ವಿವಾದಿತ ಕೃಷಿ ಕಾಯ್ದೆಯನ್ನು ಹಿಂಪಡೆಯಲು ಪಕ್ಷಾತೀತ, ಸಂಘಟನಾತ್ಮಕ ಹೋರಾಟ ಅಗತ್ಯ: ನಿವೃತ್ತ ನ್ಯಾ.ನಾಗಮೋಹನ್ ದಾಸ್

Update: 2021-10-28 18:47 GMT

ಶಿವಮೊಗ್ಗ,ಅ.28: ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾಯ್ದೆಯನ್ನು ಹಿಂಪಡೆಯಲು ಜಾತ್ಯಾತೀತ, ಪಕ್ಷಾತೀತವಾದ ಹಾಗೂ ಸಂಘಟನಾತ್ಮಕ ಹೋರಾಟ ಅಗತ್ಯ ಎಂದು ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.

 ಸಾಗರದ ರಾಮಮನೋಹರ್ ಲೋಹಿಯಾ ಪ್ರತಿಷ್ಟಾನದ ವತಿಯಿಂದ ಗಾಂಧಿ ಮೈದಾನದಲ್ಲಿರುವ ನಗರಸಭೆ ರಂಗಮಂದಿರದಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರ ಸುಗ್ರಿವಾಜ್ಙೆಗಳ ಮೂಲಕ ಜಾರಿಗೆ ತಂದ ಕೃಷಿ ಕಾಯ್ದೆ ವರವೇ..ಶಾಪವೇ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ  ಭೂಮಿ ಗುತ್ತಿಗೆ ಕಾಯ್ದೆ,ಕೃಷಿ ಉತ್ಪನ್ನ ಗುತ್ತಿಗೆ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಕವಾಗಿದೆ ಎಂದ ಅವರು, ಈ ಕೃಷಿ ಕಾಯ್ದೆಯನ್ನು ಅನುಷ್ಟಾನಕ್ಕೆ ತರುವುದರಿಂದ ರೈತರು ತಮ್ಮ ಸ್ವಾಭಿಮಾನ ಮತ್ತು ಸ್ವಾವಲಂಬನೆ ಕಳೆದುಕೊಂಡು ತನ್ನದೆ ಭೂಮಿಯಲ್ಲಿ ಕೂಲಿಯಾಳಾಗಿ,ಗುಲಾಮನಾಗಿ ಬದುಕಬೇಕಾಗುತ್ತದೆ ಎಂದು ಹೇಳಿದರು.

ಕಳೆದು ಒಂದು ವರ್ಷದಿಂದ ರೈತರು ದೆಹಲಿಯಲ್ಲಿ ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತರ ಅಹವಾಲು ಆಲಿಸುವುದು ಬಿಟ್ಟು,ರೈತರನ್ನು ದಲ್ಲಾಳಿಗಳು,ಭಯೋತ್ಪಾದಕರು,ನಕ್ಸಲ್ ಎಂಬ ಹಣೆಪಟ್ಟಿಕಟ್ಟುವ ಕೆಲಸ ಮಾಡುತ್ತಿದೆ.ಇದು ಪ್ರಜಾಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ ಎಂದರು.

ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ತೆರೆದ ಕಣ್ಣಿನಿಂದ ನೋಡುವುದಕ್ಕಿಂತ  ಹೃದಯವಂತಿಕೆಯಿಂದ ನೋಡಬೇಕು.ಆಗ ಮಾತ್ರ ರೈತರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ.ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾಯ್ದೆ ದೇಶದ ಆಹಾರ ಭದ್ರತೆಗೆ ಧಕ್ಕೆ ಉಂಟಾಗಲಿದೆ.ಕೃಷಿ ಕಾಯ್ದೆಗಳು ಸಂಪೂರ್ಣ ಬಂಡವಾಳಶಾಹಿಗಳ ಪರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ,ಕೇಂದ್ರ ಸರ್ಕಾರ ಸುಗ್ರಿವಾಜ್ಙೆಗಳ ಮೂಲಕ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿಲ್ಲ.ಸರ್ಕಾರ ಕೂಡಲೇ ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್,ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ಸೇರಿದಂತೆ ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News