ಸ್ವಂತ ಶಕ್ತಿ ಮೇಲೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ: ಬಿ.ಎಸ್ ಯಡಿಯೂರಪ್ಪ

Update: 2021-08-27 18:44 GMT

ಶಿವಮೊಗ್ಗ (ಆ.27): ಸ್ವಂತ ಶಕ್ತಿ ಮೇಲೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸಿಎಂ ಸ್ಥಾನ ತೊರೆದ ಬಳಿಕ ಮೊದಲ ಬಾರಿಗೆ ಯಡಿಯೂರಪ್ಪ ಅವರು ನಗರದ ವಿನೋಬನಗರದಲ್ಲಿರುವ ನಿವಾಸಕ್ಕೆ ಶುಕ್ರವಾರ ಸಂಜೆ ಆಗಮಿಸಿದ್ದು, ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸ್ವಾಗತ ಕೋರಿದರು.

ಕಾರ್ಯಕರ್ತರೊಂದಿಗೆ ಸಭೆ:

ವಿನೋಬನಗರದ ನಿವಾಸಕ್ಕೆ ಮುಂದೆ ಕಾರ್ಯಕರ್ತರ ಸಭೆ ನಡೆಸಿದ ಯಡಿಯೂರಪ್ಪ ಅವರು, ಇಡೀ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಮತ್ತು ನಗರ ಮಾದರಿ ಕ್ಷೇತ್ರವಾಗಿದೆ. ಇನ್ನೊಂದು ಆರು ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು, ವಿಮಾನ ಹಾರಾಟ ಪ್ರಾರಂಭವಾಗಲಿದೆ. ಕೈಗಾರಿಕೆಗಳು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಹತ್ತಾರು ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ. ಇದರಿಂದ ತಮ್ಮ ಕನಸು ನನಸಾದಂತಾಗಲಿದೆ ಎಂದು ತಿಳಿಸಿದರು.

ಇನ್ನೊಂದು ವರ್ಷದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ. ಬಳಿಕ ವಿಧಾನಸಭೆ ಕ್ಷೇತ್ರವಾರು ಪ್ರವಾಸ ಕೈಗೊಳ್ಳುತ್ತೇನೆ. ಮೊದಲಿಗೆ ತಮ್ಮ ಶಾಸಕರು ಇರುವ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ. ಬಳಿಕ ನಮ್ಮ ನಮ್ಮ ಶಾಸಕರು ಇರದ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಅಲ್ಲೆಲ್ಲ ಬಿಜೆಪಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ ಎಂದರು. 

ತಮ್ಮ ಮನೆ ಬಾಗಿಲು ಯಾವಾಗಲೂ ತೆಗೆದಿರುತ್ತದೆ. ಜನರು ಯಾವುದೇ ಸಮಸ್ಯೆ ಇದ್ದರೂ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಬರಬಹುದು ಎಂದರು .

ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಪದ್ಮನಾಭ ಭಟ್ ಸೇರಿದಂತೆ ಹಲವರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News