ಒಂದಕ್ಕೆ ಎರಡು ತೆಗೆದು ಬಿಡಿ: ಶಿವಮೊಗ್ಗದಲ್ಲಿ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

Update: 2021-08-08 13:11 GMT

ಶಿವಮೊಗ್ಗ(ಆ.8): ಹಿಂದೆ ನಮ್ಮ ಕಾರ್ಯಕರ್ತರಿಗೆ ಯಾರಾದರೂ ಹೊಡೆದರೆ ವಾಪಸ್ ಹೊಡೆಯೋದಕ್ಕೆ ನಮಗೆ ಶಕ್ತಿ ಇರಲಿಲ್ಲ. ಇವತ್ತು ಯಾರಾದರೂ ಮೈ ಮುಟ್ಟಿದರೆ, ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು, ಒಂದಕ್ಕೆ ಎರಡು ತೆಗೆದು ಬಿಡಿ ಅನ್ನುವಷ್ಟು ಮಟ್ಟಿಗೆ ಬಿಜೆಪಿ ಬೆಳಿದಿದೆ ಎಂದು ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ನಗರದಲ್ಲಿ‌ ರವಿವಾರ ಹಮ್ಮಿಕೊಂಡಿದ್ದ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯಲ್ಲಿ‌ ಅವರು ಮಾತನಾಡಿ, ಲಕ್ಷ ಲಕ್ಷ ಜನರು ಬಿಜೆಪಿ ಪರವಾಗಿ ಇದ್ದಾರೆ.. ಹಿಂದುತ್ವದ ಮೆರವಣಿಗೆ ಅಂದರೆ ಕಲ್ಪನೆ ಮಾಡದಷ್ಟು ಜನರು ಸೇರುತ್ತಿದ್ದಾರೆ ಎಂದರು.

ಆಗ ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡಿದರೆ ನಮ್ಮ ಹಿರಿಯರು 'Be Calm At All cost' ಅಂತ ಹೇಳುತ್ತಿದ್ದರು. ಅಂದರೆ, ಎಂತಹ ಸಂದರ್ಭದ ಬಂದರೂ ಸಹ ಶಾಂತವಾಗಿರಿ ಅಂತ ಹೇಳುತ್ತಿದ್ದರು, ಯಾಕೆ ಅಂದರೆ ನಮ್ಮ ಬಳಿ ಶಕ್ತಿ ಇರಲಿಲ್ಲ. ಇವತ್ತು ಇಡೀ ಪ್ರಪಂಚದಲ್ಲಿ ಬಿಜಿಪಿ ಪಾರ್ಟಿ ಹೇಗೆ ಬೆಳೆದಿದೆ ಅಂತ ಎಲ್ಲರಿಗೂ ಗೊತ್ತಿದೆ. ಇವತ್ತು ಏನಾದರೂ ಬಿಜೆಪಿಯ ಕಾರ್ಯಕರ್ತನ ಮೈ ಮುಟ್ಟಿದರೆ 'FACE WITH THE SAME STICK' ಅಂದರೆ, ಯಾವುದರಲ್ಲಿ ಹೊಡಿತಾರೋ ಅದರಲ್ಲಿಯೇ ಹೊಡೆದು ಒಂದಕ್ಕೆ ಎರಡು ತೆಗೆದು ಬಿಡಿ ಅನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ಬೆಳೆದು‌ ಬಿಟ್ಟಿದೆ. ಹೀಗಾಗಿ ಈಗ ನಮ್ಮ ಸುದ್ದಿಗೆ ಯಾರು ಬರೋದಿಲ್ಲ ಎಂದು ಹೇಳಿದರು.

ಖಾತೆ ಬಗ್ಗೆ ಗೊಂದಲ ಇಲ್ಲ
ಆನಂದ್ ಸಿಂಗ್ ಮತ್ತು ಎಂಟಿಬಿ ಅವರಿಗೆ ಬೇರೆ ಖಾತೆ ಬೇಕು ಎಂದು ಕೇಳುತ್ತಿದ್ದಾರೆ. ಅವರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಅದು ಗೊಂದಲವಲ್ಲ ಎಂದು ಸ್ಪಷ್ಟಪಡಿಸಿದರು.

ಆನಂದ್ ಸಿಂಗ್ ಮತ್ತು ಎಂಟಿಬಿ ಅವರು ಅವರ ಭಾವನೆಗಳನ್ನು ಹೇಳಿದ್ದಾರೆ ಅಷ್ಟೇ. ಅವರನ್ನು ಮುಖ್ಯಮಂತ್ರಿ ಸಮಾಧಾನಪಡಿಸುತ್ತಾರೆ. ಇದರಲ್ಲಿ ಏನೂ ವಿಶೇಷ ಇಲ್ಲ ಎಂದು ಪ್ರತಿಕ್ರಿಯಿಸಿದರು.

‘ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ರಾಜಕಾರಣ ಮಾಡುತ್ತಿದ್ದಾರೆ. ಆದರೆ, ನಾವು ಸುಪ್ರೀಂಕೋರ್ಟ್ ನಿರ್ಧಾರದ ಹಾಗೆ ಮೇಕೆದಾಟು ಯೋಜನೆ ಮಾಡುತ್ತೇವೆ.

‘ಹಾಸನ ಜಿಲ್ಲೆಯಲ್ಲಿ ದೇವೇಗೌಡ, ರೇವಣ್ಣ, ಕುಮಾರಸ್ವಾಮಿಯಂತಹ ನಾಯಕರ ನಡುವೆ ಪ್ರೀತಂ ಗೌಡ ಗೆದ್ದು ಬಂದಿದ್ದಾರೆ‌. ಸತತವಾಗಿ ಪಕ್ಷವನ್ನು ಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೇವೇಗೌಡ ಅವರನ್ನು ಭೇಟಿ ಮಾಡಿರುವುದು ಪ್ರೀತಂ ಗೌಡರಿಗೆ ಸಮಾಧಾನ ತಂದಿಲ್ಲ. ಆದರೆ, ಬೊಮ್ಮಾಯಿ ಅವರು ಜನತಾದಳದ ನಾಯಕ ದೇವೇಗೌಡರು ಎಂದು ಹೋಗಿಲ್ಲ. ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ, ರೈತ ನಾಯಕರು ಎಂದು ಹೋಗಿದ್ದಾರೆ. ಇದರಿಂದ ನಮ್ಮ ಸಂಘಟನೆಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News