ಪ್ರೀತಿಗೆ ಅಡ್ಡಿಪಡಿಸಿದ್ದಾರೆಂದು ಯುವತಿಯ ತಾಯಿಯನ್ನೇ ಕೊಲೆ ಮಾಡಿದ ಯುವಕ

Update: 2021-09-02 16:38 GMT

ಮೈಸೂರು,ಸೆ.2: ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದ ಮಹಿಳೆಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣವನ್ನು ಭೇದಿಸಿದ ಪೊಲೀಸರು ಆಕೆಯ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಬಂಧಿಸಿದ್ದಾರೆ.

ಬಹಿರ್ದೆಸೆಗೆ ತೆರಳಿದ್ದ ಮೂಗೂರಿನ ಭಾಗ್ಯಲಕ್ಷ್ಮಿ ಎಂಬ ಮಹಿಳೆ ಶವ ಹೊಸಹಳ್ಳಿ ಸೇತುವೆ ಬಳಿ ಪತ್ತೆಯಾಗಿತ್ತು. ಈಕೆ ಸಾವು ಹಲವು ಅನುಮಾನ ಹುಟ್ಟಿಸಿತ್ತು. ಈ ಘಟನೆಯಿಂದ ಗ್ರಾಮದ ಜನರು ಬೆಚ್ಚಿಬಿದ್ದಿದ್ದರು. ಪ್ರಕರಣ ದಾಖಲಿಸಿಕೊಂಡ ಟಿ.ನರಸೀಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತ ಮಹಿಳೆ ಭಾಗ್ಯಲಕ್ಷ್ಮಿ ಅವರ ಮಗಳನ್ನು ಪ್ರೀತಿಸುತ್ತಿದ್ದ ಮಹೇಶ್ ಕುಮಾರ್ (23) ಎಂಬ ಯುವಕನೇ ಮಹಿಳೆಯನ್ನು ಕೊಲೆ ಮಾಡಿರುವ ಅಂಶ ಬಯಲಾಗಿದೆ. ಭಾಗ್ಯಲಕ್ಷ್ಮಿ  ಅವರ ಮಗಳನ್ನು ಮಹೇಶ್ ಕುಮಾರ್ ಪ್ರೀತಿಸುತ್ತಿದ್ದ, ಇವರಿಬ್ಬರ ಪ್ರೀತಿಗೆ ಭಾಗ್ಯಲಕ್ಷ್ಮಿ ಅಡ್ಡಿಯಾಗಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಮಹೇಶ್ ಕುಮಾರ್ ಆ.24 ರಂದು ಭಾಗ್ಯಲಕ್ಷ್ಮಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ತಲೆಗೆ ಗುದ್ದಲಿಯಿಂದ ಹೊಡೆದು ಸಾಯಿಸಿದ್ದಾನೆ. ನಂತರ ಹೊಸಹಳ್ಳಿ ಸೇತುವೆ ಬಳಿ ಶವವನ್ನು ತಂದು ಬಿಸಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News