ಕೋವಿಡ್ ಲಸಿಕೆ ಖರೀದಿಗಾಗಿ ಸಾಲ

Update: 2021-11-05 06:48 GMT

ಭಾರತದ ಕೋವಿಡ್ ಲಸಿಕೆ ಕಾರ್ಯಕ್ರಮವು ಗಣನೀಯ ಪ್ರಮಾಣದಲ್ಲಿ ವಿದೇಶಿ ನಿಧಿಗಳನ್ನು ಪಡೆಯಲು ಸಜ್ಜಾಗಿದ್ದು, ಇದು ದೇಣಿಗೆಗಳು ಮತ್ತು ವೆಚ್ಚ ಶೀರ್ಷಿಕೆಗಳಲ್ಲಿ ಈಗಾಗಲೇ ಇರುವ ಗೋಜಲನ್ನು ಇನ್ನಷ್ಟು ಹೆಚ್ಚಿಸಲಿದೆ.

 'ಸುರಕ್ಷಿತ ಮತ್ತು ಪರಿಣಾಮಕಾರಿ ' ಕೋವಿಡ್ ಲಸಿಕೆಗಳ ಖರೀದಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ಏಶ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ)ನಿಂದ 50 ಕೋ.ಡಾಲರ್ ಸಾಲವನ್ನು ಕೋರಿದೆ. ಲಸಿಕೆ ಖರೀದಿಗಾಗಿ ಸದಸ್ಯ ರಾಷ್ಟ್ರಗಳಿಗೆ ನೆರವಾಗಲು 2020 ಡಿಸೆಂಬರ್‌ನಲ್ಲಿ ಪ್ರಕಟಿಸಿದ್ದ ತನ್ನ ಒಂಭತ್ತು ಶತಕೋಟಿ ಡಾ.ಗಳ ಏಶ್ಯ ಪೆಸಿಫಿಕ್ ವ್ಯಾಕ್ಸಿನ್ ಅಸೆಸ್ ಫೆಸಿಲಿಟಿ ಕಾರ್ಯಕ್ರಮದಡಿ ಏಶ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಈ ಸಾಲಕ್ಕೆ ಸಹ-ಹಣಕಾಸು ಒದಗಿಸಲಿದೆ. ಜೊತೆಗೆೆ ಈ ಕಾರ್ಯಕ್ರಮದಡಿ ವ್ಯಾಕ್ಸಿನ್ ಸೈಟ್ ಮಾನಿಟರಿಂಗ್ ಮತ್ತು ಬಯೊಮೆಡಿಕಲ್ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳಂತಹ ಕ್ಷೇತ್ರಗಳಲ್ಲಿ ತಾಂತ್ರಿಕ ನೆರವಿಗಾಗಿ ಹೆಚ್ಚುವರಿ 40 ಲ.ಡಾ.ಸಾಲವನ್ನೂ ಎಡಿಬಿ ಭಾರತಕ್ಕೆ ಒದಗಿಸಲಿದೆ. ಅಲ್ಲದೆ ಲಸಿಕೆ ಖರೀದಿಗಾಗಿ ಎಡಿಬಿಯು ಭಾರತಕ್ಕೆ 1.5 ಶತಕೋಟಿ ಡಾ.ಗಳನ್ನು ಒದಗಿಸುವ ನಿರೀಕ್ಷೆಯೂ ಇದೆ.

ಎಡಿಬಿ-ಎಐಐಬಿ ಸಾಲವು ಸುಮಾರು 67 ಕೋ.ಲಸಿಕೆ ಡೋಸ್‌ಗಳ ವೆಚ್ಚವನ್ನು ಸರಿದೂಗಿಸಲಿದೆ ಎಂದು ಹೇಳಲಾಗಿದೆ.
 ಭಾರತ ಸರಕಾರವು ಈವರೆಗೆ ಲಸಿಕೆಗಾಗಿ ಎಷ್ಟು ವೆಚ್ಚ ಮಾಡಿದೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿಯು ಲಭ್ಯವಿಲ್ಲವಾದರೂ,ಸುಮಾರು ಒಂದು ಶತಕೋಟಿ ಡೋಸ್‌ಗಳ ಖರೀದಿಗಾಗಿ ಸುಮಾರು 19,000 ಕೋ.ರೂ.ಗಳನ್ನು ವೆಚ್ಚ ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು,ಇದು ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್‌ಗಳು,ಸಂಸತ್ತಿನಲ್ಲಿ ನೀಡಿದ ಉತ್ತರಗಳು ಮತ್ತು ಅಧಿಕೃತ ಪತ್ರಿಕಾ ಹೇಳಿಕೆಗಳನ್ನು ಆಧರಿಸಿದೆ.
ಈ ನಡುವೆ ಉಳಿದುಕೊಂಡಿರುವ ಪ್ರಶ್ನೆಯೆಂದರೆ ಅಷ್ಟಕ್ಕೂ ಭಾರತಕ್ಕೆ ಲಸಿಕೆ ಸಾಲದ ಅಗತ್ಯವಿದೆಯೇ ಎನ್ನುವುದು.

ಪಿಎಂ ಕೇರ್ಸ್ ನಿಧಿ 2020 ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ದೇಣಿಗೆಗಳ ಮೂಲಕ ಕಾರ್ಯನಿರ್ವಹಿಸುವ ಟ್ರಸ್ಟ್ ಆಗಿ ಪಿಎಂ ಕೇರ್ಸ್ ನಿಧಿಯ ಸ್ಥಾಪನೆಯನ್ನು ಪ್ರಕಟಿಸಿದ್ದರು. ಸ್ಥಾಪನೆಯಾದ ಕೇವಲ 52 ದಿನಗಳಲ್ಲಿ ಸುಮಾರು 1.27 ಶತಕೋಟಿ ಡಾ.ಮೊತ್ತದ ದೇಣಿಗೆಗಳು ಸಂಗ್ರಹವಾಗಿದ್ದವು.

 ಪಿಎಂ ಕೇರ್ಸ್ ನಿಧಿಯ ಉದ್ದೇಶ ಮತ್ತು ದಶಕಗಳಿಂದಲೂ ಪ್ರಧಾನಿ ಕಚೇರಿಯ ಸಂಪೂರ್ಣ ವಿವೇಚನೆಯಡಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್)ಯ ಉದ್ದೇಶ ಇವೆರಡು ಹೆಚ್ಚುಕಡಿಮೆ ಒಂದೇ ಆಗಿವೆ. ಆದಾಗ್ಯೂ ಪಿಎಂ ಕೇರ್ಸ್ ನಿಧಿಯನ್ನು ಸೃಷ್ಟಿಸಲಾಗಿತ್ತು.

2019, ಡಿಸೆಂಬರ್‌ಗೆ ಇದ್ದಂತೆ ಪಿಎಂಎನ್‌ಆರ್‌ಎಫ್‌ನಲ್ಲಿ 3,800 ಕೋ.ರೂ.ಗಳು ಬಳಕೆಯಾಗದೆ ಉಳಿದುಕೊಂಡಿದ್ದವು. ಪಿಎಂಎನ್‌ಆರ್‌ಎಫ್ ಅಸ್ತಿತ್ವದಲ್ಲಿರುವಾಗ ಪಿಎಂ ಕೇರ್ಸ್ ನಿಧಿಯ ಸ್ಥಾಪನೆಯನ್ನು ಪ್ರತಿಪಕ್ಷಗಳ ನಾಯಕರು ಪ್ರಶ್ನಿಸಿದ್ದಾರೆ.

 ಮತ್ತೊಂದೆಡೆ ಪಿಎಂ ಕೇರ್ಸ್ ನಿಧಿಯ ಸುತ್ತ ನಿಗೂಢತೆ ಆವರಿಸಿದೆ. ದೇಣಿಗೆಗಳ ವಿವರಗಳು ಮತ್ತು ಮೂಲಗಳನ್ನು ಸರಕಾರವು ಬಹಿರಂಗಗೊಳಿಸಿಲ್ಲ. ಪಿಎಂ ಕೇರ್ಸ್ ನಿಧಿಗೆ 'ಸ್ವತಂತ್ರ ಟ್ರಸ್ಟ್'ನ ಮುಖವಾಡವನ್ನು ಹೊದಿಸಿರುವ ಸರಕಾರವು ಅದು ಸಿಎಜಿ ಪರಿಶೀಲನೆಗೆ ಒಳಪಡಬೇಕಿಲ್ಲ ಮತ್ತು ಆರ್‌ಟಿಐ ಕಾಯ್ದೆಯಡಿ ವಿನಾಯಿತಿಯನ್ನು ಹೊಂದಿದೆ ಎಂದು ಪ್ರತಿಪಾದಿಸುತ್ತಿದೆ.

ವೆಂಟಿಲೇಟರ್‌ಗಳ ಖರೀದಿಗೆ, ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಮತ್ತು ಲಸಿಕೆ ಅಭಿವೃದ್ಧಿಗಾಗಿ 3,100 ಕೋ.ರೂ.ಗಳ ಹಂಚಿಕೆಯನ್ನು ಪಿಎಂ ಕೇರ್ಸ್ ನಿಧಿಯ ವೆಬ್‌ಸೈಟ್ ತೋರಿಸುತ್ತಿದೆ. ಅಧಿಕಾರಿಗಳು ನಿಧಿಯ ಕುರಿತು ಮಾಹಿತಿಯನ್ನು ಆಗಾಗ ತುಣುಕುಗಳ ರೂಪದಲ್ಲಿ ಬಹಿರಂಗಗೊಳಿಸಿದ್ದರೂ,ಕಳೆದೊಂದು ವರ್ಷದಿಂದ ವಿವರಗಳನ್ನು ಅಪ್‌ಡೇಟ್ ಮಾಡಲಾಗಿಲ್ಲ.

 ಉದಾಹರಣೆಗೆ ಪಿಎಂ ಕೇರ್ಸ್ ನಿಧಿಯಿಂದ 2,200 ಕೋ.ರೂ.ಗಳನ್ನು ಲಸಿಕೆಗಳ ವೆಚ್ಚವನ್ನು ಭರಿಸಲು ಬಳಸಲಾಗುತ್ತಿದೆ ಎಂದು ಫೆ.2ರಂದು ಭಾರತದ ವೆಚ್ಚ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಹೇಳಿದ್ದರು. ಈ ಮೊತ್ತವು ಮೊದಲ ಹಂತದ ಲಸಿಕೆ ಕಾರ್ಯಕ್ರಮದ ಶೇ.80ರಷ್ಟು ವೆಚ್ಚವನ್ನು ಸರಿದೂಗಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಲಸಿಕೆ ಬಜೆಟ್
ಫೆಬ್ರವರಿಯಲ್ಲಿ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಗಡಪತ್ರದಲ್ಲಿ 35,000 ಕೋ.ರೂ.ಗಳನ್ನು ಕೋವಿಡ್ ಲಸಿಕೆಗಾಗಿ ಮೀಸಲಿರಿಸಿದ್ದರು. ಅಗತ್ಯವಾದರೆ ಇನ್ನಷ್ಟು ಹಣಕಾಸನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರಾದರೂ,ಇದಕ್ಕಾಗಿ ಸರಕಾರವು ಸಾಲ ಪಡೆಯಲಿದೆಯೇ ಎನ್ನುವುದನ್ನು ನಿರ್ದಿಷ್ಟ ಪಡಿಸಿರಲಿಲ್ಲ.

ಆದಾಗ್ಯೂ ಲಸಿಕೆ ಖರೀದಿಗಾಗಿ ಸರಕಾರದ ವೆಚ್ಚ ಮತ್ತು ಲಸಿಕೆ ಅಭಿವರ್ಧಕರಿಗೆ ಅದರ ಅನುದಾನಗಳು ವಿರಳ ಮತ್ತು ಅಪಾರದರ್ಶಕವಾಗಿವೆ. ಸರ್ವೋಚ್ಚ ನ್ಯಾಯಾಲಯವು ಸರಕಾರದ ನೀತಿಯನ್ನು ನಿರಂಕುಶ ಎಂದು ಬಣ್ಣಿಸಿತ್ತು ಮತ್ತು ಸ್ಪಷ್ಟನೆಯನ್ನು ಕೇಳಿತ್ತು.
ಲಸಿಕೆಗಾಗಿ ಹಂಚಿಕೆ ಮಾಡಲಾಗಿದ್ದ ಮೊತ್ತದಲ್ಲಿ 4,489 ಕೋ.ರೂ.ಗಳನ್ನು ತಾನು ವೆಚ್ಚ ಮಾಡಿದ್ದು,ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಕಳೆದ ಜೂನ್‌ನಲ್ಲಿ ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರದಲ್ಲಿ ಸರಕಾರವು ತಿಳಿಸಿತ್ತು.

ಆದರೆ ವಿದೇಶಿ ಸಾಲಗಳು ಇತರ ಪರಿಣಾಮಗಳನ್ನೂ ಹೊಂದಿವೆ. ವಿದೇಶಿ ಸಾಲಗಳಲ್ಲಿ ಸುಮಾರು ಎರಡು ಶತಕೋಟಿ ಡಾ.ಗಳ ಏರಿಕೆಯು ಭಾರತದ ಸಾಲ-ಜಿಡಿಪಿ ಅನುಪಾತವನ್ನು ಹೆಚ್ಚಿಸುತ್ತದೆ. ಸಾಲ ಪಡೆಯುವಿಕೆ ಇದೇ ಗತಿಯಲ್ಲಿ ಮುಂದುವರಿದರೆ ಭಾರತದ ಸಾಲವು ಅದರ ಜಿಡಿಪಿಯ ಶೇ.90ನ್ನು ಮೀರಲಿದೆ ಎಂದು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಯು ತನ್ನ ವರದಿಯಲ್ಲಿ ಅಂದಾಜಿಸಿದೆ.

ಕೃಪೆ: Scroll.in 

quartz.com

Writer - ಮಾನವಿ ಕಪೂರ್

contributor

Editor - ಮಾನವಿ ಕಪೂರ್

contributor

Similar News