ನಾನು ಆರೆಸ್ಸೆಸ್ ಹೊಗಳಿದ್ದೇನೆ ಎನ್ನುವುದು ಅಪ್ಪಟ ಸುಳ್ಳು: ಸಿ.ಟಿ ರವಿಗೆ ಎಚ್.ಡಿ.ದೇವೇಗೌಡ ತಿರುಗೇಟು

Update: 2021-10-08 13:26 GMT

ಬೆಂಗಳೂರು, ಅ.8: ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ನಾನು ಆರೆಸ್ಸೆಸ್ ಹೊಗಳಿದ್ದೇನೆ ಎನ್ನುವುದು ಅಪ್ಪಟ ಸುಳ್ಳು. ಎಲ್.ಕೆ.ಅಡ್ವಾಣಿ ಬಂದಾಗ ನಾವು ತುರ್ತುಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.

ಶುಕ್ರವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನನ್ನ ಅಧ್ಯಕ್ಷತೆಯಲ್ಲಿಯೆ ಒಂದು ಕಾರ್ಯಕ್ರಮ ನಡೆದಿತ್ತು. ಸಭೆಯನ್ನು ದುರುಪಯೋಗ ಮಾಡುವುದು ಸರಿಯಲ್ಲ ಎಂದು ನಾನು ಆ ಸಭೆಯಲ್ಲೆ ಹೇಳಿದ್ದೆ. ನಾವು ತುರ್ತುಪರಿಸ್ಥಿತಿಗೆ ಬೆಂಬಲಿಸುತ್ತೇವೆ ಎಂದು ಹೇಳಿ ಅನೇಕರು ಬರೆದುಕೊಟ್ಟರು ಎಂದರು.

ನನಗೂ ಆರೆಸ್ಸೆಸ್‍ಗೂ ಏನು ಸಂಬಂಧ ಇದೆ. ಆರೆಸ್ಸೆಸ್ ಬಗ್ಗೆ ನನಗೆ ಗಂಧ ಗಾಳಿ ಗೊತ್ತಿಲ್ಲ. ಸುಮ್ಮನೆ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಸಿ.ಟಿ.ರವಿ ವಿರುದ್ಧ ಕಿಡಿಗಾರಿದ ಅವರು, ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರ್ತಾ ಇದೆ ಅಂತ ಗೊತ್ತಿದ್ದೆ. ನೆಹರು ಅವರ ನಂತರ ಕಾಲದಿಂದ ಕಾಲಕ್ಕೆ ಯಾವ ಯಾವ ರಾಜ್ಯದಲ್ಲಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ನನ್ನನ್ನು ಕೆಣಕಲು ಹೋಗಬೇಡಿ ಕೆಣಕಿದರೆ ಸರಿ ಇರಲ್ಲ ಎಂದು ಗುಡುಗಿದರು.

ಕಾಂಗ್ರೆಸ್ ಮುಸ್ಲಿಮರನ್ನು ಗುತ್ತಿಗೆ ಪಡೆದಿಲ್ಲ: ಹಾನಗಲ್ ಹಾಗೂ ಸಿಂದಗಿಯಲ್ಲಿ ಮುಸ್ಲಿಮ್ ಅಭ್ಯರ್ಥಿ ಹಾಕಿದ್ದೇವೆ. ಬಸವಕಲ್ಯಾಣದಲ್ಲೂ ಮುಸ್ಲಿಮ್ ಅಭ್ಯರ್ಥಿ ಹಾಕಿದ್ದೆ. ನಾರಾಯಣರಾವ್ ನನ್ನ ಶಿಷ್ಯ. ಜಾತಿ ನೋಡಿ ನಾನು ಬೆಳೆಸಲಿಲ್ಲ, ಯಾರನ್ನೆಲ್ಲ ಬೆಳೆಸಿದ್ದೇನೆ ಎಂದು ಹೇಳಲ್ಲ. ಬಸವಕಲ್ಯಾಣದಲ್ಲಿ 50 ಸಾವಿರ ಮುಸ್ಲಿಮ್ ಮತಗಳಿವೆ. ಹೀಗಾಗಿ ಮುಸ್ಲಿಮ್ ಅಭ್ಯರ್ಥಿ ಹಾಕಿದ್ದೆವು. ಅದಕ್ಕೂ ಮುನ್ನ ಖೂಬಾಗೆ ಟಿಕೆಟ್ ಕೊಡಲು ಮುಂದಾಗಿದ್ದೆ. ಆದರೆ, ಅವರು ಪಕ್ಷೇತರ ಅಭ್ಯರ್ಥಿ ಆಗುತ್ತೇನೆ ಎಂದಿದ್ದರು ಎಂದು ದೇವೇಗೌಡ ತಿಳಿಸಿದರು.

ಸಿಂದಗಿಯಲ್ಲಿ ಮೊದಲು ಮನಗೂಳಿಗೆ ರಾಜಕೀಯವಾಗಿ ಅವಕಾಶ ಕೊಟ್ಟಿದ್ದೆ ನಾನು. ಆದರೆ ಇವತ್ತು ಅವರ ಮಗ ಕಾಂಗ್ರೆಸ್‍ಗೆ ಹೋಗಿದ್ದಾರೆ. ಮನೆ ಮಗನಂತೆ ಬೆಳೆಸಿಕೊಂಡು ಬಂದೆ. ಸಂಕಷ್ಟದಲ್ಲೂ ಮಂತ್ರಿ ಮಾಡಿದೆವು. ಇಡಿ ಸಿಂದಗಿಗೆ ನೀರನ್ನು ಕೊಡಲೇಬೇಕು ಅಂತ ಮನಗೂಳಿ ಕಾಲವಾದ ನಂತರ ಅವರ ಮಗನನ್ನು ಕಾಂಗ್ರೆಸ್ ಕರೆದುಕೊಂಡು ಹೋದರು. ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ? ಎಂದು ಅವರು ಪ್ರಶ್ನಿಸಿದರು.

ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ ನಾವು ಸುಮ್ಮನಿರಬೇಕಾ ಹೀಗಾಗಿ ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ. ಬಿಜೆಪಿ ಗೆಲ್ಲಿಸಲು ಮುಸ್ಲಿಮ್ ಅಭ್ಯರ್ಥಿ ಹಾಕಿಲ್ಲ. ಮುಸ್ಲಿಮರನ್ನು ಕಾಂಗ್ರೆಸ್‍ನವರು ಗುತ್ತಿಗೆ ಪಡೆದಿಲ್ಲ. ನಾನು ಬೆಳೆಸಿದ್ದ ಮುಸ್ಲಿಮ್ ಮುಖಂಡ(ಝಮೀರ್ ಅಹ್ಮದ್ ಖಾನ್) ಈಗ ಅವರ(ಸಿದ್ದರಾಮಯ್ಯ) ಬಲಗೈ ಶಕ್ತಿಯಾಗಿದ್ದಾರೆ ಎಂದು ದೇವೇಗೌಡ ಹೇಳಿದರು.

ಪಕ್ಷ ಸಂಘಟನೆಗೆ ಕಾರ್ಯಾಗಾರ: ಪಕ್ಷ ಸಂಘಟನೆಯ ದೃಷ್ಟಿಯಿಂದ ಏಳು ದಿನ ಕಾರ್ಯಾಗಾರ ಮಾಡಿದ್ದು, ಹಾಲಿ ಹಾಗೂ ಮಾಜಿ ಶಾಸಕರು, ಪರಿಷತ್ ಸದಸ್ಯರ ಜೊತೆ ನಾನು ಭಾಗಿಯಾಗಿದ್ದೆ. ಈ ಕಾರ್ಯಾಗಾರದಲ್ಲಿ ಕುಮಾರಸ್ವಾಮಿ ಪಂಚರತ್ನ ಯೋಜನೆ ಬಗ್ಗೆ ತಿಳಿಸಿದ್ದಾರೆ. ಇದು ತುಂಬಾ ಉತ್ತಮವಾದ ಕಾರ್ಯಕ್ರಮ. 2023ಕ್ಕೆ ಜನ ನಮ್ಮ ಪಕ್ಷಕ್ಕೆ ಶಕ್ತಿ ನೀಡಿದರೆ, ಈ ಪಂಚ ರತ್ನ ಕಾರ್ಯಕ್ರಮವನ್ನು ಕೊಡುವುದಾಗಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ ಎಂದು ಅವರು ಹೇಳಿದರು. 

ರೈತರ 25 ಸಾವಿರ ಕೋಟಿ ರೂ.ಸಾಲಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದಾಗ, ಅದನ್ನು ಈ ಮನುಷ್ಯ ಹೇಗೆ ಮಾಡುತ್ತಾನೆ ಎಂದು ಅನ್ನಿಸುತ್ತಿತ್ತು. ವಿಧಿಯಾಟ ಬೇರೆ ಬಿಜೆಪಿ 106, ಕಾಂಗ್ರೆಸ್ 78 ಜೆಡಿಎಸ್ 37 ಬಂತು. ನಿಚ್ಚಳ ಬಹುಮತ ಕಳೆದ ಬಾರಿ ಯಾರಿಗೂ ಬರಲಿಲ್ಲ ಆಗ ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿಗೆ ಹೇಳಿದ್ದೆ ಎಂದು ಅವರು ಹೇಳಿದರು.

ಕಾಂಗ್ರೆಸ್‍ಗೆ ಹೆಚ್ಚು ಸೀಟುಗಳು ಬಂದಿದೆ ನಾವು ಮುಖ್ಯಮಂತ್ರಿ ಸ್ಥಾನ ಪಡೆದರೆ ಅಭಾಸ ಆಗುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದಿದ್ದೆ. ಖರ್ಗೆಯವರು ಅದಕ್ಕೆ ಒಪ್ಪಿದ್ದರು. ಸೋನಿಯಾಗಾಂಧಿಗೆ ಒಪ್ಪಿಸುತ್ತೇನೆ ಎಂದು ಗುಲಾಮ್‍ನಬಿ ಆಜಾದ್ ಕೂಡ ಹೇಳಿದ್ದರು. ಆದರೆ ಮತ್ತೆ ಅವರೇ ಬಂದು ಕುಮಾರಸ್ವಾಮಿ ಸಿಎಂ ಆಗಬೇಕೆಂದು ನಮ್ಮನ್ನು ಒಪ್ಪಿಸಿದರು ಎಂದು ದೇವೇಗೌಡ ಹೇಳಿದರು.

ನೂರಾರು ಸೀಟು ಇಟ್ಟುಕೊಂಡಿದ್ದ ಯಡಿಯೂರಪ್ಪ ವಿಪಕ್ಷ ನಾಯಕ ಆದರು. ಸಾಲಮನ್ನಾ ಮಾಡುತ್ತಿರಾ ಇಲ್ವಾ ಎಂದು ಏಕವಚನದಲ್ಲೇ ಮಾತನಾಡಿದ್ದರು. ಯಡಿಯೂರಪ್ಪ ಅವರು ಏಕವಚನದಲ್ಲಿ ಮಾತನಾಡಿದ್ದನ್ನು ಟಿವಿಯಲ್ಲೇ ನೋಡಿದ್ದೆ. ಬಜೆಟ್ ವಿಷಯದಲ್ಲಿ ಸಿದ್ದರಾಮಯ್ಯ ಅವರ ಎಲ್ಲ ಭಾಗ್ಯಗಳನ್ನು ಮುಂದುವರಿಸಲು ಷರತ್ತು ಹಾಕಿದ್ದರು. ಎಲ್ಲ ಷರತ್ತಿನ ಜೊತೆಗೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದರು ಎಂದು ಅವರು ಹೇಳಿದರು.

ಕುಮಾರಸ್ವಾಮಿ ಆರ್ಥಿಕ ತಜ್ಞ ಏನಲ್ಲ. ಸಿದ್ದರಾಮಯ್ಯ ಹಾಗೆ ಸಾಕಷ್ಟು ಬಾರಿ ಬಜೆಟ್ ಮಂಡಿಸಿಲ್ಲ. ಆದರೆ, ಸಂಪನ್ಮೂಲ ಕ್ರೋಡೀಕರಿಸಿ ಯೋಜನೆ ತಂದರು. ಹಿಂದಿನ ಎಲ್ಲ ಯೋಜನೆಗಳಿಗೆ ಹಣ ಹೊಂದಿಸಿದರು. ಹೇಳಿದ ಮಾತನ್ನು ಕುಮಾರಸ್ವಾಮಿ ಮಾಡುತ್ತಾರೆ ಎಂಬುದನ್ನು ಸಾಬೀತು ಪಡಿಸಿದರು ಎಂದು ದೇವೇಗೌಡ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News