ಬೆಂಗಳೂರಿನಿಂದ ಬೆಳಗಾವಿಗೆ ಬಂದಿರುವ ಗೂಂಡಾ ಜನರಿಂದ ರಾಜಕೀಯ ಹಸ್ತಕ್ಷೇಪ: ರಮೇಶ್ ಜಾರಕಿಹೊಳಿ ಆರೋಪ

Update: 2021-12-02 18:40 GMT

ಬೆಳಗಾವಿ, ಡಿ.2: ಬೆಂಗಳೂರಿನಿಂದ ಬೆಳಗಾವಿಗೆ ಬಂದಿರುವ ಗೂಂಡಾ ಜನಗಳು ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಹಾಗೂ ತೊಂದರೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರ ಗೋಕಾಕ್ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಸಲ ವಿವೇಕರಾವ್ ಪಾಟೀಲ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು, ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದರು. ಹಿಂದುಳಿದ ಕುರುಬ ಸಮಾಜದ ನಾಯಕನಿಗೆ ಆ ಪಕ್ಷ ಮೋಸ ಮಾಡಿದೆ ಎಂದು ಆರೋಪಿಸಿದರು.

ಪಕ್ಷೇತರ ಅಭ್ಯರ್ಥಿಯನ್ನು ಏಕೆ ಕಣಕ್ಕಿಳಿಸಿದ್ದಿರಿ ಎಂಬ ಗೊಂದಲ ನಿಮಗಿರಬಹುದು. ವಿವೇಕರಾವ್‍ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರೆ ಲಖನ್ ಜಾರಕಿಹೊಳಿ ಕಣಕ್ಕಿಳಿಸುತ್ತಿರಲಿಲ್ಲ. ಕಾಂಗ್ರೆಸ್ ಸೋಲಿಸುವುದಕ್ಕಾಗಿಯೇ ನಿಲ್ಲಿಸಿದ್ದೇನೆ. ಈ ವಿಷಯವನ್ನು ವರಿಷ್ಠರಿಗೆ ಕೆಲ ತಿಂಗಳ ಹಿಂದೆಯೇ ಹೇಳಿದ್ದೆ ಎಂದರು.

ದುಡ್ಡಿನಿಂದ ರಾಜಕೀಯ ಮಾಡಲು ಸಾಧ್ಯವಿಲ್ಲ. ಹಣದ ಮೇಲೆ ಎಲ್ಲವೂ ನಡೆಯುತ್ತದೆ ಎನ್ನುವುದಾಗಿದ್ದರೆ ನಿತ್ಯವೂ ಒಬ್ಬೊಬ್ಬರು ಶಾಸಕರಾಗುತ್ತಿದ್ದರು ಎಂದು ಹೇಳಿದರು.

ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಗೆಲ್ಲಬೇಕು. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು 2024ಕ್ಕೆ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರಕಾರ ಬರಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಕುಟುಂಬದಲ್ಲಿ ಈಗಾಗಲೆ ಮೂವರು ಶಾಸಕರಿದ್ದೀರಿ. ನಾಲ್ಕನೆಯವರು ಬೇಕಾಗಿತ್ತಾ ಎಂದು ಕೇಳಬಹುದು. ಸ್ವಾರ್ಥವೇನಿಲ್ಲ. ಕಾಂಗ್ರೆಸ್ ಸೋಲಿಸಲು ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ. ವರಿಷ್ಠರಿಗೂ ತಿಳಿಸಿದ್ದೇನೆ ಎಂದರು.

ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಬಿಜೆಪಿಯವರಿಗೆ ನಾನು ಹೇಳಿಲ್ಲ. ಈ ರೀತಿ ಹೇಳಿದ್ದರೆ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದರು.

ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮಾತನಾಡಿದರು. ಮುಖಂಡರಾದ ಮನೋಹರ ಕಡೋಲ್ಕರ್, ಕಿರಣ ಜಾಧವ್, ಧನಂಜಯ ಜಾಧವ್, ಯುವರಾಜ ಜಾಧವ್ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News