ಆತನನ್ನು ಅಷ್ಟು ದೊಡ್ಡ ವ್ಯಕ್ತಿ ಮಾಡುವ ಅವಶ್ಯಕತೆಯಿಲ್ಲ: ಅಣ್ಣಾಮಲೈ ಪ್ರತಿಭಟನೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

Update: 2021-08-05 12:21 GMT

ಬೆಂಗಳೂರು, ಆ. 5: `ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರದಲ್ಲಿ ರಾಜ್ಯ ಸರಕಾರ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಯೋಜನೆಗೆ ತಮಿಳುನಾಡು ಒಪ್ಪಿಗೆ ಅಗತ್ಯವಿಲ್ಲ. ಅಣ್ಣಾಮಲೈ ಉಪವಾಸನಾದರೂ ಮಾಡಲಿ, ಊಟ ಬೇಕಾದರೂ ಮಾಡಲಿ. ಮೇಕೆದಾಟು ಯೋಜನೆ ನೆರವೇರುವುದು ನಿಶ್ಚಿತ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಇಲ್ಲಿನ ಆರ್.ಟಿ.ನಗರದಲ್ಲಿನ ತಮ್ಮ ನಿವಾಸ ಹಾಗೂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, `ಮೇಕೆದಾಟು ಯೋಜನೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಇತ್ತೀಚೆಗೆ ರಾಜ್ಯದ ಸಂಸದರ ನಿಯೋಗದೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದು, ಡಿಪಿಆರ್ ಸೇರಿದಂತೆ ಎಲ್ಲಾ ಅನುಮೋದನೆಗಳು ದೊರಕಿದ ಕೂಡಲೇ ಕಾಮಗಾರಿ ಪ್ರಾರಂಭ ಶತಸ್ಸಿದ್ಧ. ಅಣ್ಣಾಮಲೈ ಪ್ರತಿಭಟನೆಗೆ ಐ ಡೋಂಟ್ ಕೇರ್. ಆತನನ್ನು ಅಷ್ಟು ದೊಡ್ಡ ವ್ಯಕ್ತಿ ಮಾಡುವ ಅವಶ್ಯಕತೆಯಿಲ್ಲ' ಎಂದು ಅಣ್ಣಾಮಲೈ ಪ್ರತಿಭಟನೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. 

 `ಮೇಕೆದಾಟು ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಈ ವಿಚಾರವನ್ನು ತಮಿಳುನಾಡು ಅನಗತ್ಯ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಅಲ್ಲಿ ಯಾವುದೇ ಪಕ್ಷದವರು ಇರಬಹುದು, ಅವರು ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ' ಎಂದು ಹೇಳಿದರು.

`ಕುಡಿಯುವ ನೀರು, ವಿದ್ಯುತ್ಛಕ್ತಿ ಮತ್ತು ಸಂಕಷ್ಟ ಕಾಲದಲ್ಲಿ ಉಭಯ ರಾಜ್ಯಗಳು ನೀರನ್ನು ಹಂಚಿಕೆ ಮಾಡಬಹುದು ಎಂದು ಎಲ್ಲರಿಗೂ ಗೊತ್ತಿದೆ. ಈ ಯೋಜನೆ ಆ ಉದ್ದೇಶ ಹೊಂದಿದೆ ಎಂದು ಗೊತ್ತಿದೆ. ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದು, ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದೇನೆ. ರಾಜ್ಯದ ಸಂಸದರ ನಿಯೋಗದ ಜೊತೆಗೂ ಭೇಟಿ ಮಾಡಿ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ಒತ್ತಾಯ ಮಾಡಿದ್ದೇನೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

`ಈಗಾಗಲೇ ಮೇಕೆದಾಟು ಯೋಜನೆಯ ಸಮಗ್ರ ವಿಸ್ಕೃತ ಯೋಜನೆಗೆ (ಡಿಪಿಆರ್) ಶೀಘ್ರದಲ್ಲಿ ಅನುಮತಿ ಸಿಗುವ ವಿಶ್ವಾಸವಿದೆ. ಇತರ ಎಲ್ಲದಕ್ಕೂ ಅನುಮತಿ ಸಿಗಲಿದೆ. ಕೇಂದ್ರದ ಒಪ್ಪಿಗೆ ಸಿಕ್ಕ ತಕ್ಷಣ ಯೋಜನೆ ಕಾಮಗಾರಿ ಆರಂಭಿಸುವುದು ಶತಸಿದ್ಧ. ಅದರಲ್ಲಿ ಯಾವುದೇ ರಾಜಿ ಇಲ್ಲ' ಎಂದ ಬಸವರಾಜ ಬೊಮ್ಮಾಯಿ, `ಯೋಜನೆ ವಿರೋಧಿಸಿ ಯಾರಾದರೂ ಪ್ರತಿಭಟನೆ ಮಾಡುತ್ತಿದ್ದರೆ ಅದಕ್ಕೂ ನಮಗೂ ಸಂಬಂಧ ಇಲ್ಲ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News