ಕಂದಾಯ ಕೋರ್ಟ್ ಕಲಾಪಗಳನ್ನು ಮುಂದೂಡದಂತೆ ಸೂಚಿಸಿ: ಹೈಕೋರ್ಟ್ ನಿರ್ದೇಶನ

Update: 2021-10-12 12:41 GMT

ಬೆಂಗಳೂರು, ಅ.11: ರಾಜ್ಯದ ಕಂದಾಯ ಕೋರ್ಟ್‍ಗಳು ಕಲಾಪಗಳನ್ನು ಅನಗತ್ಯವಾಗಿ ಮುಂದೂಡಬಾರದು ಎಂದು ಆದೇಶಿಸಿರುವ ಹೈಕೋರ್ಟ್, ಈ ಸಂಬಂಧ ಸುತ್ತೋಲೆ ಹೊರಡಿಸುವಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಕೃಷಿ ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಕಳೆದ ನಾಲ್ಕು ವರ್ಷಗಳಿಂದ ಮುಂದೂಡಿಕೊಂಡೇ ಬರಲಾಗುತ್ತಿದೆ. ಹೀಗಾಗಿ, ಪ್ರಕರಣವನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಲು ನಿರ್ದೇಶಿಸಬೇಕು ಎಂದು ಕೋರಿ ಚಿಕ್ಕಬಳ್ಳಾಪುರದ ಬಂಡಹಳ್ಳಿ ನಿವಾಸಿ ಸುಬ್ಬಾರೆಡ್ಡಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಸೂಚನೆ ನೀಡಿದೆ.

ಕಂದಾಯ ಕೋರ್ಟ್‍ಗಳು ಕಲಾಪಗಳನ್ನು ಅನಗತ್ಯವಾಗಿ ಮುಂದೂಡಬಾರದು. ಯಾವ ದಿನಾಂಕಕ್ಕೆ ಪ್ರಕರಣವನ್ನು ನಿಗದಿಪಡಿಸಲಾಗಿರುತ್ತದೆಯೋ ಅಂದೇ ವಿಚಾರಣೆ ನಡೆಸಬೇಕು. ಪ್ರಕರಣಗಳನ್ನು ಮಧ್ಯಾಹ್ನದ ಬದಲಿಗೆ ಬೆಳಗ್ಗೆ ಸಮಯದಲ್ಲೇ ನಡೆಸಬೇಕು. ಈ ಸಂಬಂಧ ಕಂದಾಯ ಇಲಾಖೆ ಅರೆ ನ್ಯಾಯಿಕ ಪ್ರಾಧಿಕಾರಗಳಾದ ರಾಜ್ಯದ ಎಲ್ಲ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಬೇಕು ಎಂದು ನಿರ್ದೇಶಿಸಿದೆ.

ವಿಚಾರಣೆ ವೇಳೆ ಕಂದಾಯ ಇಲಾಖೆ ನ್ಯಾಯಿಕ ಪ್ರಾಧಿಕಾರಗಳು ನಿಗದಿತ ದಿನಾಂಕದಂದು ವಿಚಾರಣೆ ನಡೆಸದಿದ್ದರೆ ಪಕ್ಷಗಾರರಿಗೆ ತೊಂದರೆಯಾಗುತ್ತದೆ. ಆದರೆ, ಬಹುತೇಕ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಅಥವಾ ಇನ್ನಾವುದೋ ಸಭೆ ಹೆಸರಲ್ಲಿ ಪ್ರಕರಣದ ವಿಚಾರಣೆ ನಡೆಸುವುದಿಲ್ಲ.

ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿ ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ ಎಂದು ಪೀಠ ಹೇಳಿದೆ. ಕಂದಾಯ ನ್ಯಾಯಾಲಯಗಳ ವಿಚಾರಣೆ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. 

2016ರಲ್ಲಿ ಚಿಕ್ಕಬಳ್ಳಾಪುರದ ಬಂಡಹಳ್ಳಿ ಗ್ರಾಮದ ನಿವಾಸಿ ಸುಬ್ಬಾರೆಡ್ಡಿ ತಮ್ಮ ಜಮೀನಿನ ಖಾತೆ ಬದಲಾವಣೆ ಸಂಬಂಧ ತಹಶೀಲ್ದಾರ್ ಹೊರಡಿಸಿದ್ದ ಆದೇಶ ರದ್ದು ಕೋರಿ ಎಸಿ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿ 2016ರಿಂದ ಈವರೆಗೆ 24 ಬಾರಿ ಪ್ರಕರಣವನ್ನು ಮುಂದೂಡಿದ್ದಾರೆಯೇ ವಿನಹ ವಿವಾದವನ್ನು ಇತ್ಯರ್ಥಪಡಿಸಿರಲಿಲ್ಲ. ಈ ಹಿನ್ನೆಲೆ ಪ್ರಕರಣವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News