ನಾನು ಏಕಾಂಗಿ ಜೀವನ ನಡೆಸುತ್ತಿರುವ ಮಹಿಳೆಯರನ್ನು ಉದ್ದೇಶಿಸಿ ಹೇಳಿಕೆ ನೀಡಿಲ್ಲ: ಸಚಿವ ಡಾ.ಸುಧಾಕರ್ ಸ್ಪಷ್ಟನೆ

Update: 2021-10-11 13:12 GMT

ಬೆಂಗಳೂರು, ಅ. 11: ''ಆಧುನಿಕ ಮಹಿಳೆಯರು ಮಕ್ಕಳನ್ನು ಬಯಸುವುದಿಲ್ಲ'' ಎಂಬ ಸಚಿವ ಸುಧಾಕರ್ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಸುಧಾಕರ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ

''ಆಧುನಿಕ ಮಹಿಳೆಯರು ಒಬ್ಬರೇ ಜೀವನ ನಡೆಸಲು ಬಯಸುತ್ತಿದ್ದಾರೆ, ವಿವಾಹವಾದರೂ ಮಕ್ಕಳಿಗೆ ಜನ್ಮ ನೀಡಲು ಇಷ್ಟಪಡುವುದಿಲ್ಲ. ಬದಲಿಗೆ ಬಾಡಿಗೆ ತಾಯ್ತನವನ್ನು ಅನುಸರಿಸುತ್ತಿದ್ದಾರೆ' ಎಂದು ನಾನು ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರನ್ನು ಉದ್ದೇಶಿಸಿ ಅಂತಹ ಹೇಳಿಕೆಯನ್ನು ನೀಡಿಲ್ಲ ಹಾಗೂ ನನ್ನ ಮಾತು ಅಂತಹ ಉದ್ದೇಶವನ್ನು ಹೊಂದಿರಲೇ ಇಲ್ಲ'' ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ಈ ಸಂಬಂಧ ಸುದೀರ್ಘ ಸ್ಪಷ್ಟಣೆ ನೀಡಿರುವ ಅವರು, `ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕವನ್ನು ಜಗತ್ತು ಎದುರಿಸುತ್ತಿರುವ ಸಮಯದಲ್ಲಿ, ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯಲ್ಲಿ `ವಿಶ್ವ ಮಾನಸಿಕ ಆರೋಗ್ಯ ದಿನ' ಆಚರಣೆಯಾಯಿತು. ಸಾಂಕ್ರಾಮಿಕದಿಂದ ತಮ್ಮವರನ್ನು ಕಳೆದುಕೊಂಡಿರುವುದು, ಒಂಟಿತನ, ಆರ್ಥಿಕ ನಷ್ಟ, ಆತಂಕ ಮೊದಲಾದ ಕಾರಣಗಳಿಂದ ಜನರಲ್ಲಿ ಮಾನಸಿಕ ಒತ್ತಡ, ಉದ್ವೇಗ, ಖಿನ್ನತೆ ಹೆಚ್ಚಾಗಿದೆ. ಅದರಲ್ಲೂ ಯುವಜನಾಂಗದಲ್ಲಿ ಈ ಸಮಸ್ಯೆ ಅಧಿಕವಾಗಿದೆ.

`ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ನನ್ನ ಭಾಷಣದಲ್ಲಿ ಈ `ಮಾನಸಿಕ ಸಮಸ್ಯೆ, ಸವಾಲುಗಳನ್ನು ಭಾರತದ ಕೌಟುಂಬಿಕ ಮೌಲ್ಯಗಳ ಮೂಲಕ ಹೇಗೆ ನಿವಾರಿಸಬಹುದು' ಎಂಬ ಸಂದೇಶವನ್ನು ನೀಡಬೇಕೆಂಬ ಉದ್ದೇಶ ಹೊಂದಿದ್ದೆ. ನನ್ನ ದೀರ್ಘ ಭಾಷಣದಲ್ಲಿ, ಒಂದು ಭಾಗವನ್ನು ನೈಜವಾದ ಉದ್ದೇಶದಿಂದ ಹೊರಗೆಳೆದು ಅಪಾರ್ಥ ಕಲ್ಪಿಸಲಾಗಿದೆ ಎಂಬುದು ಬಹಳ ದುರದೃಷ್ಟಕರ ಸಂಗತಿ. ಈ ಮೂಲಕ ಭಾಷಣದ ವ್ಯಾಪಕವಾದ ಅರ್ಥವನ್ನು ಸಂಕೀರ್ಣಗೊಳಿಸಲಾಗಿದೆ' ಎಂದು ಸುಧಾಕರ್ ಆಕ್ಷೇಪಿಸಿದ್ದಾರೆ.

`ನಾನು ಒಬ್ಬ ಹೆಮ್ಮೆಯ ಹೆಣ್ಣು ಮಗಳ ತಂದೆ ಹಾಗೂ ಸಂಪೂರ್ಣ ವೃತ್ತಿಪರ ತರಬೇತಿ ಪಡೆದ ವೈದ್ಯ ಎಂದು ಮೊದಲಿಗೆ ಹೇಳುತ್ತೇನೆ. ಆದುದರಿಂದ ಮಹಿಳೆಯರ ಸುತ್ತಲಿನ ಸೂಕ್ಷ್ಮತೆಗಳನ್ನು, ಸಂವೇದನೆಗಳನ್ನು ಸಂಪೂರ್ಣವಾಗಿ ಅರಿತಿದ್ದೇನೆ ಹಾಗೂ ನಾವು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಮಾನಸಿಕ ಆರೋಗ್ಯದ ಸವಾಲುಗಳನ್ನು ಪರಿಹರಿಸುವ ಸೌಲಭ್ಯಗಳ ಕೊರತೆ ಇರುವ ಕಡೆಗಳಲ್ಲಿ, ಕುಟುಂಬಗಳು ವ್ಯಕ್ತಿಗೆ ಮೌಲ್ಯಯುತವಾದ ವ್ಯವಸ್ಥೆಯನ್ನು ಸೃಷ್ಟಿಸಿಕೊಡುತ್ತದೆ ಎಂಬುದು ಸಂಶೋಧನೆ ಹಾಗೂ ಅಧ್ಯಯನಗಳಿಂದ ಸಾಬೀತಾಗಿದೆ' ಎಂದು ತಿಳಿಸಿದ್ದಾರೆ.

`ಪಶ್ಚಿಮದ ದೇಶಗಳ ಸಮಾಜವು ವಿಭಕ್ತ ವ್ಯವಸ್ಥೆಯನ್ನು ಉತ್ತೇಜಿಸಿದರೆ, ಭಾರತೀಯ ಸಮಾಜವು ಸಾಮೂಹಿಕತೆ, ಪರಸ್ಪರ ಅವಲಂಬನೆಯನ್ನು ಪ್ರೋತ್ಸಾಹಿಸುತ್ತದೆ. ಆದುದರಿಂದ ಭಾರತೀಯ ಹಾಗೂ ಏಷ್ಯಾದ ಕುಟುಂಬಗಳು, ಸದಸ್ಯರ ಬಗ್ಗೆ ಕಾಳಜಿ ವಹಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ ಮತ್ತು ಇದರಿಂದಲೇ ಪಾಶ್ಚಿಮಾತ್ಯ ದೇಶಗಳಿಗಿಂತ ಹೆಚ್ಚು ಆರೋಗ್ಯದ ಹೊರೆಯನ್ನು ಹೊತ್ತುಕೊಳ್ಳುತ್ತದೆ. ಭಾರತೀಯ ಕುಟುಂಬಗಳು ತಮ್ಮ ರೋಗಿಗಳ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸುತ್ತದೆ ಹಾಗೂ ಆರೈಕೆಯಲ್ಲೂ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳುತ್ತದೆ.

`ಯುವಜನರಲ್ಲಿ ಮದುವೆಗೆ ನಿರಾಕರಣೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಹಿಂಜರಿಕೆಗೆ ಸಂಬಂಧಿಸಿದ ನನ್ನ ಹೇಳಿಕೆ ಕೂಡ ಸರ್ವೆಯೊಂದನ್ನು ಆಧರಿಸಿದ ಹೇಳಿಕೆಯಾಗಿದೆ. ಹೊಸ ಪೀಳಿಗೆಯಲ್ಲಿ(ಮಿಲೆನಿಯಲ್ಸ್) ಶೇ.19ರಷ್ಟು ಮಂದಿ ಮದುವೆ ಹಾಗೂ ಮಕ್ಕಳನ್ನು ಪಡೆಯುವುದಕ್ಕೆ ಆಸಕ್ತಿ ಹೊಂದಿಲ್ಲ. ಇನ್ನೂ ಶೇ.8ರಷ್ಟು ಮಂದಿ ಮಕ್ಕಳ ಬಗ್ಗೆ ಆಸಕ್ತಿ ಹೊಂದಿದ್ದಾರೆ, ಆದರೆ, ವಿವಾಹಕ್ಕೆ ಸಿದ್ಧರಾಗಿಲ್ಲ. ನಂತರದ ಪೀಳಿಗೆಯಲ್ಲಿ (ಪೋಸ್ಟ್ ಮಿಲೆನಿಯಲ್ಸ್-ಜನರೇಶನ್ ಝೆಡ್) ಶೇ.23ರಷ್ಟು ಮಂದಿ ವಿವಾಹ ಹಾಗೂ ಮಕ್ಕಳ ಬಗ್ಗೆ ಆಸಕ್ತಿ ಹೊಂದಿಲ್ಲ. ಈ ಟ್ರೆಂಡ್‍ನಲ್ಲಿ ಲಿಂಗ ಆಧಾರಿತವಾಗಿ ಕೆಲ ವ್ಯತ್ಯಾಸಗಳಿವೆ.

ಇದು ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಸಂಬಂಧಿಸಿದೆ. ಅದ್ಭುತವಾದ ಬೆಂಬಲ ನೀಡುವಂತಹ ವಾತಾವರಣ ಹೊಂದಿರುವ ನಮ್ಮ ಸಾಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಯಿಂದ, ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒತ್ತಡ, ಉದ್ವೇಗ, ಖಿನ್ನತೆಗೆ ನಮ್ಮ ಯುವಜನತೆ ಪರಿಹಾರ ಪಡೆಯಬಹುದು ಎಂಬುದು ಮಾತ್ರ ನನ್ನ ಮಾತಿನ ಮುಖ್ಯ ಉದ್ದೇಶವಾಗಿತ್ತು' ಎಂದು ಸುಧಾಕರ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News