ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶವಿದೆ: ಡಿ.ಕೆ.ಶಿವಕುಮಾರ್

Update: 2021-08-31 17:19 GMT

ಬೆಂಗಳೂರು, ಆ.31: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗೂ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಗಳವರ ನಗರದಲ್ಲಿ ಎನ್‍ಎಸ್‍ಯುಐ ನೂತನ ಅಧ್ಯಕ್ಷ ಕೀರ್ತಿ ಗಣೇಶ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಸ್‍ಜೆಆರ್‍ಸಿ ಕಾಲೇಜಿನಲ್ಲಿದ್ದಾಗ ಎನ್‍ಎಸ್‍ಯುಐ ಚುನಾವಣೆಗೆ ನನಗೆ ಟಿಕೆಟ್ ನೀಡಲಿಲ್ಲ. ಆಗ ದೇಶದ ಪ್ರಧಾನಿಯಾಗಿ ಇಂದಿರಾಗಾಂಧಿ ಅವರಿದ್ದರು. ಆಗ ಬೇರೆ ಪಕ್ಷದಿಂದ ಆಹ್ವಾನ ಬಂದಿತ್ತು. ಆಗ ನಾನು ನನ್ನ ಸಿದ್ಧಾಂತವೇ ಬೇರೆ, ಹೀಗಾಗಿ ನಾನು ಕಾಂಗ್ರೆಸಿನಲ್ಲೇ ಇರುತ್ತೇನೆ ಎಂದು ಹೇಳಿದೆ ಎಂದರು.

ಮೊದಲು ಸದಸ್ಯತ್ವ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ನೀವು ಕೊಡುಗೆ ನೀಡಬೇಕು ಎಂದು ಇಚ್ಛೆ ಇದ್ದರೆ, ನಾಯಕರಾಗಬೇಕಾದರೆ ಸದಸ್ಯತ್ವ ಮಾಡಿಸಬೇಕು. ಸದಸ್ಯತ್ವ ಮಾಡಿಸಿದರೆ ನೀವು ನಾಯಕರಾಗಿ ಬೆಳೆಯಲು ಸಾಧ್ಯ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ 100 ವರ್ಷಗಳ ಹಿಂದೆ ಇರಲಿಲ್ಲ. ಆಗ ಕೆಪಿಸಿಸಿ ಸಮಿತಿ ಇತ್ತು. ನಾಗ್ಪುರ ಅಧಿವೇಶನದಲ್ಲಿ ಕರ್ನಾಟಕ ಪ್ರಾವೀನ್ಷಿಯಲ್ ಕಾಂಗ್ರೆಸ್ ಸಮಿತಿ ಎಂದು ಘೋಷಿಸಿದರು. ಅದಕ್ಕೀಗ 100 ವರ್ಷವಾಗಿದೆ ಎಂದು ಅವರು ಹೇಳಿದರು.

ಕನ್ನಡ ಮಾತಾನಾಡುವವರನ್ನು ಸೇರಿಸಿ ಈ ಸಮಿತಿ ರಚಿಸಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದ್ದು, ಈ ವರ್ಷ ನೀವು 75 ಸಾವಿರ ನೂತನ ಸದಸ್ಯತ್ವ ಮಾಡಿಸಬೇಕು. ನೀವು ಒಬ್ಬ ನಾಯಕ 1 ಸಾವಿರ ಸದಸ್ಯತ್ವ ಮಾಡಿಸಲಿಲ್ಲ ಎಂದರೆ ನೀವು ನಾಯಕರಾಗಲು ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ಕಾಲೇಜು ಉಸ್ತುವಾರಿ ವಹಿಸಿಕೊಳ್ಳಲಿ. ಎನ್‍ಎಸ್‍ಯುಐ ನಮ್ಮ ಬೇರು. ಮುಂದೆ ಫಲ ಅನುಭವಿಸಬೇಕು ಎಂದರೆ ನಮ್ಮ ಬೇರು ಗಟ್ಟಿಗೊಳಿಸಬೇಕು. ನೀವು ಮೊದಲು ಕನಸು ಕಾಣಬೇಕು, ಆ ಕನಸನ್ನು ಇಷ್ಟಪಡಬೇಕು. ಅದನ್ನು ಸಾಕಾರಗೊಳಿಸಲು ನಿರ್ಧರಿಸಬೇಕು. ಜತೆಗೆ ಶಿಸ್ತು ಬೆಳೆಸಿಕೊಳ್ಳಬೇಕು ಎಂದು ಶಿವಕುಮಾರ್ ಹೇಳಿದರು.

ನೀವು ಸಾವಿರ ಸದಸ್ಯತ್ವ ಮಾಡಿಕೊಂಡು ಬನ್ನಿ, ನಿಮ್ಮನ್ನು ಆಹ್ವಾನ ಕೊಟ್ಟು ನಾನೇ ಕರೆಯುತ್ತೇನೆ. ಎನ್‍ಎಸ್‍ಯುಐ ಆರಂಭಿಸಿದ್ದು ಇಂದಿರಾಗಾಂಧಿ ಅವರು. ಯುವಕರಿಗೆ ಆದ್ಯತೆ ಕೊಟ್ಟಿದ್ದು ರಾಜೀವ್ ಗಾಂಧಿ ಅವರು. ಇವರಿಬ್ಬರು ಇಲ್ಲದೇ ಎನ್‍ಎಸ್‍ಯುಐ ಬ್ಯಾನರ್ ಇರಬಾರದು. ಪಕ್ಷದ ಪೋಸ್ಟರ್‍ಗಳಲ್ಲಿ ಯಾರ ಫೋಟೋ ಇರಬೇಕು, ಇರಬಾರದು ಎಂಬ ನಿಯಮ ಸಿದ್ಧಪಡಿಸುತ್ತಿದ್ದೇವೆ. ನಿಮ್ಮ ಹೋರಾಟದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ಬರಬೇಕು. ಅಂತಹ ಹೋರಾಟಗಳನ್ನು ರೂಪಿಸಬೇಕು. ಆಗ ನೀವು ನಾಯಕರಾಗಲು ಸಾಧ್ಯ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿತ್ತು. ಯಾರೆಲ್ಲಾ ಕೆಲಸ ಕಳೆದುಕೊಂಡಿದ್ದಾರೋ ಅವರ ಪದವಿಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಸರಕಾರವನ್ನು ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ನಾನು ಈ ಹೋರಾಟ ಬೆಂಬಲಿಸುತ್ತೇನೆ. ನೀವು ಕೆಲಸ ಕಳೆದುಕೊಂಡವರ ಪದವಿ ಪ್ರಮಾಣಪತ್ರ 3 ಪ್ರತಿ ಮಾಡಿಸಿ, ಪ್ರಧಾನಿಗೆ, ಮುಖ್ಯಮಂತ್ರಿಗೆ ಹಾಗೂ ನಮಗೆ ಕಳುಹಿಸಿಕೊಡಿ ಎಂದು ಶಿವಕುಮಾರ್ ತಿಳಿಸಿದರು.

ಬಿಜೆಪಿ ಸರಕಾರ ಬಂದ ನಂತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ದೊಡ್ಡ, ದೊಡ್ಡ ವ್ಯಕ್ತಿಗಳು ಅತ್ಯಾಚಾರ ಮಾಡುತ್ತಿದ್ದಾರೆ. ಮೈಸೂರು ವಿವಿಯ ಕುಲಸಚಿವರು ಹೆಣ್ಣು ಮಕ್ಕಳು ಸಂಜೆ 6.30ರ ನಂತರ ವಿವಿ ಆವರಣದಲ್ಲಿ ಓಡಾಡಬಾರದು ಅಂತಾ ಆದೇಶ ಹೊರಡಿಸಿದ್ದಾರೆ. ಅವರಿಗೆ ಹೊಸ ಡಾಕ್ಟರೇಟ್ ಕೊಡಬೇಕು. ಇದರ ವಿರುದ್ಧ ನೀವು ಹೋರಾಟ ಮಾಡಬೇಕು. ನೀವು ವಿದ್ಯಾರ್ಥಿಗಳ ಸಮಸ್ಯೆಯ ಧ್ವನಿ ಆಗಿ. ಈ ದೇಶದಲ್ಲಿ ಬದಲಾವಣೆ ಆಗಬೇಕಾದರೆ ಅದು ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರಿಂದ ಸಾಧ್ಯ ಎಂದು ಅವರು ಹೇಳಿದರು

ಸಾವಿರ ಸದಸ್ಯತ್ವ ಮಾಡಿಸಿ ನಾನು ನಿಮಗೆ ಪದಾಧಿಕಾರಿ ಹುದ್ದೆ ನೀಡುತ್ತೇನೆ. ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ವಿದ್ಯಾರ್ಥಿ ನಾಯಕರೇ ನಮ್ಮ ಆಸ್ತಿ. ತ್ರಿವರ್ಣ ಧ್ವಜ ನಮ್ಮ ಶಕ್ತಿ. ನೀವು ಬದಲಾವಣೆ, ಅಭಿವೃದ್ಧಿ ಹಾಗೂ ವಿಜಯದ ಭಾಗವಾಗಬೇಕು. ನಿಮ್ಮ ಬದ್ಧತೆ ಮುಖ್ಯ. ನೀವು ಬೇಗ ಸಾಗಬೇಕಾದರೆ ಏಕಾಂಗಿಯಾಗಿ ಸಾಗಿ, ನೀವು ದೂರ ಸಾಗಬೇಕಾದರೆ ಎಲ್ಲರ ಒಟ್ಟಿಗೆ ಸಾಗಿ ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಶೇ.80 ರಷ್ಟು ಇಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದಲ್ಲಿ 200 ಇಂಜಿನಿಯರಿಂಗ್ ಕಾಲೇಜುಗಳು ಇವೆ. ನಮ್ಮ ರಾಜ್ಯ ತಂತ್ರಜ್ಞಾನ ಕ್ಷೇತ್ರದ ಕೇಂದ್ರ ಸ್ಥಾನ. ಇಲ್ಲೇ ನಿರುದ್ಯೋಗ ಹೆಚ್ಚಾಗಿರುವಾಗ ಇನ್ನು ದೇಶದ ಕತೆ ಏನು? ನಾವು ಸರಕಾರಿ ಉದ್ಯೋಗ ನೀಡಿ ಎನ್ನುತ್ತಿಲ್ಲ. ಇದಕ್ಕೆ ನಾವು ಏನು ಮಾಡಬಹುದು ಎಂದು ನೀವೆಲ್ಲ ಸೇರಿ ನನಗೆ ಸಲಹೆ ನೀಡಿ. ಪಕ್ಷದ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿ ಧ್ವನಿ, ಪಕ್ಷದ ಧ್ವನಿ ಇರಲಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಅವರು ರಾಷ್ಟ್ರ ಧ್ವಜ ನನ್ನ ಧರ್ಮ ಎಂದರು. ಈ ರೀತಿ ಬಿಜೆಪಿಯ ಯಾರಾದರೂ ಒಬ್ಬ ನಾಯಕ ಹೇಳಿದ್ದಾನಾ? ಇದು ಕಾಂಗ್ರೆಸ್ ಇತಿಹಾಸ ಹಾಗೂ ಸಂಸ್ಕøತಿ. ಧಾರವಾಡದಲ್ಲಿ ರಾಷ್ಟ್ರ ಧ್ವಜ ತಯಾರು ಮಾಡುತ್ತಾರೆ. ಅಂತಹ ತ್ರಿವರ್ಣ ಧ್ವಜ ನಿಮ್ಮ ಮೈಮೇಲಿದೆ. ಇದನ್ನು ಬಿಟ್ಟುಕೊಡಬೇಡಿ. ಎನ್ ಎಸ್‍ಯುಐ ಸದಸ್ಯ ಎಂದಿಗೂ ಪಕ್ಷ ಬದಲಿಸುವುದಿಲ್ಲ. ಈ ದೇಶ, ರಾಜ್ಯಕ್ಕೆ ಒಳ್ಳೆಯದಾಗ ಬೇಕು ಎಂದರೆ ನೀವುಗಳು ಗಟ್ಟಿಯಾಗಬೇಕು ಎಂದು ಶಿವಕುಮಾರ್ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News