೇಂದ್ರ ಸರಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಕಾನೂನು ಜಾರಿಗೆ ತಂದರು.

ಪ್ರಧಾನಿ ಮೋದಿ ಅವರು 2014ರ ಚುನಾವಣೆಯಲ್ಲಿ ತಮ್ಮ ಸಮುದಾಯವನ್ನು ಚುನಾವಣೆಗೂ ಮುನ್ನ ಹಿಂದುಳಿದ ವರ್ಗ ಎಂದು ಮಾಡಿ ತಾನು ಹಿಂದುಳಿದ ವರ್ಗದವನು ಎಂದು ಹೇಳಿಕೊಂಡರು. 7 ವರ್ಷಗಳ ಆಡಳಿತದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ. ನಂತರ ಸೋನಿಯಾ ಗಾಂಧಿ ಅವರು ಪ್ರಧಾನ ಮಂತ್ರಿಗಳಿಗೆ ಜುಲೈ 3, 2020ರಂದು ಪತ್ರ ಬರೆದು ಈ ವರ್ಗದವರಿಗೆ ಮೀಸಲಾತಿ ನೀಡಿ, ಅದು ಸಂವಿಧಾನಬದ್ಧವಾಗಿದೆ ಎಂದು ಹೇಳಿದ್ದರು. ಪ್ರಧಾನಮಂತ್ರಿ ಇದಕ್ಕೆ ಪ್ರತ್ಯುತ್ತರ ನೀಡಲಿಲ್ಲ.

27 ಜುಲೈ 2020ರಲ್ಲಿ ಹಾಗೂ ನಂತರ ವಿದ್ಯಾರ್ಥಿಯೊಬ್ಬಳು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿ, ಕೇಂದ್ರ ಸರಕಾರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವುದನ್ನು ಪ್ರಶ್ನಿಸಿದರು. ನಂತರ ಕೋರ್ಟ್ ಈ ಮೀಸಲಾತಿಯನ್ನು ಜಾರಿಗೊಳಿಸುವಂತೆ ಆದೇಶ ನೀಡಿತು. ನಂತರ ಕಾಂಗ್ರೆಸ್ ಹಾಗೂ ಡಿಎಂಕೆ ನ್ಯಾಯಾಂಗ ನಿಂದನೆ ಅರ್ಜಿ ಹಾಕಿದರು. ಈಗ ಕೇಂದ್ರ ಸರಕಾರ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ಪಾರಾಗಲು ಆ ಮೀಸಲಾತಿಯನ್ನು ಜಾರಿಗೊಳಿಸುತ್ತಿದೆ. ಇದು ಬಿಜೆಪಿಯ ಸುಳ್ಳಿನ ಪ್ರಚಾರಕ್ಕೆ ಸಾಕ್ಷಿ' ಎಂದು ಟೀಕಿಸಿದರು. 

ಅಸ್ಸಾಂ-ಮಿಜೋರಾಮ್ ಸಂಘರ್ಷಕ್ಕೆ ಅಮಿತ್ ಶಾ ವೈಫಲ್ಯ ಕಾರಣ: `ಅಸ್ಸಾಂ ಹಾಗೂ ಮಿಜೋರಾಮ್ ನಡುವಣ ಸಂಘರ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರಕಾರದ ವೈಫಲ್ಯಕ್ಕೆ ಸಾಕ್ಷಿ. ಎರಡೂ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರವೇ ಅಧಿಕಾರದಲ್ಲಿದೆ. ಗೃಹ ಸಚಿವರು 10-12 ದಿನಗಳ ಹಿಂದಷ್ಟೇ ಇಲ್ಲಿಗೆ ಭೇಟಿ ನೀಡಿದ್ದರು ಹಾಗೂ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದರು. ಆದರೂ ಎರಡೂ ರಾಜ್ಯಗಳ ಪೊಲೀಸರು ಪರಸ್ಪರ ಗುಂಡು ಹಾರಿಸಿಕೊಳ್ಳುವಂತೆ ಮಾಡಿದ್ದು ಏಕೆ?

73 ವರ್ಷಗಳ ಸ್ವತಂತ್ರ ಭಾರತದಲ್ಲಿ ಇಂತಹ ಘಟನೆ ಎಂದಾದರೂ ನಡೆದಿತ್ತಾ? ನಾವು ಶತ್ರು ರಾಷ್ಟ್ರಗಳ ಜತೆ ಸೆಣೆಸಾಡಬೇಕಾ? ಅಥವಾ ನಮ್ಮ ದೇಶದ ಸಹೋದರರ ಜತೆ ಸೆಣೆಸಾಡಬೇಕಾ? ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದ ನಡುವಣ ವ್ಯತ್ಯಾಸ ಇದೇ. ಇದು ಗೃಹ ಸಚಿವರು ಹಾಗೂ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ವೈಫಲ್ಯ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಜನರ ಪ್ರಾಣ ಒತ್ತೆ ಇಟ್ಟು ಈ ಸಮರ ಸಾರುತ್ತಿದ್ದಾರಾ? ಇವರ ವಿರುದ್ಧ ಜೆ.ಪಿ.ನಡ್ಡಾ, ಪ್ರಧಾನಿ ಅವರಾಗಲಿ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿಯವರು ದೇಶವನ್ನು ಮುನ್ನಡೆಸುವ ರೀತಿ ಇದೇನಾ? ಅಮಿತ್ ಶಾರಂತೆ ದೇಶದ ಯಾವುದೇ ಗೃಹ ಸಚಿವರು ಈ ರೀತಿ ವಿಫಲರಾಗಿರಲಿಲ್ಲ. ಅವರು ಕೇವಲ ಕದ್ದಾಲಿಕೆಯಲ್ಲೇ ಸಮಯ ಕಳೆಯುತ್ತಿದ್ದಾರೆ' ಎಂದು ರಣದೀಪ್ ಸಿಂಗ್ ಸುರ್ಜೆವಾಲ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News