`ಮೇಕೆದಾಟು ಯೋಜನೆ'ಗೆ ತಮಿಳುನಾಡಿನಿಂದ ವಿನಾಕಾರಣ ಅಡ್ಡಿ: ಸಚಿವ ಗೋವಿಂದ ಕಾರಜೋಳ

Update: 2021-09-05 13:18 GMT

ಹುಬ್ಬಳ್ಳಿ, ಸೆ. 5: `ನಾವು ಕುಡಿಯೋದಕ್ಕೆ ನೀರು ಕೇಳುತ್ತಿದ್ದೇವೆಯೇ ಹೊರತು ಕೃಷಿಗಾಗಿ ಅಲ್ಲ. ಮೇಕೆದಾಟು ಯೋಜನೆಯಲ್ಲಿ ತಮಿಳುನಾಡು ಸರಕಾರ ವಿನಾಕಾರಣ ಅಡ್ಡಿಪಡಿಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ರವಿವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯಲ್ಲಿ ನಾವು ಹೆಚ್ಚಿನ ನೀರನ್ನು ತೆಗೆದುಕೊಳ್ಳುತ್ತಿಲ್ಲ. ಕುಡಿಯುವ ನೀರಿಗಾಗಿ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿದೆ. ನಾವು ನೀರು ಕೇಳುತ್ತಿದ್ದೇವೆ. ಇರೋದು ಕುಡಿಯೋ ನೀರಿಗಾಗಿ ಹೊರತು ಕೃಷಿಗಾಗಿ ಅಲ್ಲ. ಆದರೆ ತಮಿಳನಾಡು ವಿನಾಕಾರಣ ಅಡ್ಡಿ ಪಡಿಸುತ್ತಿದೆ. ಈಗಾಗಲೇ ತಮಿಳುನಾಡಿನವರು ಪಿಐಎಲ್ ಹಾಕಿದ್ದಾರೆ ನಾವು ಹಾಕಿದೀವಿ. ಇದನ್ನು ಕೂಡಲೇ ಇತ್ಯರ್ಥಪಡಿಸಲಿಕ್ಕೆ ಸುಪ್ರೀಂಕೋರ್ಟ್‍ನಲ್ಲಿ ನಾವು ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ ಎಂದರು.

ಮಹದಾಯಿ, ಕಳಸಾ ಬಂಡೂರಿ ಯೋಜನೆಯಲ್ಲಿ ನಮಗೆ 13 ಟಿಎಂಸಿ ನೀರು ಸಿಕ್ಕಿದೆ. ಅದರಲ್ಲಿ 5.4 ಟಿಎಂಸಿ ನೀರು ಕುಡಿಯೋದಕ್ಕೆ ಮತ್ತು ಉಳಿದದ್ದು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ. ಕಳಸಾ ಬಂಡೂರಿ ಯೋಜನೆಗೆ ಎನ್ವಿರಾನಮೆಂಟ್ ಮತ್ತು ಫಾರೆಸ್ಟ್ ಕ್ಲಿಯರೆನ್ಸ್ 2015ರಲ್ಲೇ ಆಗಿದೆ. ಆದರೆ ಈ ಯೋಜನೆ ಕುರಿತು ಗೋವಾ ಮತ್ತು ಮಹಾರಾಷ್ಟ್ರ ಪಿಐಎಲ್ ಸಲ್ಲಿಸಿದ್ದಾರೆ. ನಾವು ಸಲ್ಲಿಸಿದ್ದೇವೆ. ಅದಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಜಾರಿಗೆ ತರುವಲ್ಲಿ ಕೇಂದ್ರ ಸರಕಾರ ಮದ್ಯಸ್ಥಿಕೆ ವಹಿಸಿ ಒಪ್ಪಿಗೆ ನೀಡಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಕಾರಜೋಳ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News