ಕಾಂಗ್ರೆಸ್ ಇತಿಹಾಸ ಸೇರುತ್ತಿರುವ ಪಕ್ಷ: ನಳಿನ್‍ಕುಮಾರ್

Update: 2021-08-31 10:08 GMT

ಬೆಂಗಳೂರು, ಆ.31:  ಕಾಂಗ್ರೆಸ್ ಪಕ್ಷದ ಒಳಜಗಳ ಬೀದಿಗೆ ಬಂದಿದೆ. ಒಂದು ಪಕ್ಷವನ್ನೇ ಸರಿಯಾಗಿ ನಡೆಸಲು ಆಗದವರು ಇಷ್ಟು ದೊಡ್ಡ ರಾಜ್ಯದ ಆಡಳಿತ ನಡೆಸಲು ಅವರಿಂದ ಸಾಧ್ಯವೇ?  ಕಾಂಗ್ರೆಸ್ ಇತಿಹಾಸ ಸೇರುತ್ತಿರುವ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಹೇಳಿದ್ದಾರೆ.

ಧಾರವಾಡದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇನ್ನು 10 ವರ್ಷ ಕಳೆದರೂ ರಾಜ್ಯದಲ್ಲಿ ಆಡಳಿತ ಗಳಿಸದು ಎಂದು ಕಾಂಗ್ರೆಸ್ ಮುಖಂಡರಿಗೆ ಗೊತ್ತಿದೆ. ಮುಖ ಉಳಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ ಎಂದರು.

‘ಮನೆ ಬಾಗಿಲಿಗೆ ನಗರ ಪಾಲಿಕೆ’ ಪರಿಕಲ್ಪನೆಯಡಿ ಚುನಾವಣೆ ಸ್ಪರ್ಧಿಸಲಿದ್ದೇವೆ. ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದು ನಳಿನ್‍ಕುಮಾರ್ ತಿಳಿಸಿದ್ದಾರೆ.

ಅಭಿವೃದ್ಧಿ ಕಾರ್ಯಗಳಿಂದ ಜನಾಭಿಪ್ರಾಯ ನಮ್ಮ ಪರವಾಗಿದೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರವನ್ನು ಮಾದರಿ ನಗರವಾಗಿ ಪರಿವರ್ತಿಸಲು ಜನರು ನಮಗೆ ಮತ ನೀಡಲಿದ್ದಾರೆ. ಪಾಲಿಕೆ ಸದಸ್ಯರು ಜನಸೇವಕರಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆಯೊಂದಿಗೆ ಬಿಜೆಪಿ ಕೆಲಸ ಮಾಡಲಿದೆ. ನಿರಂತರ ಜನಸ್ಪಂದನದ ಕೆಲಸ ಪಾಲಿಕೆ ಸದಸ್ಯರಾಗಬೇಕು ಎಂದರು. ವಿಚಾರ, ಸಿದ್ಧಾಂತ, ನಿಷ್ಠೆ, ಜನಸ್ಪಂದನ ಹಾಗೂ ಸೇವಾ ಕಾರ್ಯ ಪರಿಗಣಿಸಿ ಈ ಬಾರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಬೆಳಗಾವಿ, ಕಲಬುರ್ಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಲ್ಲಿ ಸೆಪ್ಟೆಂಬರ್ 3ರಂದು ಚುನಾವಣೆ ನಡೆಯಲಿದೆ. ಇದಕ್ಕಾಗಿ ಮನೆ ಮನೆ ಭೇಟಿ, ಪ್ರಚಾರ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಬೆಳಗಾವಿ ಪಾಲಿಕೆಯಲ್ಲಿ ಕಳೆದ 25 ವರ್ಷಗಳಿಂದ ಚಿಹ್ನೆಯ ಆಧಾರದಲ್ಲಿ ಚುನಾವಣೆ ನಡೆದಿರಲಿಲ್ಲ. ಈ ಬಾರಿ ಪಕ್ಷಗಳ ಚಿಹ್ನೆಯ ಆಧಾರದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ. ಕಲಬುರ್ಗಿಯಲ್ಲಿ ಯಾವತ್ತೂ ಬಿಜೆಪಿ ಆಡಳಿತ ಮಾಡಿಲ್ಲ. ನಾನು 3 ಕಡೆ ಪ್ರವಾಸ ಮಾಡಿದ್ದು, ವಾತಾವರಣ ನಮ್ಮ ಪರವಾಗಿದೆ. ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ- ಧಾರವಾಡದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ನುಡಿದರು.

ನಮ್ಮ ಸರಕಾರ ಬಂದ ಬಳಿಕ ಹುಬ್ಬಳ್ಳಿ- ಧಾರವಾಡಕ್ಕೆ ಕೇಂದ್ರದ ಅತಿ ಹೆಚ್ಚು ಅನುದಾನ ಲಭಿಸಿದೆ. ಸ್ಮಾರ್ಟ್ ಸಿಟಿ, ಅಮೃತ ಯೋಜನೆ ಅನುಷ್ಠಾನಗೊಳ್ಳುತ್ತಿವೆ. ರಾಜ್ಯ ಸರಕಾರದ ನಗರೋತ್ಥಾನದಡಿ 2 ಸಾವಿರ ಕೋಟಿ ರೂ.ನ ಕಾಮಗಾರಿಗೆ ಟೆಂಡರ್ ಆಗಿದೆ. ನೀರು ಮನೆಗೆ ಟ್ಯಾಪ್ ಮೂಲಕ ಬರುವ ಮಾದರಿಯಲ್ಲೇ ಮನೆಗೆ ಗ್ಯಾಸ್ ಒದಗಿಸುವ ಕಾರ್ಯವೂ ಅನುಷ್ಠಾನಗೊಳ್ಳುತ್ತಿದೆ ಎಂದು ವಿವರಿಸಿದರು.

ಯುಜಿಡಿ ಲೈನ್ ಸರಿಪಡಿಸುವಿಕೆ, ಐಐಟಿ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಬೈಪಾಸ್ ರಸ್ತೆ ಸೇರಿ ವಿವಿಧ ಯೋಜನೆಗಳಡಿ ಅತಿ ಹೆಚ್ಚು ಅನುದಾನ ಬಂದಿದೆ. ಕೇಂದ್ರದ ಹಿರಿಯ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ರಾಜ್ಯ ಸರಕಾರದ ಅನುದಾನವೂ ಅತಿ ಹೆಚ್ಚು ಇಲ್ಲಿಗೆ ಸಿಕ್ಕಿದೆ ಎಂದರು.

   ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಶಾಸಕ ಅಮೃತ್ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News