ಡ್ರಗ್ಸ್ ಪ್ರಕರಣ: ನಟಿ ಅನುಶ್ರೀ ಹೆಸರು ಕೈಬಿಟ್ಟಿರುವುದು ನನಗೆ ಗೊತ್ತಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-09-08 11:18 GMT

ಬೆಳಗಾವಿ, ಸೆ. 8: `ಸ್ಯಾಂಡಲ್‍ವುಡ್ ಡ್ರಗ್ಸ್(ಮಾದಕ ವಸ್ತುಗಳ) ಸೇವನೆ ಪ್ರಕರಣದ ಚಾರ್ಜ್‍ಶೀಟ್‍ನಲ್ಲಿ ನಿರೂಪಕಿ ಅನುಶ್ರೀ ಅವರ ಹೆಸರನ್ನು ಕೈ ಬಿಟ್ಟಿರುವ ವಿಚಾರ ನನಗೆ ಗೊತ್ತಿಲ್ಲ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಡ್ರಗ್ಸ್ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣದ ಚಾರ್ಜ್‍ಶೀಟ್‍ನಲ್ಲಿ ಆರೋಪಿಗಳನ್ನು ಕೈ ಬಿಡುವಂತೆ ಯಾವ ರಾಜಕೀಯ ನಾಯಕರು ನಮ್ಮ ಮೇಲೆ ಒತ್ತಡ ಹಾಕಿಲ್ಲ' ಎಂದು ಸ್ಪಷ್ಟಪಡಿಸಿದರು.

`ಮಾದಕ ವಸ್ತುಗಳ ಪ್ರಕರಣದಲ್ಲಿ ಕಾನೂನು ತನ್ನದೇ ದಾರಿ ಕಂಡುಕೊಳ್ಳಲಿದೆ. ಯಾರ ವಿಷಯದಲ್ಲೂ ಮೃದು ಧೋರಣೆ ಅನುಸರಿಸುತ್ತಿಲ್ಲ. ಡ್ರಗ್ಸ್ ಸೇವನೆ ಕುರಿತಂತೆ ಖಚಿತ ಪಡಿಸಿಕೊಳ್ಳಲು ಕೂದಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ಸಂಪೂರ್ಣ ವರದಿ ಬಂದಿದೆ. ಮುಂದಿನ ಕ್ರಮಗಳ ಬಗ್ಗೆ ಕಾನೂನು ತನ್ನದೇ ಆದ ದಾರಿ ಕಂಡುಕೊಳ್ಳುತ್ತದೆ ಎಂದು ಅವರು ತಿಳಿಸಿದರು.

ನಮ್ಮ ಪೊಲೀಸರು ಯಾರ ವಿಷಯದಲ್ಲೂ ಮೃದು ಧೋರಣೆ ಅನುಸರಿಸುತ್ತಿಲ್ಲ. ಯಾರನ್ನು ಹಿಡಿಯುವ ಅಥವಾ ಬಿಟ್ಟುಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ಬಗ್ಗೆ ತನಿಖೆ ಕೈಗೊಂಡಾಗ ನಿರೂಪಕಿ ಅನುಶ್ರೀ ಅವರ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀಗೆ ನೋಟಿಸ್ ಕೊಟ್ಟು ಮಂಗಳೂರಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡು ಕಳುಹಿಸಿದ್ದರು' ಎಂದು ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News