ಸಂಬಂಧಿಕನ ಜೊತೆ ಪತ್ನಿ ಪರಾರಿ: ನೊಂದ ಪತಿ ಆತ್ಮಹತ್ಯೆ

Update: 2021-09-25 06:53 GMT

ವಿಜಯಪುರ, ಸೆ.25: ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಸಂಬಂಧಿಕನೊಂದಿಗೆ ಓಡಿ ಹೋಗಿದ್ದರಿಂದ ನೊಂದ ಪತಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ವೆಂಕಟೇಶ ದ್ವಾರನಹಳ್ಳಿ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಇವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವೀಡಿಯೋ ಪೋಸ್ಟ್ ಮಾಡಿ ಜಮೀನಿನಲ್ಲಿರುವ ಮರವೊಂದರಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಂಕಟೇಶ್ 2 ವರ್ಷಗಳ ಹಿಂದೆ ತಾನು ಪ್ರೀತಿಸಿದ ಯುವತಿಯನ್ನೇ ವಿವಾಹವಾಗಿದ್ದರು. ಆದರೆ ಇತ್ತೀಚೆಗೆ ವೆಂಕಟೇಶರ ಪತ್ನಿ ಪಕ್ಕದ ಮನೆಯಲ್ಲಿರುವ ಸಹೋದರ ಸಂಬಂಧಿ ಶ್ರೀಶೈಲ್ ಎಂಬಾತನ ಜೊತೆಗೆ ಮನೆ ಬಿಟ್ಟು ಓಡಿ ಹೋಗಿದ್ದಳು. ಈ ಬಗ್ಗೆ ವೆಂಕಟೇಶ್ ಪೊಲೀಸ್ ದೂರು ನೀಡಿದ್ದರು. ಅದರಂತೆ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿದ್ದರೂ ಆಕೆ ಶ್ರೀಶೈಲ್ ಜೊತೆಗೆ ಇರುವುದಾಗಿ ಹೇಳಿದ್ದಳು. ಇದರಿಂದ ನೊಂದಿದ್ದ ವೆಂಕಟೇಶ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಫೇಸ್ ಬುಕ್ ನಲ್ಲಿ ಹಾಕಿರುವ ವೀಡಿಯೋದಲ್ಲಿ ತನ್ನ ಸಾವಿಗೆ ಶ್ರೀ ಶೈಲ್ ಕಾರಣ ಎಂದು ವೆಂಕಟೇಶ್ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ತಾಳಿಕೋಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News