ಚೆನ್ನೈ: ಧಾರಾಕಾರ ಮಳೆಯ ನಡುವೆ ಪ್ರಜ್ಞೆ ಕಳೆದುಕೊಂಡಿದ್ದ ವ್ಯಕ್ತಿಯನ್ನು ಹೆಗಲಲ್ಲಿ ಹೊತ್ತುಕೊಂಡು ಬಂದ ಮಹಿಳಾ ಪೊಲೀಸ್‌

Update: 2021-11-11 13:56 GMT
photo: videograb

ಚೆನ್ನೈ: ಚೆನ್ನೈನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಎಡಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕಳುಹಿಸಿದ ವಿಡಿಯೋ ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಮಾಜಿಕ ತಾಣ ಬಳಕೆದಾರರು ಈ ನಡೆಯ ಬಗ್ಗರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಟಿ.ಪಿ ಛತ್ರಂ ಠಾಣೆಯ ಇನ್‌ ಸ್ಪೆಕ್ಟರ್‌ ಇ. ರಾಜೇಶ್ವರಿ ನಿತ್ಯ ಗಸ್ತು ಕರ್ತವ್ಯದಲ್ಲಿದ್ದರು. ಬೆಳಗ್ಗೆ 8:30ರ ಸುಮಾರಿಗೆ ಸ್ಮಶಾನದ ಬಳಿ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಅವರಿಗೆ ತಿಳಿದು ಬಂತು. ತಕ್ಷಣ ಅಲ್ಲಿಗೆ ತೆರಳಿದ ಇನ್ಸ್‌ ಪೆಕ್ಟರ್‌ ರಾಜೇಶ್ವರಿ ಆತನನ್ನು ಹೆಗಲ ಮೇಲೆ ಹೊತ್ತುಕೊಂಡರು. 

ಕೂಡಲೇ ಚಿಕಿತ್ಸೆಗಾಗಿ ಆ ವ್ಯಕ್ತಿಯನ್ನು ಆಟೋದಲ್ಲಿ ಸಮೀಪದ ಆಸ್ಪತ್ರೆಗೆ ಕಳುಹಿಸಲಾಯಿತು. "ಆ ವ್ಯಕ್ತಿಯನ್ನು ಹೇಗಾದರೂ ಉಳಿಸಿ" ಎಂದು ಮಹಿಳಾ ಪೊಲೀಸ್‌ ರಾಜೇಶ್ವರಿ ಆಟೋ ಚಾಲಕ ಹಾಗೂ ಇನ್ನಿತರರಲ್ಲಿ ವಿನಂತಿಸುವುದೂ ವೀಡಿಯೋದಲ್ಲಿ ದಾಖಲಾಗಿದೆ. ಪೊಲೀಸರ ಪ್ರಕಾರ, ವ್ಯಕ್ತಿಯನ್ನು ಉದಯಕುಮಾರ್ (28) ಎಂದು ಗುರುತಿಸಲಾಗಿದೆ, ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ ಈತ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ. ವಿಡಿಯೋ ಹೊರಬೀಳುತ್ತಿದ್ದಂತೆ ರಾಜೇಶ್ವರಿ ಅವರ ಸಮಯೋಚಿತ ಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ನಡುವೆ indianexpress.com ಜೊತೆ ಮಾತನಾಡಿದ ರಾಜೇಶ್ವರಿ, "ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ಯಾವುದೇ ಪ್ರತಿಫಲವನ್ನೂ ನಾನು ನಿರೀಕ್ಷಿಸುತ್ತಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News