ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ-ಲಿಖಿತ ಸಂವಿಧಾನ: ಬಸವರಾಜ ಹೊರಟ್ಟಿ

Update: 2021-11-26 18:29 GMT

ಬೆಂಗಳೂರು, ನ. 26: ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಲಿಖಿತ ಸಂವಿಧಾನ ನಮ್ಮದಾಗಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರಚಿತವಾಗಿರುವ ನಮ್ಮ ಹೆಮ್ಮೆಯ ಸಂವಿಧಾನದಲ್ಲಿ ಎಲ್ಲ ಜಾತಿ, ಮತ, ಪಂಥ ಹಾಗೂ ವರ್ಗಗಳಿಗೆ ಸೇರಿದ ಜನರ ಹಿತವಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ, ಸಂವಿಧಾನ ದಿವಸ ಆಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತಾಡಿದ ಅವರು, 1949ರ ನ.26 ರಂದು ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದಿನ ದಿನ ನಮ್ಮೆಲ್ಲರಿಗೂ ಅತ್ಯಂತ ಅವಿಸ್ಮರಣೀಯ. ಪ್ರತಿವರ್ಷ ನ.26ರಂದು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ದೇಶದ ಪ್ರಜಾಪ್ರಭುತ್ವದ ಭದ್ರ ಬುನಾದಿಯೇ ನಮ್ಮ ಸಂವಿಧಾನ ಎಂಬುದು ಅತ್ಯಂತ ಗೌರವ ಮತ್ತು ಹೆಮ್ಮೆಯ ಸಂಗತಿಯಾಗಿದೆ. ಹಲವು ವೈಶಿಷ್ಟ್ಯತೆಯನ್ನು ಹೊಂದಿರುವ ನಮ್ಮ ಸಂವಿಧಾನ ನಮ್ಮೆಲ್ಲಾ ನಾಗರಿಕರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆಯ ಅವಕಾಶ ನೀಡಿ, ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಇಂತಹ ಸಂವಿಧಾನದ ಮಹತ್ವದ ಬಗ್ಗೆ ದೇಶದ ಎಲ್ಲ ನಾಗರಿಕರಲ್ಲಿ ಅರಿವು ಮೂಡಿಸಿ ಸಂವಿಧಾನದ ಬಗ್ಗೆ ಗೌರವ ಮೂಡಿಸುವುದರ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಸಂವಿಧಾನ ದಿನಾಚರಣೆಯ ಮೂಲ ಉದ್ದೇಶವಾಗಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರೇ ಹೇಳಿರುವಂತೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ನಾನು ಇಷ್ಟ ಪಡುತ್ತೇನೆ. ನಾವೆಲ್ಲರೂ ನಮ್ಮ ಸ್ವಂತ ಬಲದಿಂದ ಗಟ್ಟಿಯಾಗಿ ನಿಲ್ಲಬೇಕು ಮತ್ತು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ಎಲ್ಲ್ಲ ಧರ್ಮಗ್ರಂಥಗಳು ಆಯಾಯ ಧರ್ಮದ ಜನರು ಹೇಗೆ ಜೀವನ ಸಾಗಿಸಬೇಕು ಎಂದು ತಿಳಿಸಿದರೆ, ಭಾರತ ಸಂವಿಧಾನವು ಎಲ್ಲ ಧರ್ಮೀಯರು ಯಾವ ರೀತಿ ಅತ್ಯುತ್ತಮ ಜೀವನ ನಡೆಸಬೇಕು ಎಂಬುದನ್ನು ತಿಳಿಸುತ್ತದೆ. ಸಂವಿಧಾನವನ್ನು ಬೆರಳಚ್ಚು ಅಥವಾ ಮುದ್ರಣ ಮಾಡದೇ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಕೈ ಬರಹದ ರೂಪದಲ್ಲಿದೆ. ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷವಾಗಿ ಹೀಲಿಯಂ ತುಂಬಿದ ಕವಚಗಳಲ್ಲಿ ಸಂರಕ್ಷಿಸಲಾಗಿದ್ದು, ಅದನ್ನು ಭಾರತದ ಸಂಸತ್ ಭವನದ ಗ್ರಂಥಾಲಯದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.

ಸಂವಿಧಾನವು 448 ವಿಧಿಗಳು 25 ಭಾಗಗಳು, 12  ಶೆಡ್ಯೂಲ್ 5 ಅನುಬಂಧಗಳು ಹಾಗೂ 98 ತಿದ್ದುಪಡಿಗಳನ್ನು ಒಳಗೊಂಡಿದೆ. ಶ್ರೇಷ್ಠ ಸಂವಿಧಾನ ಹೊಂದಿರುವ ನಾವೆಲ್ಲರೂ ಧನ್ಯತಾ ಭಾವದಿಂದ ಸಂವಿಧಾನದ ಮೂಲ ಆಶಯಗಳಿಗೆ ಅನುಗುಣವಾಗಿ ನಮ್ಮ ಬದುಕನ್ನು ಆದರ್ಶವಾಗಿರಿಸಿಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕು ಎಂದ ಅವರು, ಇಂದಿನ ಯುವಜನತೆಗೆ ನಮ್ಮ ಸಂವಿಧಾನದ ಶ್ರೇಷ್ಠತೆ ಮತ್ತು ಉದಾತ್ತತೆ ಕುರಿತು ಅರಿವು ಮೂಡಿಸಿ ದೇಶದ ಬಗ್ಗೆ ಭಕ್ತಿ ಹಾಗೂ ಗೌರವಗಳನ್ನು ಬೆಳೆಸಬೇಕಿದೆ. ದೇಶ ಮೊದಲು ಎಂಬ ಮನೋಭಾವನೆಯು ಪ್ರತಿಯೊಬ್ಬರಲ್ಲೂ ಜಾಗೃತಗೊಂಡು ದೇಶಕ್ಕಾಗಿ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡಬೇಕು ಎಂದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಹಿಂದೆ ಸಂವಿಧಾನ ರಚನಾ ದಿನವನ್ನು ರಾಷ್ಟ್ರೀಯ ಕಾನೂನು ದಿವಸ ಎಂದು ಆಚರಿಸಲಾಗುತ್ತಿತ್ತು. 2015ರ ಅಕ್ಟೋಬರ್ 11ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕಕ್ಕೆ ಮುಂಬೈನಲ್ಲಿ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ನ.26ರಂದು ಪ್ರತಿವರ್ಷ ಸಂವಿಧಾನ ದಿವಸವನ್ನಾಗಿ ಆಚರಿಸಲು ಘೋಷಣೆ ಮಾಡಿದರು. ಈ ಹಿನ್ನೆಲೆಯಲ್ಲಿ ನಾಡಿನ ಉದ್ದಗಲಕ್ಕೂ ಇದರ ಆಚರಣೆ ಮಾಡುತ್ತಿದ್ದು, ಜನರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ನುಡಿದರು.

ಅಂಬೇಡ್ಕರ್ ಅವರು ಸುದೀರ್ಘ ಕಾಲ ಚರ್ಚಿಸಿ, ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವರ ಬಾಲ್ಯದ ಅನುಭವಗಳಿಂದ ಜಗತ್ತು ಮೆಚ್ಚುವಂತೆ ಅತ್ಯಂತ ಶ್ರೇಷ್ಠ ಸಂವಿಧಾನ ರಚನೆ ಮಾಡಿದ್ದಾರೆ. ಶಾಸಕಾಂಗದವರು ಸಂವಿಧಾನದ ಅನುಷ್ಠಾನ ಮತ್ತು ಪರಿಣಾಮದ ಆತ್ಮಾವಲೋಕನ ಮಾಡಿಕೊಂಡು ಜನರ ಹಿತಕ್ಕಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಸಂವಿಧಾನದ ಆಶಯವನ್ನು ಈಡೇರಿಸಬೇಕು ಎಂದು ತಳಿಸಿದರು.

ನಿವೃತ್ತ ನ್ಯಾಯಮೂರ್ತಿ ಸುಭಷ್ ಆಡಿ ಮಾತನಾಡಿ, ಸಂವಿಧಾನದಲ್ಲಿ ನ್ಯಾಯಾಂಗ, ಕಾಯಾರ್ಂಗ, ಶಾಸಕಾಂಗ ಪ್ರಮುಖ ಅಂಗಗಳಾಗಿವೆ. ತಪ್ಪು ಮಾಡಿದಾಗ ಎಚ್ಚರಿಸುವ ಕೆಲಸವನ್ನು ಪತ್ರಿಕಾ ರಂಗವು ನಾಲ್ಕನೆ ರಂಗವಾಗಿ ಮಾಡುತ್ತಿದೆ. ಪ್ರತಿಯೊಬ್ಬ ನಾಗರಿಕರು ಅದರಲ್ಲೂ ಮುಖ್ಯವಾಗಿ ಸರಕಾರಿ ಕೆಲಸ ಮಾಡುವ ಅಧಿಕಾರಿಗಳು ಮೂಲಭೂತ ಹಕ್ಕು ಮತ್ತು ಜನಪರ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News