ನಿಷ್ಠಾವಂತ ಕಾರ್ಯಕರ್ತರಿಂದಲೇ ಜೆಡಿಎಸ್ ಉಳಿದಿದೆ: ಎಚ್.ಡಿ.ದೇವೇಗೌಡ

Update: 2021-09-02 15:39 GMT

ಬೆಂಗಳೂರು, ಸೆ.2: ನಿಷ್ಠಾವಂತ ಕಾರ್ಯಕರ್ತರಿಂದಲೇ ಜೆಡಿಎಸ್ ಪಕ್ಷ ಇನ್ನೂ ಗಟ್ಟಿಯಾಗಿ ಉಳಿದಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ಗುರುವಾರ ನಗರದ ಜೆಪಿ ಭವನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೇದಿಕೆ ಮೇಲಿರುವ ಮಹಿಳಾ ಮುಖಂಡರು ದೇವೇಗೌಡರ ಮುಖ ನೋಡಿ ಪಕ್ಷಕ್ಕೆ ಬಂದಿಲ್ಲ. ಪಕ್ಷದ ತತ್ವ ಸಿದ್ಧಾಂತ ಮತ್ತು ಜನಪರ ಪರ ಕಾಳಜಿ ಮೆಚ್ಚಿ ಬಂದಿದ್ದಾರೆ. ಕಾರ್ಯಕರ್ತರೇ ಪಕ್ಷದ ಜೀವಾಳ, ನಾಯಕರು ನೆಪಮಾತ್ರ ಎಂದು ಹೇಳಿದರು.

ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂದು ಎಲ್ಲರಿಗೂ ಈಗಾಗಲೇ ಸ್ಪಷ್ಟವಾಗಿ ಸೂಚನೆ ಕೊಡಲಾಗಿದೆ. ರಾಜಕೀಯವಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡಲು ಮಹಿಳೆಯರು ಆಗಮಿಸಿದ್ದೀರಿ. ನಾನು ಸಿಎಂ ಆಗುವುದಕ್ಕೆ ಮೊದಲೇ ಹೆಣ್ಣು ಮಕ್ಕಳಿಗೆ ಏನು ಮಾಡಬೇಕು ಎಂದು ಚಿಂತನೆ ಮಾಡಿ ಮೀಸಲಾತಿಗಾಗಿ ಹೋರಾಟ ಮಾಡಿದ್ದನ್ನು ಮೆಲಕು ಹಾಕಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಮುಳುಗುತ್ತಿರುವ ಹಡಗು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಮುಳುಗುತ್ತಿರುವ ಹಡಗಿನ ಪಕ್ಷದ ಜೊತೆ ಎರಡು ಬಾರಿ ಸರಕಾರ ರಚನೆ ಮಾಡಿದ್ದನ್ನು ಅವರು ಮರೆತಿರಬಹುದು ಎಂದು ತಿರುಗೇಟು ನೀಡಿದರು.
ಮುಂದಿನ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಸವಾಲು ಹಾಕಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News