ಬೈಕ್ ಗೆ ಲಾರಿ ಢಿಕ್ಕಿ: ಅಪ್ಪ ಮಗಳು ಸ್ಥಳದಲ್ಲೇ ಮೃತ್ಯು

Update: 2021-09-09 12:56 GMT

ಚಿಕ್ಕಮಗಳೂರು, ಸೆ.9: ದ್ವಿಚಕ್ರ ವಾಹನಕ್ಕೆ ಗ್ಯಾಸ್ ಸಿಲಿಂಡರ್ ಸಾಗಣೆ ಮಾಡುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತಂದೆ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಬುಧವಾರ ವರದಿಯಾಗಿದೆ.

ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಗ್ರಾಮದ ಜಯಣ್ಣ(58) ಹಾಗೂ ಅವರ ಮಗಳು ರಕ್ಷಿತಾ (19) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಗೌರಿ ಹಬ್ಬದ ಹಿನ್ನೆಲೆಯಲ್ಲಿ ಜಯಣ್ಣ ಅವರು ತನ್ನ ಕಿರಿಯ ಮಗಳೊಂದಿಗೆ ಬುಧವಾರ ಬೆಳಗ್ಗೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಗ್ರಾಮದ ದೊಡ್ಡ ಮಗಳ ಮನೆಗೆ ಬಾಗಿನ ನೀಡಲು ಬೈಕ್‍ನಲ್ಲಿ ತೆರಳಿದ್ದರು. ಮಗಳಿಗೆ ಬಾಗನ ನೀಡಿ ಜಯಣ್ಣ ಹಾಗೂ ರಕ್ಷಿತಾ ಬೈಕ್‍ನಲ್ಲಿ ಹಿಂದಿರುಗುತ್ತಿದ್ದ ವೇಳೆ ಉದ್ದೇಬೋರನಹಳ್ಳಿ ಗ್ರಾಮದ ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬಂದ ಗ್ಯಾಸ್ ಸಿಲಿಂಡರ್ ಸಾಗಣೆ ಲಾರಿ ಬೈಕ್‍ಗೆ ಢಿಕ್ಕಿ ಹೊಡೆದಿದೆ. 

ಢಿಕ್ಕಿಯ ರಭಸಕ್ಕೆ ಬೈಕ್‍ನಲ್ಲಿದ್ದ ಅಪ್ಪ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‍ಗೆ ಢಿಕ್ಕಿ ಹೊಡೆದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಲಾರಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News