ಶಿವಮೊಗ್ಗ: ಹಣ ನೀಡದಿದ್ದರೆ ಪೆಟ್ರೋಲ್ ಬಾಂಬ್ ದಾಳಿ ಬೆದರಿಕೆ, ಮನೆ ಮೇಲೆ ಕಲ್ಲು ತೂರಾಟ; ಉದ್ಯಮಿಯ ಆರೋಪ

Update: 2021-10-27 16:28 GMT

ಶಿವಮೊಗ್ಗ, ಅ.27: ಉದ್ಯಮಿಯೊಬ್ಬರಿಗೆ ಬೆದರಿಕೆ ಕರೆ ಬಂದಿದ್ದು, ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಾದ್ ನಗರದ ಉದ್ಯಮಿಯೊಬ್ಬರ ವಾಟ್ಸಾಪ್‍ಗೆ ಕರೆ ಮಾಡಲಾಗಿದ್ದು, 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಡಲಾಗಿದೆ. ಒಂದುವೇಳೆ, ಹಣ ನೀಡದಿದ್ದರೆ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಅಕ್ಟೋಬರ್ 25ರಂದು ರಾತ್ರಿ ಶಾದ್ ನಗರದಲ್ಲಿರುವ ಉದ್ಯಮಿಯ ಮನೆ ಮೇಲೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಇದಾದ ಕೆಲವೇ ನಿಮಿಷದಲ್ಲಿ ಉದ್ಯಮಿಗೆ ವಾಟ್ಸಾಪ್ ಕರೆ ಬಂದಿದೆ.

ಬಚ್ಚನ್ ಹೆಸರಿನಲ್ಲಿ ಬೆದರಿಕೆ: ಕರೆ ಮಾಡಿದ್ದಾರೆ ಎನ್ನಲಾದ ವ್ಯಕ್ತಿಯು ತನ್ನನ್ನು ಬಚ್ಚನ್ ಎಂದು ಹೇಳಿಕೊಂಡಿದ್ದಾರೆ. ಉದ್ಯಮಿಗೆ ಐದು ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಕುಟುಂಬದವರನ್ನು ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಉದ್ಯಮಿಗೆ ಸೆ.16ರಂದು ಸಹ ಬೆದರಿಕೆ ಕರೆ ಬಂದಿದ್ದು, ದುಷ್ಕರ್ಮಿಗಳು ಮೂರು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಮಕ್ಕಳ ಮೇಲೆ ಗುಂಡು ಹಾರಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಆದರೆ, ಉದ್ಯಮಿಯು ಇದನ್ನು ಉಪೇಕ್ಷಿಸಿದ್ದಾರೆ. ಆ ಬಳಿಕವೂ ಕರೆಗಳನ್ನು ಮಾಡಲಾಗಿದೆ. ಆದರೆ, ಕರೆ ಸ್ವೀಕರಿಸಿರಲಿಲ್ಲ. ವಾಟ್ಸಾಪ್‍ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸಿದ್ದು ಬೆದರಿಕೆಯೊಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದ್ಯಾವುದಕ್ಕೂ ಬಗ್ಗದಿದ್ದಾಗ ಮನೆಯ ಮೇಲೆ ದಾಳಿ ಮಾಡಿಸಲಾಗಿದೆ ಎನ್ನಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News