ಅಂಬೇಡ್ಕರ್‌ರನ್ನು ಜಾತಿಗೆ ಸೀಮಿತರಾಗಿಸುವವರು...

Update: 2021-11-18 19:30 GMT

‘‘ಆರ್ಥಿಕ ನೆಲೆಯಲ್ಲಿ ಮೀಸಲಾತಿ’’ ಎಂಬ ದನಿಗಳನ್ನು ಮೆಟ್ಟಿ ನಿಂತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಎಂಬ ನಿಲುವಿನಲ್ಲಿ ಗಟ್ಟಿಯಾಗಿ ನಿಂತವರು ಅಂಬೇಡ್ಕರ್.

ಬಾಬಾಸಾಹೇಬ ಅಂಬೇಡ್ಕರ್ ಅವರು ಕೇವಲ ರಾಜಕೀಯ ನಾಯಕರಲ್ಲ, ದಮನಿತರ ಹಕ್ಕುಗಳಿಗಾಗಿ ಹೋರಾಡಿ ದನಿಯಿಲ್ಲದ ಜನರ ನಾಯಕರಾಗಿದ್ದವರು. ಅವರು ನಿಜವಾದ ಅರ್ಥಶಾಸ್ತ್ರಜ್ಞ, ನ್ಯಾಯಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾಗಿದ್ದರು.

ಆದರೆ ನಾವು ಅವರನ್ನು ಈಗ ಜಾತಿ ನಾಯಕರನ್ನಾಗಿ ಸೀಮಿತಗೊಳಿಸುತ್ತಿದ್ದೇವೆ, ಅವಮಾನಿಸುತ್ತಿದ್ದೇವೆ. ಅವರ ವಿಗ್ರಹಗಳು ಭಗ್ನವಾಗುತ್ತಿವೆ. ಶಿಕ್ಷಣತಜ್ಞರಾದ ಅವರ ಹೆಸರನ್ನು ಶಿಕ್ಷಣ ಸಂಸ್ಥೆಗಳಿಗೆ ಇಡಬಾರದು ಎಂದು ಹೋರಾಟಗಳು ನಡೆಯುತ್ತಿವೆ. ಸಮಸ್ತ ಜನತೆಗೆ ವಿಮೋಚನೆಯ ಚಿಂತನೆ ನಡೆಸಿದ ಆ ವ್ಯಕ್ತಿಯ ಪ್ರತಿಮೆಗಳನ್ನು ಜೈಲಿನಲ್ಲಿಟ್ಟಿದ್ದೇವೆ. ಇದು ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಲ್ಲ. ಸೂರ್ಯನ ಕಡೆಗೆ ಮರಳನ್ನು ಎಸೆಯಲಾಗುವುದಿಲ್ಲ. ಸತ್ಯವೆಂದರೆ ನಾವು ನಮ್ಮನ್ನು, ನಮ್ಮ ಮೌಲ್ಯಗಳನ್ನು, ನಮ್ಮ ಯೋಗ್ಯತೆಯನ್ನು, ನಮ್ಮ ಸಮುದಾಯವನ್ನು ಅವಮಾನಿಸುತ್ತಿದ್ದೇವೆ.

ತಾವು ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಕಾರಣಗಳನ್ನು ನೀಡುವಾಗ ಬಾಬಾಸಾಹೇಬ ಅಂಬೇಡ್ಕರ್ ಅವರು ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಿ ಒಂದು ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು. ಅವರು ಮಂಡಿಸಿದ ಹಿಂದೂ ಮಸೂದೆಯನ್ನು ಸನಾತನಿಗಳು ಅಂಗೀಕರಿಸದಿದ್ದಾಗ ಅವರು ತಮ್ಮ ಸಚಿವ ಸ್ಥಾನದಿಂದ ಹೊರಬಂದರು. ಮಹಿಳೆಯರಿಗೆ ಆಸ್ತಿ ಹಕ್ಕು ಮತ್ತು ಮಹಿಳೆಯರ ವಿಚ್ಛೇದನ ಹಕ್ಕುಗಳು ಈ ಮಸೂದೆಯ ಪ್ರಮುಖ ಅಂಶಗಳಾಗಿತ್ತು. ಅಂಬೇಡ್ಕರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಪುರುಷರಿಗೆ ಸಮಾನವಾದ ಹಕ್ಕುಗಳು ಮಹಿಳೆಯರಿಗೂ ಸಿಗಬೇಕು ಎಂದು ವಾದಿಸಿದ್ದನ್ನು ಈ ದೇಶದ ಎಲ್ಲಾ ವರ್ಗದ ಮಹಿಳೆಯರು ಅರಿಯಬೇಕು.

ಬಾಬಾಸಾಹೇಬ ಅಂಬೇಡ್ಕರ್ ಅವರು ಕಾರ್ಮಿಕರಿಗೆ ಎಂಟು ಗಂಟೆಗಳ ಕೆಲಸದ ಸಮಯವನ್ನು ಕಾನೂನುಬದ್ಧಗೊಳಿಸಿದರು. ಆದರೆ ಜಾತಿಯ ಆಧಾರದ ಮೇಲೆ ಸಂಘಗಳನ್ನು ಕಟ್ಟುವವರಿಗೆ ಬಾಬಾಸಾಹೇಬ ಅಂಬೇಡ್ಕರ್ ಅವರು ಅರ್ಥವಾಗುತ್ತಿಲ್ಲ. ಇಂದು ಕಾರ್ಮಿಕ ಹಕ್ಕುಗಳ ಕಾನೂನುಗಳು ನೀರು ಪಾಲಾಗುತ್ತಿವೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮುಂದಾಲೋಚನೆಯಿಂದ ರಚಿಸಲಾದ ರಿಸರ್ವ್ ಬ್ಯಾಂಕ್‌ನಂತಹ ಸ್ವತಂತ್ರ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ಅವರು ಇಡೀ ಭಾರತೀಯ ಜನತೆಯ ಭವಿಷ್ಯದ ಬಗ್ಗೆ ಯೋಚಿಸಿದ ನಾಯಕರಾಗಿದ್ದರು. ಸದಾ ಅವಮಾನಕ್ಕೊಳಗಾಗಿಯೇ ಬೆಳೆದ ಅವರು ಶಾಲೆಯಿಂದ ಸಂಸತ್ತಿನವರೆಗೆ ಅವಮಾನಗಳನ್ನು ಎದುರಿಸಿದವರು. ಈಗ ಅವರು ಮರಣದ ನಂತರವೂ ಅವಮಾನಕ್ಕೊಳಗಾಗುತ್ತಿದ್ದಾರೆ. ಅವರಿಗೆ ಆಗಬಹುದಾದ ಅತಿ ದೊಡ್ಡ ಅವಮಾನವೆಂದರೆ ಅವರನ್ನು ಜಾತಿ ನಾಯಕ ಎಂದು ಬಿಂಬಿಸುವುದು.
1916ರಲ್ಲೇ ತಮ್ಮ ಮೊದಲ ಪುಸ್ತಕ ‘ಕ್ಯಾಸ್ಟ್ಸ್ ಇನ್ ಇಂಡಿಯಾ’ದಲ್ಲಿ ಜಾತಿಗಳ ಉಗಮಕ್ಕೆ ಅಂತರ್ಜಾತಿ ವಿವಾಹವೇ ಕಾರಣ ಎಂಬುದನ್ನು ಎತ್ತಿ ಹಿಡಿದರು.

ಜಾತಿ ಶುದ್ಧತೆಯನ್ನು ಕಾಪಾಡುವ ಜವಾಬ್ದಾರಿ ಮಹಿಳೆಯರ ತಲೆಯ ಮೇಲೆ ಹೊರಿಸಲಾಗಿದೆ. ವಿಧವೆಯರು ಸದಾ ಕ್ರೌರ್ಯ, ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂದಿನ ದಿನಗಳಲ್ಲೂ ಮಹಿಳೆಯರು ಅಂತರ್ಜಾತಿ ವಿವಾಹವಾಗಲು, ಪತಿಯನ್ನು ಕಳೆದುಕೊಂಡ ವಿಧವೆಯು ಮರುಮದುವೆಯಾಗಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದರ ದುಷ್ಪರಿಣಾಮಗಳನ್ನು ಇಂದಿಗೂ ಅನುಭವಿಸುತ್ತಿರುವವರು ಜಾತಿ ಪರಿಶುದ್ಧತೆಯನ್ನು ‘ರಕ್ಷಿಸುವ’ ಕರ್ತವ್ಯವನ್ನು ಹೊತ್ತುಕೊಳ್ಳಬೇಕಾದ ದುಸ್ಥಿತಿಯಲ್ಲಿರುವ ಮಹಿಳೆಯರಾಗಿದ್ದಾರೆ.

ಬಾಬಾಸಾಹೇಬ ಅಂಬೇಡ್ಕರ್ ಅವರು ಅಸ್ಪೃಶ್ಯತೆಯನ್ನು ವೈಯಕ್ತಿಕ ದುರಂತವಾಗಿ ನೋಡಲಿಲ್ಲ. ಇಡೀ ಭಾರತೀಯ ದಲಿತ ಸಮುದಾಯ ಅವಮಾನವನ್ನು ಕಂಡಿತ್ತು. ಅವರು ಇತಿಹಾಸದಲ್ಲಿ ಅದಕ್ಕೆ ಕಾರಣಗಳನ್ನು ಹುಡುಕಿದರು. ಅಸ್ಪೃಶ್ಯರು ಯಾರು? ಸೂತ್ರಧಾರಿಗಳು ಯಾರು? ಗ್ರಂಥಗಳ ಮೂಲಕ ತಮ್ಮ ಸಂಶೋಧನಾ ಪಯಣವನ್ನು ಮುಂದುವರಿಸಿದರು. ‘‘ವಿಶ್ವ ಇತಿಹಾಸವು ವರ್ಗಗಳ ನಡುವಿನ ಹೋರಾಟ’’ ಎಂದು ತೀರ್ಮಾನಿಸಿದ ಕಾರ್ಲ್ ಮಾರ್ಕ್ಸ್‌ನಂತೆ, ಅವರು ಭಾರತೀಯ ಇತಿಹಾಸವು ಮತಿವಿಕಲ್ಪ ಮತ್ತು ಬೌದ್ಧಧರ್ಮದ ನಡುವಿನ ಹೋರಾಟವಾಗಿದೆ ಎಂದು ತೀರ್ಮಾನಿ ಸಿದರು. ಮನುಸ್ಮತಿಯಿಂದ ನೀಷೆವರೆಗೆ, ದಮ್ಮಪದದಿಂದ ಮಾರ್ಕ್ಸ್‌ವಾದ ದವರೆಗೆ ಅಧ್ಯಯನ ಮಾಡಿದ ಬಾಬಾಸಾಹೇಬ ಅಂಬೇಡ್ಕರ್‌ರವರು ಭಾರತ ಆಧುನಿಕತೆಗೆ ಹೊಂದಿಕೆಯಾಗದಿರಲು ಜಾತಿಯೇ ಕಾರಣ ಎಂದು ವಿವರಿಸಿದರು.

ನಮ್ಮ ಬಟ್ಟೆಗಳು ಬದಲಾಗಿವೆೆ; ಅಭ್ಯಾಸಗಳು ಬದಲಾಗಿವೆ; ಉಪಕರಣಗಳು ಬದಲಾಗಿವೆ; ತಂತ್ರಜ್ಞಾನಗಳು ಬದಲಾಗಿವೆ. ಆದರೆ ಶತಮಾನಗಳು ಕಳೆದರೂ ಪ್ಲೇಗ್ ತರಹದ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೊರೋನದಿಂದ ತಾತ್ಕಾಲಿಕವಾಗಿ ಅಸ್ಪೃಶ್ಯರಾಗಿದ್ದರೂ ಶಾಶ್ವತ ಅಸ್ಪೃಶ್ಯತೆಗೆ ಕಾರಣವಾಗಿರುವ ಜಾತಿ ಮನಸ್ಥಿತಿ ಇನ್ನೂ ಬದಲಾಗುವ ಲಕ್ಷಣ ಕಾಣುತ್ತಿಲ್ಲ

Writer - ರಾಣಪ್ಪ ಡಿ. ಪಾಳಾ, ಕಲಬುರಗಿ

contributor

Editor - ರಾಣಪ್ಪ ಡಿ. ಪಾಳಾ, ಕಲಬುರಗಿ

contributor

Similar News