ಮಸೀದಿಯಲ್ಲಿ ಕಳ್ಳತನ: ವಿರಾಜಪೇಟೆ ಪೊಲೀಸರಿಂದ ಆರೋಪಿಯ ಬಂಧನ
ಮಡಿಕೇರಿ: ಮಸೀದಿಯ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ ಆರೋಪದಡಿ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ವಿರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ವೀರಾಜಪೇಟೆಯ ಸುಣ್ಣದ ಬೀದಿ ನಿವಾಸಿ ಮುಹಮ್ಮದ್ ಶೊಯೆಬ್(28) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಅ.22ರಂದು ವಿರಾಜಪೇಟೆ ನಗರದ ನೆಹರು ನಗರ ನೂರುಲ್ ಇಸ್ಲಾಂ ದರ್ಗಾ ಮತ್ತು ಮಸೀದಿಯ ಹುಂಡಿಯಲ್ಲಿದ್ದ ಸುಮಾರು 10 ಸಾವಿರ ರೂ. ನಗದು ಕಳ್ಳತನವಾಗಿತ್ತು. ಅ.23ರಂದು ಮಸೀದಿಯ ಕಾರ್ಯದರ್ಶಿ ಶಿಯಾಬ್ ಸಿ.ಎಂ ಎಂಬವರು ಬೆಳಗ್ಗೆ ಎಂದಿನಂತೆ ಮಸೀದಿಗೆ ಬಂದಾಗ ಹುಂಡಿಯ ಬೀಗ ಮುರಿದು ನಗದು ದೋಚಿರುವುದು ಕಂಡು ಬಂತು. ಈ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನ.5ರಂದು ಮುಂಜಾನೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಶೊಯೆಬ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬಯಲಾಗಿದೆ. ತನಿಖೆಯ ಸಂದರ್ಭ ಆರೋಪಿ ಶೊಯೆಬ್ ಮೈಸೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಸೀದಿಯಲ್ಲಿರುವ ಎಂಪ್ಲಿಪ್ಲೇಯರ್ಗಳ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೊಯೆಬ್ ಬಳಿಯಿಂದ ಮೊಬೈಲ್ ಫೋನ್ ಮತ್ತು ನಗದನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.
ವಿರಾಜಪೇಟೆ ಡಿವೈಎಸ್ಪಿ ಸಿ.ಟಿ. ಜಯಕುಮಾರ್, ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ್ ಅವರುಗಳ ಮಾರ್ಗದರ್ಶನದಲ್ಲಿ ವಿರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕರಾದ ಹೆಚ್.ಎಸ್. ಬೋಜಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿ.ಯು. ಮುನೀರ್, ಮುಸ್ತಾಫ, ಗೀರಿಶ್, ಮಧು, ರಜನ್ ಕುಮಾರ್, ಜಿಲ್ಲಾ ಸಿ.ಡಿ.ಆರ್. ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.