ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಆನೆ ವಶಕ್ಕೆ ಪಡೆಯಲು ಮನವಿ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2021-09-21 16:16 GMT

ಬೆಂಗಳೂರು, ಸೆ.21: ತುಮಕೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮಿ ಹೆಸರಿನ ಆನೆಯನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆಗೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಮಠದ ಆಡಳಿತಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ರಾಜ್ಯ ಸರಕಾರಕ್ಕೆ ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆ ಸಲ್ಲಿಸಲು ಪೀಠವು ನಿರ್ದೇಶಿಸಿದೆ.

ಪೀಪಲ್ ಫಾರ್ ಅನಿಮಲ್ಸ್ ಮೈಸೂರು ಮತ್ತು ಊರ್ಮಿ ಭಟ್ಟಾಚಾರ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲ ಅಲ್ವಿನ್ ಸೆಬಾಸ್ಟಿಯನ್, ಕಾಡಸಿದ್ದೇಶ್ವರ ಮಠದ ಆನೆಗೆ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಜತೆಗೆ ಆ ಆನೆಯನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದರು. ಇದಕ್ಕೆ ಒಪ್ಪದ ಪೀಠವು ಸರಕಾರ ಆಕ್ಷೇಪಣೆ ಸಲ್ಲಿಸಬೇಕು ಮತ್ತು ಮಠವು ನೋಟಿಸ್‍ಗೆ ಪ್ರತಿಕ್ರಿಯಿಸಬೇಕು. ಆನಂತರ ಈ ಸಂಬಂಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿ ವಿಚಾರಣೆಯನ್ನು ನ.24ಕ್ಕೆ ಮುಂದೂಡಿತು.

ಮಠದ ಸುಪರ್ದಿಯಲ್ಲಿ ಇರುವ ಆನೆಯನ್ನು ತುಮಕೂರು ಜಿಲ್ಲೆಯಾದ್ಯಂತ ಭಿಕ್ಷಾಟನೆಗೆ ದೂಡಲಾಗಿದೆ. ಕಾನೂನು ಪ್ರಕ್ರಿಯೆಗೆ ವಿರುದ್ಧವಾಗಿ ಅದನ್ನು ಗಡಿ ಭಾಗದಲ್ಲಿ ಸುತ್ತಾಡಿಸಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

1992ರಲ್ಲಿ ಲಕ್ಷ್ಮಿಯು ಅರಣ್ಯ ಶಿಬಿರದಲ್ಲಿ ಜನಿಸಿತ್ತು. ಅದರ ಕಸ್ಟಡಿಯನ್ನು 1994ರ ಮಾರ್ಚ್ 28ರಂದು ಆಂಧ್ರಪ್ರದೇಶದ ಅನಂತಪುರದಲ್ಲಿರುವ ಮಠಕ್ಕೆ ನೀಡಲಾಗಿತ್ತು. ಆದರೆ, ಆನೆಯನ್ನು ಅನಂತಪುರಕ್ಕೆ ಕೊಂಡೊಯ್ಯದ ಪೀಠವು ತನ್ನ ಶಾಖಾಮಠವಾದ ತುಮಕೂರಿನ ನೊಣವಿನಕರೆ ಮಠದಲ್ಲಿ ಉಳಿಸಿತ್ತು. ಸದ್ಯ ಲಕ್ಷ್ಮಿಯನ್ನು ಬಾಡಿಗೆ ನೀಡುವುದು, ಭಿಕ್ಷಾಟನೆಗೆ ಒಡ್ಡುವುದು, ರಾಜ್ಯದಾದ್ಯಂತ ಸುತ್ತಾಡಿಸುವುದನ್ನು ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

2008ರ ಆದೇಶಕ್ಕೆ ವಿರುದ್ಧವಾಗಿ ಬೆಂಗಳೂರಿನಲ್ಲಿ ರಾಜಕಾರಣಿಯೊಬ್ಬರಿಗೆ ಆಶೀರ್ವದಿಸಲು ತುಮಕೂರಿನಿಂದ ಸಿಲಿಕಾನ್ ಸಿಟಿಯ ಖಾಸಗಿ ಹೊಟೇಲ್‍ಗೆ ಲಕ್ಷ್ಮಿಯನ್ನು ಕರೆತರಲಾಗಿತ್ತು. ಈ ಹಿನ್ನೆಲೆಯಲ್ಲಿ 2008ರ ಜುಲೈನಲ್ಲಿ ಲಕ್ಷ್ಮಿಯನ್ನು ವಶಕ್ಕೆ ಪಡೆದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‍ನಲ್ಲಿಟ್ಟು, ಮಾವುತನ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿತ್ತು.

ಈ ಸಂದರ್ಭದಲ್ಲಿ ಲಕ್ಷ್ಮಿಯು ಕಿಡ್ನಿ, ಮೂತ್ರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಇದೆಲ್ಲದರ ನಡುವೆಯೂ ಕೇವಲ 28 ದಿನಗಳ ಬಳಿಕ ಮಠದ ಸ್ವಾಮೀಜಿಯವರ ಆಶ್ವಾಸನೆಯ ಹಿನ್ನೆಲೆಯಲ್ಲಿ ಮತ್ತೆ ಅರಣ್ಯ ಇಲಾಖೆಯು ಆನೆಯನ್ನು ಮಠಕ್ಕೆ ನೀಡಿತ್ತು. ಎರಡು ದಶಕಗಳಿಂದ ಲಕ್ಷ್ಮಿಯ ಮೇಲೆ ಮಠದ ಆಡಳಿತವು ದೌರ್ಜನ್ಯ ಎಸಗಿದೆ. ವಿವಿಧ ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ಅದನ್ನು ಬಾಡಿಗೆಗೆ ನೀಡಲಾಗುತ್ತಿದೆ. ಹೀಗಾಗಿ, ಪ್ರತಿವಾದಿಯಾಗಿರುವ ಮಠ/ದೇವಸ್ಥಾನವು ಲಕ್ಷ್ಮಿಯ ಮಾಲೀಕತ್ವಕ್ಕೆ ಅನರ್ಹವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News