ಚುನಾವಣಾ ಆಯೋಗದ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Update: 2021-09-16 18:02 GMT
ಸಿದ್ದರಾಮಯ್ಯ 

ಬೆಂಗಳೂರು: 'ರಾಜ್ಯ ಸರ್ಕಾರ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರಗಳ ಪುನರ್ ವಿಂಗಡನೆಗೆ ಪ್ರತ್ಯೇಕ ಆಯೋಗ ರಚನೆ ಮಾಡಲು ಹೊರಟಿದೆ. ಇದು ಚುನಾವಣಾ ಆಯೋಗದ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರ' ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಚುನಾವಣಾ ಆಯೋಗಕ್ಕೆ ನೀಡಿರುವ ಮಾರ್ಗದರ್ಶಿಸೂತ್ರಗಳನ್ನು ಈಗಾಗಲೇ ನ್ಯಾಯಾಲಯದಲ್ಲಿ ಹಲವು ಮಂದಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯ ತೀರ್ಪು ನೀಡುವ ಮೊದಲೇ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ತರಾತುರಿಯಲ್ಲಿ ಅನುಮೋದನೆ ಪಡೆಯಲು ವಿರೋಧ ಪಕ್ಷಗಳ ಮೇಲೆ ಒತ್ತಡ ಹೇರುವುದು' ಸರಿಯಲ್ಲ ಎಂದು ಹೇಳಿದ್ದಾರೆ. 

'ಚುನಾವಣಾ ಆಯೋಗವು ಕ್ಷೇತ್ರಗಳ ಮೀಸಲಾತಿ ವಿಂಗಡನೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಸರ್ಕಾರಕ್ಕೆ ಇದ್ದಿದ್ದರೆ ಈ ಹಿಂದೆಯೇ ವಿಧೇಯಕಕ್ಕೆ ತಿದ್ದುಪಡಿ ಮಾಡಬೇಕಿತ್ತು, ಎರಡು ವರ್ಷದಿಂದ ಸುಮ್ಮನಿದ್ದು ಚುನಾವಣೆ ಸಮೀಪಿಸುವ ವೇಳೆ ಅದನ್ನು ಮುಂದೂಡುವ ಉದ್ದೇಶದಿಂದ ಇಂಥದ್ದೊಂದು ತಿದ್ದುಪಡಿ ತರಲಾಗುತ್ತಿದೆ' ಎಂದು ದೂರಿದ್ದಾರೆ. 

'1994ರಲ್ಲಿ ಜತನಾ ದಳದ ಸರ್ಕಾರ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಿತ್ತು, ಎಂ.ಪಿ ಪ್ರಕಾಶ್ ಅವರು ಆ ಸಂಪುಟ ಉಪಸಮಿತಿಯ ಅಧ್ಯಕ್ಷರು ಮತ್ತು ನಾನು ಸಮಿತಿಯ ಸದಸ್ಯರಲ್ಲಿ ಒಬ್ಬನಾಗಿದ್ದೆ, ನಾಣಯ್ಯ, ಬೈರೇಗೌಡ, ಸಿಂಧ್ಯಾ ಇತರೆ ಸದಸ್ಯರಾಗಿದ್ದರು. ಮಹಿಳೆಯರಿಗೆ 33% ಮೀಸಲಾತಿ, ಹಿಂದುಳಿದ ಜಾತಿಗಳಿಗೆ 26.4% ಮೀಸಲಾತಿ, ಹಿಂದುಳಿದ ಜಾತಿಗೆ ಸೇರದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 6.6% ಮೀಸಲಾತಿ ನೀಡಬೇಕು ಎಂದು ನಮ್ಮ ಸಮಿತಿ ನೀಡಿದ್ದ ವರದಿಯನ್ನು ಆಧರಿಸಿ ಪಂಚಾಯತ್ ರಾಜ್ ಚುನಾವಣೆಯಲ್ಲಿ ಮೀಸಲಾತಿ ಜಾರಿಗೊಳಿಸಲಾಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ನಮ್ಮ‌ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತು. ಈ ಶಿಫಾರಸ್ಸನ್ನು ಸರ್ಕಾರ ಪರಿಗಣಿಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೂ ಮೀಸಲಾತಿ ನೀಡಿತು. ಅಲ್ಲಿಯವರೆಗೆ ಈ ಹುದ್ದೆಗಳಿಗೆ ಮೀಸಲಾತಿ ಸೌಲಭ್ಯ ಇರಲಿಲ್ಲ' ಎಂದು ತಿಳಿಸಿದ್ದಾರೆ.

'ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ವೇಳೆ ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿಯನ್ನು ತಂದು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಯಿತು. ಈ ಮೀಸಲಾತಿಯನ್ನು ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೊಯ್ಸ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿ, ಸ್ವತಃ ಅವರೇ ವಾದ ಮಾಡಿದರು ಕೂಡ ನ್ಯಾಯಾಲಯ ಅದನ್ನು ತಿರಸ್ಕರಿಸಿ, ಮೀಸಲಾತಿ ಸೌಲಭ್ಯವನ್ನು ಎತ್ತಿಹಿಡಿಯಿತು. ತದನಂತರ ಕಾಂಗ್ರೆಸ್ ಪಕ್ಷ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಬೇಕು ಎಂದು ಉದ್ದೇಶಿಸಿ, ಸಂವಿಧಾನ ತಿದ್ದುಪಡಿ ಮಾಡಿ, ಕಾನೂನು ಜಾರಿ ಮಾಡಿತು. ಇದರಿಂದ ಮಹಿಳೆಯರಿಗೆ ಗ್ರಾಮ ಪಂಚಾಯತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 50% ಮೀಸಲಾತಿ ದೊರೆತಿದೆ' ಎಂದರು. 

'ಬಿಜೆಪಿ ಪಕ್ಷ ಹಿಂದಿನಿಂದಲೂ ಮೀಸಲಾತಿ ವಿರೋಧಿಯಾಗಿತ್ತು, ಈಗಲೂ ಮೀಸಲಾತಿ ವಿರೋಧಿಯಾಗಿದೆ. ಹಾಗಾಗಿ ಕ್ಷೇತ್ರಗಳ ಪುನರ್ ವಿಂಗಡನೆಗೆ ಆಯೋಗ ರಚನೆ ಮಾಡಿ, ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರ ಮಾಡಿದೆ. ಇದು ಸಂವಿಧಾನದ ಮೇಲಿನ ದಾಳಿ ಎಂಬುದು ನನ್ನ ಅಭಿಪ್ರಾಯ ಕೂಡ. ಇಂಥಾ ಕರಾಳ ಶಾಸನವನ್ನು ನಾನು ವಿರೋಧಿಸುತ್ತೇನೆ ಮತ್ತು ಸರ್ಕಾರ ಕಾನೂನು ಜಾರಿ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸುತ್ತೇನೆ' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News