ಅಪಾರ್ಟ್‍ಮೆಂಟ್‍ನಲ್ಲಿ ಬೆಂಕಿ ಅವಘಡ ಪ್ರಕರಣ: ತಾಯಿ ಮಗಳು ಸಜೀವ ದಹನ, ಐವರಿಗೆ ಗಾಯ

Update: 2021-09-21 17:16 GMT

photo - twitter@KeypadGuerilla

ಬೆಂಗಳೂರು, ಸೆ.21: ನಗರದ ದೇವರಚಿಕ್ಕನಹಳ್ಳಿ ಬಳಿಯ ಅಪಾರ್ಟ್‍ಮೆಂಟ್ ಸಮುಚ್ಚಯದ ಮೂರು ಫ್ಲ್ಯಾಟ್‍ಗಳಲ್ಲಿ ಬೆಂಕಿ ಅವಘಡ ಸಂಭವಿಸಿ ಮಹಿಳೆಯರಿಬ್ಬರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ ನಗರದ ಬನ್ನೇರುಘಟ್ಟ ರಸ್ತೆಯ ಬಳಿಯಿರುವ ದೇವರ ಚಿಕ್ಕನಹಳ್ಳಿಯ ಖಾಸಗಿ ಅಪಾರ್ಟ್‍ಮೆಂಟ್‍ನ ಎರಡನೇ ಮಹಡಿಯಲ್ಲಿ ಈ ಘಟನೆ ನಡೆದಿದ್ದು, ಲಕ್ಷಿ ದೇವಿ(82) ಮತ್ತು ಪುತ್ರಿ ಭಾಗ್ಯ ರೇಖಾ (59) ಎಂಬ ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡ ಐವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ 3.30ರ ಸುಮಾರಿಗೆ ಅಪಾರ್ಟ್‍ಮೆಂಟ್‍ ನ ಎರಡನೇ ಮಹಡಿಯಲ್ಲಿ ಗ್ಯಾಸ್ ಪೈಪ್‍ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿ, ಈ ದುರ್ಘಟನೆ ಸಂಭವಿಸಿದೆ.

ಬೆಂಕಿ ತೀವ್ರತೆಗೆ ಫ್ಲ್ಯಾಟ್‍ನಲ್ಲಿರುವ ಎಲ್ಲ ವಸ್ತುಗಳು ಸುಟ್ಟುಹೋಗಿದ್ದು, ಮಹಿಳೆ ಶವ ಕೂಡ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ತೊಡಗಿದರು.

ಸ್ಥಳಕ್ಕೆ ಬೇಗೂರು ಠಾಣಾ ಪೊಲೀಸರು ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು.

ಸಿಲಿಂಡರ್ ಸ್ಫೋಟದಿಂದ ದುರ್ಘಟನೆ

ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಈ ಅವಘಡ ನಡೆದಿದೆ. ಈಗಾಗಲೇ ತನಿಖೆಯಲ್ಲಿ ಮಹಿಳೆಯರು ಮೃತಪಟ್ಟಿರುವುದು ಗೊತ್ತಾಗಿದೆ. ಈಗಾಗಲೇ ಸ್ಥಳಕ್ಕೆ ಐದು ಅಗ್ನಿಶಾಮಕ ಸಿಬ್ಬಂದಿ ವಾಹನಗಳು ಬಂದಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಹೊಗೆ ದಟ್ಟಣೆ ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆ ಸ್ವಲ್ಪ ತಡವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- ಅಮರ್ ಪಾಂಡೆ, ಡಿಜಿಪಿ(ಅಗ್ನಿಶಾಮಕ)

2015ರಲ್ಲಿ ಎಆರ್‍ಸಿ ಎಂಬುವವರು ಈ ನಾಲ್ಕು ಅಂತಸ್ತಿನ ಅಪಾರ್ಟ್‍ಮೆಂಟ್ ನಿರ್ಮಾಣ ಮಾಡಿದ್ದರು. ನಿಶಾಂತ್ ಎಂಬಾತ ಈ ಅಪಾರ್ಟ್‍ಮೆಂಟ್ ಮಾಲಕ ಎಂದು ತಿಳಿದು ಬಂದಿದೆ.

ನೋಡುತ್ತಿದ್ದಂತೆ ಬೆಂಕಿಯಲ್ಲಿ ಮಹಿಳೆ

ಮಹಿಳೆಯೊಬ್ಬರು ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದಾರೆ. ಯುಟಿಲಿಟಿಯಲ್ಲಿ ಈ ಮಹಿಳೆ ಇದ್ದು, ಸುತ್ತ ರಕ್ಷಣೆಗಾಗಿ ಹಾಕಿದ್ದ ಗ್ರಿಲ್ ಇದ್ದಿದ್ದರಿಂದ ಬಚಾವಾಗಲು ಸಾಧ್ಯವಾಗಲಿಲ್ಲ. ಅಪಾಯಕರ ಸ್ಥಿತಿಯಲ್ಲಿ ಮಹಿಳೆ ಸಿಲುಕಿಕೊಂಡಿದ್ದರೂ, ಜನರು ಕೂಡ ಅಸಹಾಯಕರಾಗಿ ನೋಡುವಂಥ ಹೃದಯವಿದ್ರಾವಕ ಪರಿಸ್ಥಿತಿ ಸೃಷ್ಟಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News